ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, June 28, 2014

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್ಲ ಇದ್ದದ್ದು ’ಪದ್ಯ’ಗಳ ಪೂರ್ಣಸಾಹಿತ್ಯ ಪ್ರಕಟಿಸುವುದಕ್ಕೆ. ಈ ಸಲ ಪದ್ಯ ಅಲ್ಲ, ಗದ್ಯ. ಅದೂ ಯಾವುದೆಂದರೆ ’ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂದು ಗದ್ಯವನ್ನು ಕೊಂಡಾಡುವ ಗದ್ಯ, ಅದೇ ಮುದ್ದಣ-ಮನೋರಮೆಯ ಜಗದ್ವಿಖ್ಯಾತ ಸರಸಸಲ್ಲಾಪ ಸಂಭಾಷಣೆ. ಹಳಗನ್ನಡದಲ್ಲಿರುವಂಥ ಗದ್ಯ. ಇದು, ನಮಗಿಂತ ಹಿಂದಿನ ಬ್ಯಾಚ್‌ನಲ್ಲಿ ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಮೊದಲನೆಯ ಪಾಠವಾಗಿತ್ತು. ಇದರಲ್ಲಿ ಬರುವ ಕೆಲವೆಲ್ಲ ವಾಕ್ಯಗಳು- "ಪದ್ಯಂ ವಧ್ಯಂ ಗದ್ಯಂ ಹೃದ್ಯಂ", "ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು", "ಕನ್ನಡ ಕತ್ತುರಿಯಲ್ತೆ." "ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ" ಮುಂತಾದುವು ನುಡಿಗಟ್ಟುಗಳಾಗಿ ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿವೆ. ವಿದ್ವತ್ಪೂರ್ಣ ಭಾಷಣಗಳನ್ನೂ ಲೇಖನಗಳನ್ನೂ ಮುತ್ತುಹವಳಗಳಂತೆ ಅಲಂಕರಿಸಿವೆ.

ಹಾಂ. ಹೇಳೋದೇ ಮರೆತೆ. ಈ ವಾರದ ಕೋರಿಕೆ ಸಲ್ಲಿಸಿದವರು ಬೆಂಗಳೂರಿನಿಂದ Jyothi Umesh. ಅವರು ತುಂಬಾ ಹಿಂದೆಯೇ ಒಮ್ಮೆ ಇದರ ಬಗ್ಗೆ ಕೇಳಿದ್ದರು. ಮತ್ತೆ ಮೊನ್ನೆಯಷ್ಟೇ ನಾನು ಬೇರೆ ಒಂದು ಪೋಸ್ಟ್‌ನಲ್ಲಿ ’ಮುದ್ದಣ ಮನೋರಮೆ’ಯರ ಪ್ರಸ್ತಾವ ಮಾಡಿದಾಗ ಮತ್ತೆ ನೆನಪಿಸಿಕೊಂಡು ಯಾವಾಗ ಪ್ರಕಟಿಸುತ್ತೀರಿ ಎಂದು ಕೇಳಿದರು. ಬಹುಶಃ ಅವರು ಉಮೇಶ್ ಅವರೊಡನೆ ಈ ಸಂಭಾಷಣೆಯನ್ನು ಕಂಠಪಾಠ ಮಾಡಿ ಶ್ರಾವಣ ಮಾಸದ ಸೋನೆಮಳೆ ಸುರಿಯುವ ಒಂದು ಮುಸ್ಸಂಜೆಯಲ್ಲಿ ಸಂಭಾಷಿಸುತ್ತ ವಿಶಿಷ್ಟ ಅನುಭೂತಿ ಪಡೆಯಬೇಕೆಂದಿದ್ದಾರೋ ಏನೊ.

ಈ ಪಠ್ಯಭಾಗವು ನನಗೆ ತಮಿಳುನಾಡು ಸರಕಾರದ ಕನ್ನಡ ಮಾಧ್ಯಮ ಪಠ್ಯಪುಸ್ತಕಗಳ ಪೈಕಿ ಅಲ್ಲಿನ ಹತ್ತನೇ ತರಗತಿಯ ಪುಸ್ತಕದಲ್ಲಿ ಸಿಕ್ಕಿತು. ಅದರ pdfನಿಂದ ಈ ಪಾಠದ ಎರಡು ಪುಟಗಳನ್ನು image ರೀತಿಯಲ್ಲಿ ಇಲ್ಲಿ ಹಂಚಿಕೊಂಡಿದ್ದೇನೆ. ಅಂತೆಯೇ, ಆಸಕ್ತರಿಗೆ ಸಂಗ್ರಹಕ್ಕೆ ಅನುಕೂಲವಾಗಲಿ ಎಂದು ಯುನಿಕೋಡ್ ಆವೃತ್ತಿಯಲ್ಲಿ ಮೂಲ ಪಾಠವನ್ನು, ಜೊತೆಯಲ್ಲೇ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೊಸಗನ್ನಡ ಅರ್ಥಾನುವಾದವನ್ನೂ ಸೇರಿಸಿ ಈ ಕೆಳಗೆ ಪ್ರಕಟಿಸಿದ್ದೇನೆ. ಇವತ್ತು ಆಷಾಢಸ್ಯ ಪ್ರಥಮದಿವಸೇ ಯಕ್ಷನ ವಿರಹವೇದನೆ ಅಲ್ಲ, ದಂಪತಿಯ ಸರಸಸಂಭಾಷಣೆ...

