ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, January 9, 2017

ಹೊಣೆಯರಿತ ನಾಗರಿಕರಿಂದ - ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

ಹೊಣೆಯರಿತ ನಾಗರಿಕರಿಂದ:
ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಈ  ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಮಾಧ್ಯಮಗಳ ವರದಿಯ ಪ್ರಕಾರ, ಘನವೆತ್ತ ಕರ್ನಾಟಕ ಸರಕಾರ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೊಸ  ಪಠ್ಯಪುಸ್ತಕಗಳನ್ನು ೨೦೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಪಠ್ಯಕ್ರಮ ಬಹಳಷ್ಟು ವಿಕೃತ ಮತ್ತು  ತಪ್ಪುಮಾಹಿತಿಗಳನ್ನು ಒಳಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ.
ಘನವೆತ್ತ ರಾಜ್ಯಸರ್ಕಾರ ಹಾಗು  ಪ್ರಾಥಮಿಕ ಶಿಕ್ಷಣ ವಿಭಾಗ ಪುಸ್ತಕಗಳ ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಪಾರದರ್ಶಕ ವಿಚಾರ ವಿನಿಮಯ ನಡೆಸಿಲ್ಲ. ಹೊಸ ಪುಸ್ತಕ ರಚನೆಗೆ,ಬೇರೆ ಬೇರೆ ವಿಷಯದಲ್ಲಿ ರಚನೆಯಾದ ಸಮಿತಿಗಳಿಗೆ ತಮ್ಮ ಅಂತಿಮ ಕರಡನ್ನು ಸಲ್ಲಿಸಲು  ೧೫ ಜನವರಿ ೨೦೧೭ ಕೊನೆಯದಿನವಾದರೂ, ಬೇರೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳದೆ ಸರಕಾರ ಈ ಪಠ್ಯಗಳನ್ನು ನಿಗೂಢರೀತಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಪ್ರಕಟಿಸಲು ಹೊರಟಿದೆ.
ಈ ಪಠ್ಯಪುಸ್ತಕ ಬದಲಾವಣೆಯ ವಿಚಾರದಲ್ಲಿ ಸರಕಾರದ ಮತ್ತು ಪಠ್ಯಪುಸ್ತಕ ಸಮಿತಿಯ ನಡವಳಿಕೆ ಮತ್ತು ನಿಗೂಢತೆ, ಮುಂದಿನ ಪೀಳಿಗೆಗಳ ಮಧ್ಯೆ ವೈಷಮ್ಯ ಮತ್ತು ಅಸಮಾನತೆಯ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂಬ ಸಂಶಯ ಮೂಡುತ್ತದೆ.
ನಮ್ಮ ಮಕ್ಕಳ ಹಾಗು ಅವರ ಪೀಳಿಗೆಯ/ಗಳ ಭವಿಷ್ಯದ ಕಾಳಜಿಯಿಂದ, ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಕರ್ನಾಟಕದ ಘನವೆತ್ತ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧರಾಮಯ್ಯ ಅವರಿಂದ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆಗ್ರಹಪೂರ್ವಕವಾಗಿ ಕೇಳುತ್ತಿದ್ದೇವೆ.
. ೨೦೧೭ರಲ್ಲಿ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶೈಕ್ಷಣಿಕ ಕಾರ್ಯನೀತಿಯನ್ನು ಜಾರಿಗೆ ಸೂಚನೆ ಇದ್ದರೂ, ಯಾಕೆ ರಾಜ್ಯ ಸರಕಾರ ಈ ಹೊಸ ಪಠ್ಯಪುಸ್ತಕವನ್ನು ಪ್ರಕಟಿಸಲು ಅವಸರಿಸುತ್ತಿದೆ? ಒಮ್ಮೆ ಪಠ್ಯಪುಸ್ತಕವನ್ನು ಬದಲಾಯಿಸಿ ಪ್ರಕಟಿಸಿದರೆ, ಮುಂದಿನ ಕೆಲವು ವರ್ಷಗಳ ಕಾಲ ಹೊಸ ಪಠ್ಯಪುಸ್ತಕ ತರುವುದುದು ಬೇರೆ ಬೇರೆ ಕಾರಣಗಳಿಗಾಗಿ ಕಷ್ಟ ಎಂಬ ಅರಿವು ಸರಕಾರಕ್ಕೆ ಇಲ್ಲವೇ ಅಥವಾ ಅರಿವಿದ್ದು ಪ್ರಕಟಿಸುವ ಧ್ರಾಷ್ಟವೇ?
