ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, March 24, 2014

ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.? - ರೂಪೇಶ್ ಆರ್

ಭಾರತದ ಅಭಿವೃದ್ದಿಗೆ ಮುನ್ನುಡಿ ಬರೆಯುವುದೇ


2014ರ ಮಹಾಸಮರ...? 

“ಭಾರತ ಗೆಲ್ಲಿಸಿ” ಎಂದು ಭಾರತೀಯ ಜನತಾ ಪಾರ್ಟಿ, “ನಾನು ಅಲ್ಲ ನಾವು” ಎನ್ನೋಣ ಎಂದು ಕಾಂಗ್ರೆಸ್, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಬಿಟ್ಟು ಪರ್ಯಾಯ ಶಕ್ತಿಗೆ ಅವಕಾಶ ಕೊಡಿ ಎಂದು ತೃತೀಯ ರಂಗ. ಪ್ರಧಾನಿ ಕುರ್ಚಿಗೆ ನರೇಂದ್ರ ಮೋದಿ ಅವರಿಂದ ಹಿಡಿದು ಎಚ್.ಡಿ.ದೇವೇಗೌಡರ ವರೆಗೆ ಸಾಲಲ್ಲಿ ನಿಂತಿರುವ ಅನೇಕ ನಾಯಕರು. ಕಾಕತಾಳೀಯವೆಂಬಂತೆ 1947 ಮತ್ತು 2014ರ  ಕ್ಯಾಲೆಂಡರ್  ಒಂದೇ. ಮತ್ತೊಮ್ಮೆ ಸ್ವಾತಂತ್ರ ಸಿಗುವ ಸೂಚನೆಯೇ ಇರಬೇಕು.