* * *
ಮುದ್ದಣ ಮನೋರಮೆಯ ಸಲ್ಲಾಪ

ಈ ತೆಱದೆ ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಷಾಕಾಲದೊಳೊಂದು ದೆವಸಂ ಬೈಗುಂಬೊೞನೊಳೆಂದಿನಂತಿರೋಲಗಂ ಪರಿಯೆ, ಕಬ್ಬಿಗರ ಬಲ್ಲಹಂ ಮುದ್ದಣನರಮನೆಯಿಂ ಪೊಱಮಟ್ಟು ನೆರೆವೀದಿವಿಡಿದು ಪೊರೆವೀಡಿಂಗೆಯ್ತರ್ಪುದುಮಾತನ ಮಡದಿ ಮನೋರಮೆ ದೂರದೆ ಕಂಡೆೞ್ದು ಇದಿರ್ವಂದು ಕಾಲ್ಗೆ ನೀರಂ ನೀಡಿ ಮತ್ತಂ ಕಯ್ವಿಡಿದೊಳಚೌಕಿಗೆಗುಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವಣ್ಣಂ ತಿನಲಿತ್ತು ಕೆನೆವಾಲಂ ಕುಡಿವೊಡಿತ್ತು ಉಪಚರಿಸುತಿರ್ದಳ್. ಈವುಪಚಾರದಿನಾತನ ಪಸಿವುಂ ಬೞಲ್ಕೆಯುಂ ಮುಗಿಯೆ, ಕೆಳದಿ ನಱುದಂಬುಲಮಂ ಸವಿಯಲ್ಕೆಂದು ಮಡಿದೀಯುತುಮಿರೆ, ಇಂತು ಸುಖಸಲ್ಲಾಪಂಗೊಳುತಿರ್ದರ್, ಅದೆಂತೆನೆ.

[ಈ ರೀತಿ ಕಾಡು ನಾಡೆಲ್ಲ ಮುದಗೊಳ್ಳುವಂತೆ ಒದಗಿಬಂದ ಮಳೆಗಾಲದಲ್ಲಿ ಒಂದು ದಿನ ಸಂಜೆಹೊತ್ತು ಎಂದಿನಂತೆ ರಾಜಸಭೆ ಮುಗಿದು ಕವಿಗಳ ಗುರು ಮುದ್ದಣನು ಅರಮನೆಯಿಂದ ಹೊರಟು ನೇರವಾಗಿ ಬೀದಿಗುಂಟ ಬಂದು ತನ್ನ ಮನೆಯನ್ನು ತಲುಪಲು, ಆತನ ಹೆಂಡತಿ ಮನೋರಮೆ ದೂರದಿಂದಲೇ ಅವನನ್ನು ನೋಡಿ ಇದಿರುಗೊಂಡು ಕಾಲುತೊಳೆಯಲು ನೀರು ಕೊಟ್ಟು ಮತ್ತೆ ಕೈಹಿಡಿದು ಒಳಚೌಕಿಯೊಳಕ್ಕೊಯ್ದು ಮಣೆ ಕೊಟ್ಟು ಕುಳ್ಳಿರಿಸಿ ಆಮೇಲೆ ಪಕ್ವವಾದ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟು, ಕಾಯಿಸಿ ಕೆನೆಗೂಡಿದ ಹಾಲನ್ನು ಕುಡಿಯಲಿಕ್ಕೆ ಕೊಟ್ಟು ಉಪಚರಿಸತೊಡಗಿದಳು. ಈ ಉಪಚಾರದಿಂದ ಆತನ ಹಸಿವು ಬಾಯಾರಿಕೆ ತೀರಿ, ಆಮೇಲೆ ಹೆಂಡತಿ ಕೊಟ್ಟ ಎಲೆ‌ಅಡಿಕೆಯನ್ನೂ ಸವಿದು ಈರೀತಿ ಸುಖಸಲ್ಲಾಪದಲ್ಲಿದ್ದುದನ್ನು ಏನೆಂದು ಬಣ್ಣಿಸಲಿ!