೨. ೨೦೧೭ರಲ್ಲಿ, ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ೨೦೦೫ರ (NCF ೨೦೦೫)ರ ಪ್ರಕಾರ ಪಠ್ಯಕ್ರಮವನ್ನು ತಯಾರಿಸಿರುವುದು ಪಠ್ಯಕ್ರಮದ ಗುಣಮಟ್ಟದ ಬಗ್ಗೆ ಸಂಶಯ ಮೂಡುವುದಿಲ್ಲವೇ?
೩. ಪಠ್ಯ ಪುಸ್ತಕಗಳ ವಿಷಯ ತಜ್ಞರು ವಿಷಯ ಸಂಭಂದಿತ ವರದಿಯನ್ನು ಮತ್ತು ಅದರ ವಿಮರ್ಶೆಯ ವರದಿಯನ್ನು ನೀಡದಿದ್ದರೂ, ಹೊಸ ಪಠ್ಯ ಪುಸ್ತಕಗಳನ್ನು ೨೦೧೭ರ ಶೈಕ್ಷಣಿಕ ವರ್ಷಕ್ಕೆ ಪ್ರಕಟಿಸುವ ತುರ್ತು ಯಾಕೆ.
೪. ಪಠ್ಯಕ್ರಮ ಬದಲಾವಣೆಯ ವಿಚಾರದಲ್ಲಿ ಸಂಭಂದಪಟ್ಟ ಎಲ್ಲಾ ವರ್ಗಗಳನ್ನು ಅಂದರೆ ಶೈಕ್ಷಣಿಕ ತಜ್ಞರನ್ನು, DSERT, DIETs, CTE, ಸಂಪನ್ಮೂಲ ವ್ಯಕ್ತಿಗಳನ್ನು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರ ವರ್ಗಗಳನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ?  ಈಗ ಪುಸ್ತಕವನ್ನು ಪ್ರಕಟ ಮಾಡಲು ಹೊರಟಿರುವ ತರಾತುರಿಯಲ್ಲಿ ಮೇಲ್ಕಂಡ ವರ್ಗಗಳ ಮರುಮಾಹಿತಿಯನ್ನು ಪಡೆಯಲು ಸಮಯ ಎಲ್ಲಿದೆ?
೫. ಹೊಸ ಪಠ್ಯ ಪುಸ್ತಕ ರಚನೆ ಮಾಡುವ ಬಗ್ಗೆ ರಾಜ್ಯ ಸರಕಾರ ಯಾಕೆ ನಿಗೂಢತೆಯನ್ನು ಕಾಪಾಡಿಕೊಂಡು ಬರುತ್ತಿದೆ? ಪಠ್ಯ ಪುಸ್ತಕದ ಯಾವ ಯಾವ ಭಾಗಗಳನ್ನು ಪುನರ್ವಿಮರ್ಶೆ, ಬದಲಾವಣೆ ಮಾಡಲಾಗಿದೆ ಹಾಗು ಯಾವ ಯಾವ ಭಾಗಗಳನ್ನು ತೆಗೆದು ಹಾಕಲಾಗಿದೆ? ಈ ವಿಚಾರಗಳ ಬಗ್ಗೆ ಯಾಕೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ?
೬. ಪಠ್ಯಪುಸ್ತಕದ ಶೇಕಡಾ ೨೦ರಷ್ಟು ಭಾಗಕ್ಕೆ ಕತ್ತರಿ ಹಾಕಿರುವುದು ನಿಜವೇ? ಈ ೨೦ ಶೇಕಡಾ ಕಡಿತ ಪಠ್ಯಪುಸ್ತಕಗಳ ಗುಣಮಟ್ಟವನ್ನು ಕಡಿಮೆ ಮಾಡಿಲ್ಲವೇ? ಇದು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕೆ, ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗವಾಕಾಶಗಳನ್ನು ಕುಂಠಿತಗೊಳಿಸುವುದಿಲ್ಲವೇ?
೭. ಹೊಸ ಶೈಕ್ಷಣಿಕ ವರ್ಷಕ್ಕೆ ೬ ತಿಂಗಳು ಉಳಿದಿರುವಂತೆ (ಅದರಲ್ಲಿ ಮೂರು ತಿಂಗಳು ಪರೀಕ್ಷಾ ತಯಾರಿ ಮತ್ತು ಫಲಿತಾಂಶ ಘೋಷಣೆಯಲ್ಲಿ ಕಳೆದು ಹೋಗುತ್ತದೆ) ಘನ  ಸರಕಾರ ಶಿಕ್ಷಕರಿಗೆ ಹೇಗೆ ಹೊಸ ಪಠ್ಯಕ್ರಮದ ತರಭೇತಿಯನ್ನು ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆಯಲ್ಲವೇ?
೮. ಮಾನ್ಯ ಮುಖ್ಯಮಂತ್ರಿಗಳು ಯಾಕೆ ಪ್ರಾಥಮಿಕ ಶಿಕ್ಷಣ ಸಚಿವ ಶ್ರೀ. ತನ್ವಿರ್ ಸೇಠ್ ಹಾಗು ಶಿಕ್ಷಣ  ಇಲಾಖೆಯ ಅಧಿಕಾರಿಗಳ ಸಲಹೆಯನ್ನು ತಿರಸ್ಕರಿಸುತ್ತಿದ್ದಾರೆ ? ಅವರು ಪಠ್ಯಪುಸ್ತಕದಲ್ಲಿ  ಯಾರ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ?
೯. ಬರಗೂರು ರಾಮಚಂದ್ರಪ್ಪ  ಅವರಂತಹ, ಎಡಪಂತೀಯ ಲೇಖಕರಿಗೆ ಶಿಕ್ಷಣ ನೀತಿ ಮತ್ತು ಪಠ್ಯ ಪುಸ್ತಕ ಬದಲಾವಣೆಯನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ. ಅವರನ್ನು  ಪಠ್ಯ ಪುಸ್ತಕ ಬದಲಾವಣೆಯ ಸಮಿತಿಗೆ ಆಯ್ಕೆ ಮಾಡಲು ಅವ್ರ ಅರ್ಹತೆ ಏನು?  ಇದರ ಹಿಂದಿರುವ ಕುತ್ಸಿತ ಚಿಂತನೆ ಏನು?
೧೦. ಇತಿಹಾಸ, ಗಣಿತ, ವಿಜ್ಞಾನ, ಸಮಾಜ ಶಾಸ್ತ ಹಾಗೂ ಭಾಷಾ ಪಠ್ಯಪುಸ್ತಕಗಳ ಬದಲಾವಣೆ ನಡೆಯುತ್ತಿರುವುದು, ಬರಗೂರು ರಾಮಚಂದ್ರಪ್ಪ ಈ ಬದಲಾವಣೆಗಳ ಹಿಂದಿರುವ ವ್ಯಕ್ತಿ ಎಂದಾದರೆ, ಯೋಜಿಸಲಾದ ಪಾಠಕ್ರಮ ಬದಲಾವಣೆ ಎಡಪಂತೀಯ ಚಿಂತನೆಗಳನ್ನು ಹಬ್ಬಿಸಿ, ನಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ, ಇತಿಹಾಸ ಮತ್ತು ಪರಂಪರೆಯ ಕುರಿತಾದ ಜ್ಞಾನವನ್ನು ಮತ್ತು ಪ್ರೀತಿಯನ್ನು ಕಮ್ಮಿ ಮಾಡುವ ಪ್ರಯತ್ನವೇ?
೧೧. ರಾಷ್ಟ್ರೀಯ ಮಟ್ಟದ ಪರೀಕ್ಷಗೆಳಲ್ಲಿ ಕನ್ನಡದ ಮಕ್ಕಳೇಕೆ ಹಿಂದೆ ಉಳಿಯುತ್ತಾರೆ ಎಂದು ಅಧ್ಯಯನ ನಡೆಸಿದ್ದ ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದ "ಕರ್ನಾಟಕ ಜ್ಞಾನ ಆಯೋಗ" ರಾಜ್ಯ ಸರ್ಕಾರಕ್ಕೆ 09,10,11,12 ತರಗತಿಯಲ್ಲಿ CBSEಯ ಪಠ್ಯ ಪುಸ್ತಕಗಳನ್ನೇ ಕನ್ನಡಕ್ಕೆ ಅನುವಾದಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತ್ತು ಮತ್ತು ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈಗ  ಇನ್ನೊಂದು ಪಠ್ಯಕ್ರಮ ತಂದು ರಾಜ್ಯದ  ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತೆ ಹಿಂದುಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಪೊಲಿಟಿಕಲ್ ಐಡಿಯಾಲಜಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುವುದಿಲ್ಲವೇ ?