ಮನೋರಮೆ: (ಮೆಲ್ನುಡಿಯಿಂ) ನೋೞ್ಪುದೀ ಪಗಲ್ಗಳೆಂತೊ ಪಿರಿಯುವು ! ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸತ್ತುದು. ಅಂತದಱನೇನಾನುಮೊಂದು ನಲ್ಗತೆ ಯಂ ಪೇೞ!
[(ಪಿಸುಮಾತಿನಿಂದ) ನೋಡ್ತಿದ್ದೇನೆ, ಹಗಲುಗಳು ದೀರ್ಘವಾಗಿವೆ. ಹಗಲೂರಾತ್ರಿಯೂ ಸುರಿಯುವ ಸೋನೆಮಳೆ ಜಿನುಗುತ್ತಿರುವುದರಿಂದ ನನ್ನ ಮನಸ್ಸು ಬೇಸತ್ತಿದೆ. ಎಂಬ ಕಾರಣಕ್ಕಾಗಿ ಯಾವುದಾದರೂ ಒಳ್ಳೆಯದೊಂದು ಕಥೆ ಹೇಳಿ!]

ಮುದ್ದಣ: ಪ್ರಾಣೇಶ್ವರಿ ! ತಡೆಯೇಂ ! ಇನಿತೊಂದು ಬಯಕೆ ತಲೆದೋಱೆ ಆವ ಗಹನಂ? ಆದೊಡಮಾವ ನಲ್ಗತೆಯಂ ಪೇೞ್ವೆಂ ? ಏಂ ಭೋಜಪ್ರಬಂಧಂ ? ವಿಕ್ರಮವಿಜಯಂ, ಮಹಾವೀರಚರಿತಂ ?
[ ಪ್ರಾಣೇಶ್ವರಿ, ಅಡ್ಡಿಯೇನು? ನೀನು ಇಷ್ಟೊಂದು ಆಸೆಪಟ್ಟಿರುವಾಗ ಅದೇನು ಕಷ್ಟ? ಆದರೆ ಯಾವ ಒಳ್ಳೆಯಕಥೆ ಹೇಳಲಿ? ಭೋಜಪ್ರಬಂಧವೇ? ವಿಕ್ರಮವಿಜಯವೇ? ಮಹಾವೀರಚರಿತೆಯೇ?]

ಮನೋರಮೆ: ಇಸ್ಸಿ ! ಇವರೊಳೆನಗೞ್ಕಱಲ್ಲಂ; ಉೞದೊಡಮೞದೊಡಂ ಬಟ್ಟೆದೋಱುಪ ರಸಭರಿತಂ ಚರಿತಮೈಸೆ.
[ಛೀ. ಇವೆಲ್ಲ ನನಗಲ್ಲ. ಉಳಿದರೂ ಅಳಿದರೂ ದಾರಿತೋರುವ ರಸಭರಿತ ಚರಿತೆಯೇ ಇರಲಿ.]

ಮುದ್ದಣ: ನಿನಗಾವ ರಸದೊಳಿಷ್ಟಂ ? ಶೃಂಗಾರರಸದೊಳೆ ? ವೀರರಸದೊಳೆ ? ಹಾಸ್ಯರಸದೊಳೆ ?
[ನಿನಗೆ ಯಾವ ರಸದಲ್ಲಿ ಇಷ್ಟ? ಶೃಂಗಾರ ರಸವೇ? ವೀರ ರಸವೇ? ಹಾಸ್ಯರಸವೇ?]

ಮನೋರಮೆ: ಆವರಸದೊಳೆಂದೊಡೇಂ ? ನವರಸದೊಳಂ.
[ಯಾವ ರಸದಲ್ಲಿ ಅಂತ ಕೇಳಿದ್ರಾ? ನವರಸಗಳೂ ಇರಲಿ.]

ಮುದ್ದಣ: ಅಂತಿರೆ ಮತ್ತಮಾಕತೆ ಯಾವುದು ?
[ಹಾಗಾದರೆ ಅದು ಯಾವ ಕಥೆ?]

ಮನೋರಮೆ: ರಾಮಾಯಣದೊಳೇನಾನುಮೊಂದು.
[ರಾಮಾಯಣದೊಳಗೆ ಯಾವುದಾದರೂ ಒಂದು.]

ಮುದ್ದಣ: ಅಂತೆಯ ಅಕ್ಕೆ. ಸೀತಾಸ್ವಯಂವರಮಂ ಪೇೞ್ವೆಂ.
[ಹಾಗೆಯೇ ಆಗಲಿ. ಸೀತಾಸ್ವಯಂವರದ ಕಥೆ ಹೇಳುವೆ.]

ಮನೋರಮೆ: ಆಂ ಮುನ್ನಮೆ ಕೇಳ್ದಿರ್ಪೆನಲ್ತೆ !
[ಆಹ್. ಅದನ್ನು ನಾನು ಈ ಮೊದಲೇ ಕೇಳಿಸಿಕೊಂಡಾಗಿದೆಯಲ್ಲ!]

ಮುದ್ದಣ: ಏಂ ಸೀತಾಪಹರಣಕಥನದೊಳ್ ಬಯಕೆಯೆ ?
[ಮತ್ತೇನು, ಸೀತಾಪಹರಣ ಕಥೆಯನ್ನು ಕೇಳುವ ಬಯಕೆಯೇ?]