೧೨. ಶಾಲೆಗಳು CBSE ಅಥವಾ ICSE  ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಅವಕಾಶ ಇದ್ದರೂ, ೭೫,೦೦೦ ಶಾಲೆಗಳು  ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅಳವಡಿಕೊಂಡಿವೆ. ಆದರೆ ಹಳೆಯ/ಔಟ್ ಡೇಟೆಡ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ  ಇಂತಹ ಹೀನ ಕ್ರಮದಿಂದ, ರಾಜ್ಯಸರಕಾರ CBSE ಅಥವಾ ICSE ವಿದ್ಯಾರ್ಥಿಗಳ ಮಧ್ಯೆ ಶೈಕ್ಷಣಿಕ ಅಸಮಾನತೆಯನ್ನು ತರಲು ಹೊರಟಿದೆಯೇ? ಈ ಮುಖೇನ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿಧ್ಯ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ನಾಶಮಾಡಲು ಹೊರಟಿದೆಯೆ ನಮ್ಮ ರಾಜ್ಯ ಸರಕಾರ?
೧೩. ಇದು ಹೊಸ ಪೀಳಿಗೆಯನ್ನು ಗುರಿಯಾಗಿಸಿ, ಹೊಸ ಸುಳ್ಳು ಹೋರಾಟಗಾರರನ್ನು ಸೃಷ್ಟಿ ಮಾಡುವ ಕುತಂತ್ರವೇ?
೧೪. ಶಿಕ್ಷಣದ ಗುಣಮಟ್ಟವನ್ನು ಕುಂಠಿತಗೊಳಿಸಿ, ಸರಕಾರೀ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆಯೇ ಈ ಸರಕಾರ?
ಶ್ರೀ. ಸಿದ್ದರಾಮಯ್ಯನವರ ಸರಕಾರದ ಕಳೆದ ನಾಲ್ಕು ವರ್ಷಗಳ "ಕಾರ್ಯಭಾರ"ವನ್ನು ನೋಡುವಾಗ, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚುನಾಯಿತ ಕ್ಯಾಬಿನೆಟ್ ಗಿಂತ ತಮ್ಮ ಎಡಪಂತೀಯ ಲೇಖಕರ ಕಿಚನ್ ಕ್ಯಾಬಿನೆಟ್ ಜೊತೆ ಕೆಲಸ ಮಾಡಿದ್ದೆ ಹೆಚ್ಚು. ಈ ಎಡಪಂತೀಯ ಕಿಚನ್ ಕ್ಯಾಬಿನೆಟ್ ಪ್ರಜಾಪ್ರಭುತ್ವವನ್ನು ನಾಶ ಮಾಡುವ, ಸಮಾಜವನ್ನು ವಿಘಟಿಸುವ, ಸುಳ್ಳು ಹೋರಾಟಗಾರರನ್ನು ಸೃಷ್ಟಿಸುವ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿ ಅವರುಗಳನ್ನು ಶೈಕ್ಷಣಿಕ ಮತ್ತು ಬೌದ್ಧಿಕ ವಲಯಗಳಲ್ಲಿ ಬ್ರೈನ್ ವಾಷ್ ಮಾಡಿ ಉಪಯೋಗಿಸುವ ಕೆಲಸವನ್ನು ಮಾಡಿ ದೇಶದ ಭವಿಷ್ಯವನ್ನು ದುರಂತದ ಎಡೆಗೆ ತಳ್ಳುವ ಕೆಲಸ ಮಾಡುತ್ತದೆ.

https://www.change.org/p/the-chief-minister-of-karnataka-stop-karnataka-congress-government-from-ruining-students-future

No comments:

Post a Comment