ಮನೋರಮೆ: ಉಃ ! ಆನೊಲ್ಲೆಂ.
[ಊಹೂಂ, ಅದೂ ಬೇಡಾ ನನಗೆ.]

ಮುದ್ದಣ: ಮೇಣಾವ ನಲ್ಗತೆಯಂ ಪೇೞ್ವೆನೋ.
[ಮತ್ತ್ಯಾವ ಒಳ್ಳೆಯ ಕಥೆಯನ್ನು ಹೇಳುವೆನೋ!]

ಮನೋರಮೆ: ಇಂತೇಕುಸಿರ್ವಯ್? ನಾಡೊಳೆನಿತ್ತೊ ರಾಮಾಯಣಂಗಳೊಳವು. ನೀಂ ಕೇಳ್ದುದಱೊಳೊಂದಂ ನಲ್ಮೆದೋಱೆ ಕಂಡು ಪೇೞ್ವುದು.
[ಇಷ್ಟೇಕೆ ಗೊಂದಲ? ಈ ದೇಶದಲ್ಲಿ ಅದೆಷ್ಟು ರಾಮಾಯಣ ಆವೃತ್ತಿಗಳಿಲ್ಲ! ನಿಮಗೆ ಗೊತ್ತಿರುವಂಥವುಗಳಲ್ಲಿ ಒಳ್ಳೆಯದೆನಿಸಿದ್ದನ್ನು ನನಗೆ ಹೇಳಿ.]

ಮುದ್ದಣ: ನೀನೆ ಒಂದನಾಯ್ದುಕೊಳ್ವುದು.
[ನೀನೇ ಒಂದನ್ನಾಯ್ದುಕೋ.]

ಮನೋರಮೆ: ಶ್ರೀರಾಮಂ ಅಶ್ವಮೇಧಮಂ ಕಯ್ಕೊಂಡನೆಂಬರಲ್ತೆ; ಆ ಕತೆಯೆ ಅಕ್ಕುಂ.
[ಶ್ರೀರಾಮನು ಅಶ್ವಮೇಧಯಾಗವನ್ನು ಕೈಕೊಂಡನೆನ್ನುತ್ತಾರಲ್ಲ. ಆ ಕಥೆಯೇ ಆಗಬಹುದು.]

ಮುದ್ದಣ: ಈಗಳಱತೆಂ; ಶೇಷರಾಮಾಯಣಮಂ ಪೇೞ್ವುದೆಂಬೆಯೆ ?
[ಈಗ ತಿಳಿಯಿತು. ಉತ್ತರರಾಮಾಯಣವನ್ನು ಹೇಳಬೇಕಂತೀಯಾ?]

ಮನೋರಮೆ: ಅಪ್ಪುದಪ್ಪುದು. ಆದೊಡೆ ಮುನ್ನಮಾರಾರ್ಗಿದನೊರೆದರ್ ?
[ಹೌದುಹೌದು. ಅದನ್ನು ಮೊದಲು ಯಾರು ಯಾರಿಗೆ ಹೇಳಿದರು?]

ಮುದ್ದಣ: ಮುನ್ನಂ ಶೇಷಂ ವಾತ್ಸ್ಯಾಯನಂಗೆ ಪೇೞ್ದನದನೆ ನಿನಗೆ ಬಿತ್ತರಿಪೆಂ. ಆದೊಡೆ ಬಲ್ಗತೆ ಕಣಾ ! ಒಂದೆರೞ್ದೆವಸಕ್ಕೆ ಮುಡಿಯದು.
[ಮೊದಲು ಶೇಷನು ವಾತ್ಸ್ಯಾಯನನಿಗೆ ಹೇಳಿದನು. ಅದನ್ನೇ ನಾನು ನಿನಗೆ ಹೇಳುವೆನು. ಅದೊಂದು ದೊಡ್ಡ ಕಥೆ ಮಾರಾಯ್ತೀ. ಒಂದೆರಡು ದಿವಸಕ್ಕೆ ಮುಗಿಯದು!]

ಮನೋರಮೆ: ಇರ್ಕೆ. ಓರೊಂದು ದೆವಸಮಿನಿಸಿನಿಸಂ ಪೇೞ್ದೊಡೇಂ ?
[ಇರಲಿ. ದಿನಕ್ಕೊಂದಿಷ್ಟಿಷ್ಟರಂತೆ ಹೇಳಿದರಾಯ್ತಲ್ಲ?]

ಮುದ್ದಣ: ಅಕ್ಕುಂ. ಆವ ಧಾಟಿಯೊಳ್ ಪೇೞ್ವೆಂ; ಪದ್ಯದೊಳ್ ಪೇೞ್ವೆನೊ? ಗದ್ಯದೊಳ್ ಪೇೞ್ವೆನೋ
[ಹೌದು. ಯಾವ ಧಾಟಿಯಲ್ಲಿ ಹೇಳಲಿ? ಪದ್ಯದಲ್ಲಿ ಹೇಳಲೇ? ಗದ್ಯದಲ್ಲಿ ಹೇಳಲೇ?]

ಮನೋರಮೆ: ಪದ್ಯಂ ವಧ್ಯಂ, ಗದ್ಯಂ ಹೃದ್ಯಂ. ಹೃದ್ಯಮಪ್ಪ ಗದ್ಯದೊಳೆ ಪೇೞ್ವುದು.
[ಪದ್ಯ ಸತ್ತುಹೋಗಲಿ. ಗದ್ಯವೇ ಒಳ್ಳೆಯದು. ಹೃದಯಸ್ಪರ್ಶಿಯಾದ ಗದ್ಯದಲ್ಲೇ ಹೇಳೋಣವಾಗಲಿ.]

ಮುದ್ದಣ: (ನಸುನಗೆಯಿಂ) ಅದಂತಿರ್ಕೆ. ಅದಱೊಳ್ ಇಂತಪ್ಪ ನಲ್ಗತೆಯಂ ಬಿತ್ತರಿಸಿದೊಡೆ ಅರಮನೆಯೊಳ್ ರನ್ನಗಡಗಮಂ ಪೊನ್ನಕಂಠಿಕೆಯಂ ಮೆಚ್ಚನೀವರ್. ನೀನೀವುದೇಂ ?
[ನಸುನಗುತ್ತ- ಅದಿರಲಿ. ಈರೀತಿಯ ಒಳ್ಳೆಯ ಕಥೆಯನ್ನು ಹೇಳಿದರೆ ಅರಮನೆಯಲ್ಲಾದರೆ ರತ್ನದ ಕಡಗ, ಹೊನ್ನಿನ ಹಾರವನ್ನು ಮೆಚ್ಚುಗೆಯೆಂದು ಕೊಡುವರು. ನೀನೇನು ಕೊಡುತ್ತೀ?]

ಮನೋರಮೆ: ಪೆಱತೇಂ ? ಎನ್ನನೆ ನಾನೀವೆಂ.
[ಮತ್ತೇನು? ನನ್ನನ್ನೇ ಕೊಡುತ್ತೇನೆ.]

ಮುದ್ದಣ: ಬಲ್ಗಡುಸುಗಾರ್ತಿಯೈಸೆ ! ಅಱಯಾ ಮುನ್ನಮೆ ನಿನ್ನ ತಾಯ್ತಂದೆವಿರೆನಗಿತ್ತರೆಂಬುದಂ ?
[ಭಲಾ! ಬಲು ಜಾಣೆಯಿದ್ದೀ ನೀನು. ಅಳಿಯನನ್ನು ಮಾಡಿಕೊಂಡಾಗಲೇ ನಿನ್ನ ತಾಯ್ತಂದೆಯರು ನಿನ್ನನ್ನು ನನಗೆ ಕೊಟ್ಟಿಹರಲ್ಲ?]

ಮನೋರಮೆ: ಇದೇತಱ ನುಡಿ ! ಪೋಕೆ. ಆಂ ಪರಾಧೀನೆ ಗಡ ! ಪುರಾಣಮನೋದಿದಿಂ ಬೞಯಮಲ್ತೆ ದಕ್ಷಿಣೆಯನೀವುದು? ಅರಮನೆಯವರುಂ ಕಬ್ಬಮಂ ಕಂಡಲ್ತೆ ಕಚ್ಚೞಯನಿತ್ತರ್ ? ಆನುಂ ಕತೆಯಂ ಕೇಳ್ದು ಸೊಗಸಾಗೆ ಬಲ್ಲಂತೆ ಸಮ್ಮಾನಿಸುವೆಂ.
[ಇದೇನಿದು. ಹೋಗಿ. ನಾನು ಪರಾಧೀನೆಯೇ? ಪುರಾಣವನ್ನು ಓದಿದ್ದಕ್ಕನುಗುಣವಾಗಿ ಅಲ್ಲವೇ ದಕ್ಷಿಣೆ ಕೊಡುವುದು? ಅರಮನೆಯವರಾದರೂ ಕಾವ್ಯ ಹೇಗಿದೆ ಎಂದು ನೋಡಿದ ಮೇಲೆಯೇ ಅಲ್ಲವೇ ಉಡುಗೊರೆ ಕೊಡುವುದು? ಹಾಗೆಯ ನಾನು ಸಹ ಕಥೆ ಕೇಳಿದಮೇಲೆ ಸೊಗಸಾಗಿದ್ದರೆ ಸನ್ಮಾನಿಸುವೆ.]

ಮುದ್ದಣ: ಒಳ್ಳಿತೊಳ್ಳಿತು ! ಕತೆಯನಾಲಿಸಿ ಲಾಲಿಸಿ ಬೞಕ್ಕ ಮೀಯೆನೆಂದೊಡೆ ಬಿಡೆ ನೋೞ್ಪೆಂ.
[ಒಳ್ಳೆದೊಳ್ಳೆದು. ಕಥೆಯನ್ನು ಕೇಳಿದ ಮೇಲೆ ಉಡುಗೊರೆ ಕೊಡುವುದಿಲ್ಲ ಅಂದಿಯೋ ಬಿಡೋದಿಲ್ಲ ನಿನ್ನನ್ನು, ನೋಡ್ತೇನೆ.]

ಮನೋರಮೆ: ಆನುಂ ನೋೞ್ಪೆಂ ಕತೆಯ ಪುರುಳೆಂತಿರ್ಕುಮೆಂದು.
[ನಾನೂ ನೋಡುತ್ತೇನೆ. ಕತೆಯ ಹೆಚ್ಚುಗಾರಿಕೆ ಎಷ್ಟಿದೆಯೆಂದು.]

ಮುದ್ದಣ: ಆದೊಡಾಲಿಸು. ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟ ತಟಘಟಿತ
[ಆಯ್ತು. ಕೇಳು. ಸ್ವಸ್ತಿಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ]

ಮನೋರಮೆ: ಓ ಓ ! ತಡೆ ! ತಡೆ. ವಸುಧೆಗೊ ಡೆಯನ ರಾಮಚಂದ್ರನ ಕತೆಯಂ ಪೇೞೆನೆ ಬಸದಿಗೊಡೆಯನಪ್ಪ ಸುರೇಂದ್ರರ ಚರಿತೆಯಂ ಪೇೞ್ವುದೇಂ !ಸಾಲ್ಗುಂ ಸಾಲ್ಗುಂ. ಇಂತೆರ್ದೆಗೊಳ್ವ ಕತೆಗೆಂತುಡುಗೊಱೆಯಂ ಗೆಯ್ವೆನೋ !
[ಓ ಓ ನಿಲ್ಲಿಸಿ ನಿಲ್ಲಿಸಿ. ಭೂಮಿಗೊಡೆಯ ಶ್ರೀರಾಮಚಂದ್ರನ ಕಥೆ ಹೇಳಿರೆಂದು ಕೇಳಿದರೆ ಬಸದಿಗೊಡೆಯ ಸುರೇಂದ್ರರ ಚರಿತ್ರೆ ಹೇಳುವುದೇ? ಸಾಕು ಸಾಕು. ಈರೀತಿ ಶುರುವಾಗುವ ಕಥೆಗೆ ಅದೆಂತು ಗಮನವೀಯುವೆನೋ.]

ಮುದ್ದಣ: ನಲ್ನುಡಿಯಿದು ರಮಣಿ ! ಕಚಂಗಳಾಣೆ ! ಆಲ್ತು ಬಸದಿಯಿಂದ್ರರ ಕತೆಯಲ್ತು; ರಾಮಚಂದ್ರನ ಕತೆಯನೆ ಪೊಗೞ್ದು ಪೇೞ್ವುದಿದು ಸಕ್ಕದದೊಂದು ಚೆಲ್ವು.
[ಒಳ್ಳೆಯ ಮಾತಿದು ಪ್ರಿಯೇ. ತಲೆ(ಗೂದಲಿನ)ಆಣೆ. ಅಲ್ಲ, ಇದು ಬಸದಿಯಿಂದ್ರರ ಕಥೆಯಲ್ಲ. ರಾಮಚಂದ್ರನ ಕಥೆಯನ್ನೇ ಸೊಗಸಾಗಿ ಹೇಳುವುದಿದು ಸಂಸ್ಕೃತದ್ದೊಂದು ಚೆಲುವು.]

ಮನೋರಮೆ: ಲೇಸು, ಲೇಸು ! ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು; ಕನ್ನಡದ ಸೊಗಸನಱಯಲಾರ್ತೆನಿಲ್ಲೆನಗೆ ಸಕ್ಕದದ ಸೊಗಸಂ ಪೇೞ್ವುದು ಗಡ !
[ಇದೊಳ್ಳೇ ಕಥೆ. ನೀರೇ ಇಳಿಯದ ಗಂಟಲಿನೊಳಗೆ ಕಡುಬು ತುರುಕಿದಂತೆ ಆಯ್ತು. ಕನ್ನಡಸ ಸೊಗಸನ್ನೇ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದ ನನಗೆ ಸಂಸ್ಕೃತದ ಸೊಗಸನ್ನು ಹೇಳುವುದೇ?]

ಮುದ್ದಣ: ಅಪ್ಪೊಡಿನ್ನೆಂತೊ ಒರೆವೆಂ ?
[ಮತ್ತೆ ಹೇಗೆ ಹೇಳಲಿ?]

ಮನೋರಮೆ: ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇೞ್ವುದು. ಕನ್ನಡ ಕತ್ತುರಿಯಲ್ತೆ.
[ಕಥೆಯ ತಿರುಳನ್ನು ಕನ್ನಡದ ಸವಿನುಡಿಯಲ್ಲೇ ಹೇಳುವಂಥವರಾಗಿ. ಕನ್ನಡವು ಕಸ್ತೂರಿಯಲ್ಲವೇ?]

ಮುದ್ದಣ: ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ, ರನ್ನವಣಿಯಂ ಪೊನ್ನಿಂ ಬಿಗಿದಂತೆಸಗುಂ; ಅದಱಂ ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ, ರಸಮೊಸರೆ, ಲಕ್ಕಣಂ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆಱೆಯೆ ! ತಿರುಳ್ಗನ್ನಡದೊಳೆ ಕತೆಯನುಸಿರ್ವೆಂ ಎಂಬಲ್ಲಿಗೆ ಮುದ್ದಣ ಪೇೞ್ದ ಶ್ರೀ ರಾಮಾಶ್ವಮೇಧದೊಳ್ ಕಥಾಮುಖಮೆಂಬ ಪ್ರಥಮಾಶ್ವಾಸಂ ಸಂಪೂರ್ಣಂ
[ಹೌದು ಹೌದು. ಆದರೂ ಸಂಸ್ಕೃತವೂ ಇರಲಿ. ಮಣಿ-ರತ್ನವನ್ನು ಚಿನ್ನದ ಸರದಲ್ಲಿ ಬಿಗಿದಂತೆ. ಕರಿಮಣಿ ಸರದಲ್ಲಿ ಕೆಂಪು ಹವಳ ಪೋಣಿಸಿದಂತೆ. ರಸಭರಿತವಾಗಿರಲು, ಲಕ್ಷಣ ಹೆಚ್ಚಿದರೆ, ನಡುನಡುವೆ ಸಂಸ್ಕೃತದ ನುಡಿಗಳೂ ಮೆರೆಯಲಿ. ಆದರೆ ಕಥೆಯ ತಿರುಳನ್ನು ಕನ್ನಡದಲ್ಲೇ ವಿವರಿಸುವೆನು ಎಂಬಲ್ಲಿಗೆ ಮುದ್ದಣನು ಹೇಳಿದ ಶ್ರೀ ರಾಮಾಶ್ವಮೇಧದಲ್ಲಿ ಕಥಾಮುಖವೆಂಬ ಮೊದಲ ಆಧ್ಯಾಯವು ಮುಗಿದುದು.]

* * *
ಕವಿಕೃತಿ ಪರಿಚಯ: ಮುದ್ದಣನ ಕಾಲ ಕ್ರಿ.ಶ. 1870-1901. ಮುದ್ದಣ ಎಂಬ ಕಾವ್ಯನಾಮದಿಂದ ಗ್ರಂಥರಚನೆ ಮಾಡಿದ ಲಕ್ಷ್ಮೀನಾರಣಪ್ಪನು ಉಡುಪಿಯ ಸಮೀಪದ ‘ನಂದಳಿಕೆ’ ಎಂಬಲ್ಲಿ ಹುಟ್ಟಿದನು. ಇವನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ಈತ ಉಡುಪಿಯ ಒಂದು ಶಾಲೆಯಲ್ಲಿ ಕೆಲವು ಕಾಲ ವ್ಯಾಯಾಮ ಶಿಕ್ಷಕನಾಗಿದ್ದನು. ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಪರಿಪೂರ್ಣ ಪಾಂಡಿತ್ಯ ಪಡೆದಿದ್ದನು. ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದರೂ ಮುದ್ದಣ ಬಹಳ ರಸಿಕ ಕವಿ. ಕನ್ನಡ ಸಾಹಿತ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದದ ಶೈಲಿ ವಿನೂತನವಾದುದು. ಸಾಮಾನ್ಯವಾಗಿ ಇವನ ಕೃತಿಗಳಲ್ಲಿ ತಿಳಿಯಾದ ಗದ್ಯಶೈಲಿ ಹಾಗೂ ಚಿಕ್ಕಚಿಕ್ಕ ವಾಕ್ಯಗಳ ಪ್ರಯೋಗಗಳನ್ನು ಕಾಣಬಹುದು. ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಎಂಬ ಯಕ್ಷಗಾನ ಪ್ರಸಂಗಗಳನ್ನು ಮುದ್ದಣ ರಚಿಸಿದ್ದಾನೆ. ವಾರ್ಧಕ ಷಟ್ಪದಿಯಲ್ಲಿ ಬರೆದ ‘ಶ್ರೀರಾಮ ಪಟ್ಟಾಭಿಷೇಖಂ’ ಎಂಬ ಕಾವ್ಯ ಅತ್ಯುತ್ತಮ ಕೃತಿಯಾಗಿದೆ. ‘ರಾಮಾಶ್ವಮೇಧಂ’ ಎಂಬ ಗದ್ಯಕಾವ್ಯದಲ್ಲಿ ಮುದ್ದಣ-ಮನೋರಮೆಯರ ಸರಸ ಸಂವಾದವು ಹರ್ಷದಾಯಕವಾಗಿದೆ. ಕಥಾಮುಖದಲ್ಲಿ ಬರುವ ಈ ಸಂವಾದವನ್ನು ಕವಿಯು ಹೃದಯಂಗಮವಾಗಿ ವರ್ಣಿಸಿದ್ದಾನೆ. ಮುದ್ದಣನು ತನ್ನ ಬಡತನದ ಬೇಗೆಯನ್ನು ಮರೆಯುವುದಕ್ಕಾಗಿ ತನ್ನ ಕೃತಿಗಳಲ್ಲಿ ಇಂತಹ ಹಾಸ್ಯಪ್ರಸಂಗಗಳನ್ನು ತರುತ್ತಾನೆ. ಯಾವುದೇ ಕಷ್ಟ ಬರಲಿ, ನಷ್ಟ ಬರಲಿ ಎಲ್ಲವನ್ನೂ ಎದುರಿಸುವ take it easy policy ಎಂಬ ಸಿದ್ಧಾಂತ ಎಂದೆಂದಿಗೂ ಸತ್ಯವಾದುದಲ್ಲವೇ ?

ಶ್ರೀವತ್ಸ ಜೋಶಿ



10 comments:

  1. ವಾವ್ ಸೂಪರ್...ಶ್ರೀವತ್ಸ ಜೋಶಿ ಸಾರ್.....ನಮ್ಮ ವಿದ್ಯಾರ್ಥಿ ಜೀವನದ ಹೈಸ್ಕೂಲ್ ನ ಕನ್ನಡ ಪಠ್ಯದಲ್ಲೊಂದು ಭಾಗವಾಗಿದ್ದ ಮುದ್ದಣ ಮನೋರಮೆಯರ ಸರಸ ಸಲ್ಲಾಪ (1975-78). ನನ್ನ ಅಚ್ಚುಮೆಚ್ಚಿನ ಪಾಠ....ಈಗ ಮತ್ತೆ ಓದಿ ಮಹದಾನಂದವಾಯ್ತು....ಹಳಗನ್ಧನಡದ ಸೊಗಡೇ ಒಂಥರಾ ಮಜ...ಧನ್ಯವಾದಗಳು....

    ReplyDelete
  2. ತುಂಬಾ ಚೆನ್ನಾಗಿ ಅರ್ಥವ್ಯಾಪ್ತಿ ಹೇಳಿರುವಿರ ಸರ್

    ReplyDelete
  3. ನನ್ನ ಅಚ್ಚು ಮೆಚ್ಚಿನ ಪಾಠ. 7ನೆ ತರಗತಿಯಲ್ಲಿ.ಹುಡುಕುತ್ತಿದ್ದೆ. ಎಲ್ಲೂ ಸಿಕ್ಕಿರಲಿಲ್ಲ. ಇವತ್ತಿನ ದಿನ ಪ್ರಾಥಮಿಕ ಶಾಲೆ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಪಾಠ ಇಲ್ಲ. ಓದಿ ತುಂಬಾ ಖುಷಿಯಾಯ್ತು. ಹಳೆ ಸ್ಕೂಲು ನೆನಪಾಯ್ತು. ಧನ್ಯವಾದಗಳು.

    ReplyDelete
  4. ವಿವರವಾಗಿ ಬರೆಯಲಾಗಿದೆ ಸರ್ ಧನ್ಯವಾದ.

    ReplyDelete
  5. ಧನ್ಯವಾದಗಳು sir 🙏

    ReplyDelete
  6. ತುಂಬು ಹೃದಯದ ಧನ್ಯವಾದಗಳು..❤️

    ReplyDelete
  7. ಮಳೆಗಾಲ ವರ್ಣನೆ ಇಲ್ಲ?

    ReplyDelete
  8. ವಾಹ್ ..ಧನ್ಯವಾದ ಶ್ರೀವತ್ಸ ಸರ್.. ಸುಂದರ ವಿವರಣೆ. ನಮ್ಮ ಕನ್ನಡ ಪಂಡಿತರು (ಹತ್ತನೆಯ ತರಗತಿ) ಶ್ರೀ ಕೆ.ಆರ್. ಸಿದ್ಧರಾಮ ಸರ್ ಕಣ್ಣ ಮುಂದೆ ತೇಲಿಬಂದಂತೆ ಆಯಿತು

    ReplyDelete
  9. ನಮಸ್ತೆ ಸರ್, ಮುದ್ದಣ ಮನೋರಮೆಯರ ಸಲ್ಲಾಪವನ್ನು ಯಾವುದೋ ಆಕಾಶವಾಣಿ ಕೇಂದ್ರದವರು ನಾಟಕವಾಗಿ ಪ್ರಸಾರಮಾಡಿದ್ದನ್ನು ನಾನು ಕೇಳಿದ್ದೇನೆ, ದಯಮಾಡಿ ಅದು ನನಗೆ ಈಗ ದ್ವಿತೀಯ ಪಿಯುಸಿಗೆ ಪಠ್ಯವಾಗಿರುವುದರಿಂದ ಅಗತ್ಯವಿದೆ, ಆ ಆಕಾಶವಾಣಿ ನಾಟಕವನ್ನು ಹುಡುಕಿಕೊಡುವಿರ, ದಯಮಾಡಿ...,

    ReplyDelete