2002ರ ಗೋದ್ರಾ ಹತ್ಯಾಕಾಂಡದ ಬಗ್ಗೆ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ್ದರೂ ಅದನ್ನೇ ವಿಷಯವಾಗಿಸಿಟ್ಟುಕೊಂಡು ಮೋದಿಯವರಮೇಲೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುತ್ರ ಎಂಬುದು ಬಿಟ್ಟರೆ ಪ್ರಧಾನಿ ಆಗುವುದಕ್ಕೆ ನಿಮಗೆ ಯಾವುದೇ ಯೋಗ್ಯತೆಯಿಲ್ಲ ಎಂದು ರಾಹುಲ್ ಗಾಂಧಿಯವರ ಮೇಲೆ, ಅಧಿಕಾರ ದಾಹದಿಂದ ಅಂತರಿಕ ಕಚ್ಚಾಟ ಶುರುವಾಗಿ ದೇಶ ಉದ್ದಾರ ಆಗುವುದಿಲ್ಲ ಎಂದು ತೃತೀಯ ರಂಗದವರ ಮೇಲೆ ಚುನಾವಣಾ ಭಾಷಣಗಳು ಭರ್ಜರಿಯಾಗಿಯೇ ನಡೆಯುತ್ತಿವೆ. ಇನ್ನೂ ಈಗಷ್ಟೇ ಬೆಳೆದು ಮಂಕಾಗುತ್ತಿರುವ ಆಮ್ ಆದ್ಮಿ ಪಾರ್ಟಿ ಗೆದ್ದರೆ ಬಹುಶಃ ದೆಹಲಿಯ ಬೀದಿಗಳಲ್ಲೇ ಸಂಸತ್ ಅಧಿವೇಶನ ನಡೆಸಿದರೂ ಆಶ್ಚರ್ಯ ಪಡುವಂತದ್ದು ಏನು ಇಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಉಳಿದೆಲ್ಲಾ ರಾಜ್ಯಗಳಲ್ಲೆಲ್ಲ ಪಾದೇಶಿಕ ಪಕ್ಷಗಳದ್ದೇ ಕಾರುಬಾರು. ತಮಿಳುನಾಡಿನಲ್ಲಿ ಜಯಲಲಿತ ಪ್ರಧಾನಿ ಕುರ್ಚಿ ವಶಪಡಿಸಿಕೊಳ್ಳಲು ಕಾಯುತ್ತಿದ್ದಾರೆ. ಮಹಾರಾಷ್ಟ್ರ ಶಿವಸೇನೆ, ಆಂಧ್ರದಲ್ಲಂತು ಪ್ರಾದೇಶಿಕ ಪಕ್ಷಗಳಿಗೆ ಲೆಕ್ಕವೇ ಇಲ್ಲ. ಜಗನ್ ಮೋಹನ್ ರೆಡ್ಡಿ ಯವರ ವೈ‌ಎಸ್‌ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ಅವರ ಟಿ‌ಡಿ‌ಪಿ, ಚಂದ್ರಶೇಕರ್ ಅವರ ಟಿ‌ಆರ್‌ಎಸ್. ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಜೈ ಸಮೈಕಾಂದ್ರ. ಇನ್ನೂ ಚಿತ್ರನಟ ಪವನ್ ಕಲ್ಯಾಣ್ ಹೊಸ ಪಕ್ಷ ಕಟ್ಟುವುದು ಬಹುತೇಕ ಕಚಿತವಾಗಿದೆ. ಸರ್ಕಾರ ರಚನೆಯಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಬಿ‌ಜೆ‌ಪಿ ಅಧಿಕಾರ ಬಂದರೆ ಕರ್ನಾಟಕದಿಂದ ಯಡಿಯೂರಪ್ಪ ಈಗಾಗಲೇ ಕೃಷಿ ಮಂತ್ರಿ ಆಗಬೇಕೆಂಬ ಬಯಕೆ ವ್ಯಕ್ತ ಪಡಿಸಿದ್ದಾರೆ. ಸದಾನಂದ ಗೌಡ ಹಾಗೂ ಅನಂತ್ ಕುಮಾರ್ ಸಹ ಸಚಿವ ಸ್ಥಾನದ ಆಕಾಂಕ್ಷಿಗಳು. ನರೇಂದ್ರ ಮೋದಿಯವರಯವರಂತೂ ತಮ್ಮ ಭಾಷಣದ ಭರಾಟೆಯಿಂದ ಜನರನ್ನು ಆಕರ್ಷಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಂಡಂತೆ ಕಾಂಗ್ರೆಸ್ನಲ್ಲಿ ಪ್ರಭಲ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ. ಇದ್ದರೂ ಸೋನಿಯಾ ಗಾಂಧಿಯವರ ಮುಂದೆ ಹೇಳುವ ಗಂಡಸ್ತನ ಯಾರಿಗೂ ಇರುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನ  ಹಿರಿಯ ನಾಯಕರೆಲ್ಲರೂ ರಾಹುಲ್ ಗಾಂಧಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಹೇಳುತ್ತಾರೆ, ಏಕೆ.? ಹಿರಿಯರಿಗಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲವೇ.? ಗೊತ್ತಿಲ್ಲ. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಸುತ್ತಿಕೊಂಡಿರುವ ಯುಪಿಎ ಈ ಭಾರಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಹತ್ತು ವರ್ಷದ ಮನ ಮೋಹನರ ಮೌನದ ಪರಿಣಾಮ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದೆ. ನೆಹರೂ, ಇಂದಿರಾ ಮತ್ತು  ರಾಜೀವ್ ಗಾಂಧಿಯ ನಂತರ ಹುದ್ದೆ ಕಳೆದುಕೊಳ್ಳುವ ಬೀತಿ ಗಾಂಧಿ ಕುಟುಂಬಕ್ಕೆ 

ಇನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ಪ್ರಧಾನಿ ಆಗುವ ಆಸೆಯನ್ನು ಹೊಂದಿದ್ದ ಅಡ್ವಾಣಿ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಆದರೂ ಮುಸುಕಿನ ಗುದ್ದಾಟ ನಡೆಯುತ್ತಾಲೇ ಇದೆ. ಸಮೀಕ್ಷೆಗಳ ಪ್ರಕಾರ ಮತದಾರ ಕಾಂಗ್ರೆಸ್ ಆಡಳಿತವನ್ನು ದಿಕ್ಕರಿಸಿ ಬಿ‌ಜೆ‌ಪಿ ಕೈ ಹಿಡಿಯುತ್ತಾನೆ ಎಂದು ಹೇಳಲಾಗುತ್ತಿದೆ. ಬಹುಶಃ ಅಟಲ್ ಬಿಹಾರಿ ವಾಜಪೇಯಿ ಯವರ ಮುಂದಿನ ಭಾರತವನ್ನು ನರೇಂದ್ರ ಮೋದಿ ಯವರಿಂದ ನೋಡಲು ಜನ ಬಯಸಿರುವ ಹಾಗಿದೆ.


ನರೇಂದ್ರ ಮೋದಿಗಿಂತ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸಂಭಂಧಿಸಿದಂತೆ ಭಾರಿ ಹಿಂದಿದ್ದಾರೆ. ಬಹುಶಃ ನರೇಂದ್ರ ಮೋದಿ ಯವರ ಗುಜರಾತನ್ನು ನೋಡಿಯೇ ಜನ ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ ಹನ್ನೆರಡು ವರ್ಷದಲ್ಲಿ ಗುಜರಾತ್ನಲ್ಲಿ ಆಗಿರುವ ಅಭಿವೃದ್ದಿ ಮುಂದಿನ ಐದು ವರ್ಷಗಳಲ್ಲಿ ಇಡೀ ಭಾರತಕ್ಕೆ ಹರಡಲು ಸಾಧ್ಯವೇ..? ನರೇಂದ್ರ ಮೋಡಿಯವರ ಮೇಲೆ ಜನ ಇಟ್ಟಿರುವ ವಿಶ್ವಾಸ ಎಂತದ್ದು. ಈ ವಿಶ್ವಾಸ ಉಳಿಸಿಕೊಳ್ಳುವುದಕ್ಕೆ ಅವರ ಮಂತ್ರಿಮಂಡಲ ಸಹಕಾರ ನೀಡುತ್ತಾ.? ಕಾದು ನೋಡಬೇಕು. ಅಥವಾ ರಾಹುಲ್ ಪ್ರಧಾನಿಯಾದರೆ ಆಡಳಿತದ ಕಿಂಚಿತ್ತೂ ಅರಿವಿಲ್ಲದ ಈ ಮುಗ್ಧ ಹುಡುಗ ದೇಶವನ್ನು ಮುನ್ನಡೆಸಲು ಸಾಧ್ಯವೇ.? ಪಕ್ಷದ ಹಿರಿಯರ ಮಾತುಗಳನ್ನೇ ಕೇಳದ ಈಗಿನ ರಾಜಕಾರಣಿಗಳು ಈ ಬಾಲಕನ ಮಾತನ್ನು ಕೇಳುತ್ತಾರ.? ಯುವಕರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಮತದಾರನನ್ನು ಮರಳು ಮಾಡುವ ತಂತ್ರ ವರ್ಕೌಟ್ ಆಗುತ್ತಾ.? ಭಾರತವನ್ನೇ ಗೆಲ್ಲಿಸಲು ಹೊರಟಿರುವ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿಯುತ್ತಾ.? ಹತ್ತು ವರ್ಷಗಳ ಕಾಂಗ್ರೆಸ್ ನ ಆಡಳಿತ ಜನಕ್ಕೆ ನಿಜವಾಗಿಯೂ ಬೇಸರವೆನಿಸಿದೆಯಾ.? ರಾಜ್ಯ ಕಾಂಗ್ರೆಸ್ ಅನ್ನು ಪರಿಗಣಿಸಿ ಅವರಿಗೆ ಅಧಿಕಾರ ಕೊಡುತ್ತರಾ.? ದೇಶದ ಪ್ರತಿಯೊಬ್ಬ ಮತದಾರನಿಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ವ್ಯತ್ಯಾಸ ಗೊತ್ತಿದೆಯೇ.? ಬಹುಶಃ ಈ ಚುನಾವಣೆ ಎರಡು ಪಕ್ಷಗಳಿಗಿಂತ ಹೆಚ್ಚಾಗಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವಿನ ನೇರ ಹಣಾಹಣಿ. ಆದರೆ ರಾಹುಲ್ ಗಾಂಧಿಗೆ ಜನಪ್ರಿಯತೆ ಕಡಿಮೆ ಇರುವುದರಿಂದ ಬಿ‌ಜೆ‌ಪಿ ಪಾಳಯಕ್ಕೆ ಲಾಭವಾಗಬಹುದು. 2009ರಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಿದ್ದಿದ್ದರೆ ಐದು ವರ್ಷದಲ್ಲಿ ಜನಪ್ರಿಯತೆ ಸಿಗುತ್ತಿತ್ತು. ಈಗ ಏಕಾಏಕಿ ತಂದು ನಿಲ್ಲಿಸಿದರೆ ಜನ ಮೆಚ್ಚುತ್ತರಾ.? ಸೋನಿಯಾ ಗಾಂಧಿಯವರ ಹಿಡಿತ ಸರ್ಕಾರದ ಮೇಲೆ ಇದ್ದೂ ಸಹ ಇಷ್ಟೊಂದು ಹಗರಣಗಳ ಸರಮಾಲೆ ಕೊರಳಿಗೆ ಸುತ್ತಿಕೊಂಡಿದ್ದು ಈ ಚುನಾವಯಲ್ಲಿ ಕಾಂಗ್ರೆಸ್ ಗೆ ಮಾರಕವಾಗಬಹುದು. 2002ರ ಗೋದ್ರಾ ಹತ್ಯಾಕಾಂಡವನ್ನು ಮನಸಲ್ಲಿಟ್ಟುಕೊಂಡು ಮುಸ್ಲಿಮರು ಬಿ‌ಜೆ‌ಪಿ ಯ ಕೈ ಬಿಡುತ್ತಾರ.? ಅಥವಾ ಅಭಿವೃದ್ದಿಯ ಮತ್ತು ಭ್ರಷ್ಟಾಚಾರ ಮುಕ್ತ ದೇಶವನ್ನು ಕಟ್ಟುವುದಕ್ಕೆ ಗೋದ್ರ ಹತ್ಯಾಕಾಂಡ ಮರೆಯಾಗುತ್ತ.? ಸಮೀಕ್ಷೆಗಳನ್ನೂ ತಿರುಚುವ ಶಕ್ತಿ ಮತದಾರನಿಗಿದೆ ಆದರೂ  ಮೇಲ್ನೋಟಕ್ಕೆ ಯುವ ಜನಾಂಗ ಮತ್ತು ವಿಧ್ಯಾವಂತರು ನರೇಂದ್ರ  ಮೋದಿಯವರ ಹಿಂದೆ ಬಿದ್ದಿರುವ ಹಾಗಿದೆ. ಇನ್ನು ಹಳ್ಳಿಗಳಲ್ಲಿ ಪಕ್ಷ ಎಷ್ಟೇ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದ್ದರೂ ಅಮ್ಮನ ಪಕ್ಷ ಎಂದು ಕಾಂಗ್ರೆಸ್ ಗೆ ಮತ ಹಾಕುವವರು ಇವತ್ತಿಗೂ ಸಿಗುತ್ತಾರೆ. ನರೇಂದ್ರ ಮೋದಿಯವರಿಂದ ಜನ ಹೆಚ್ಚನ್ನು ನಿರೀಕ್ಷಿಸಿದ್ದಾರೆ. ಅದನ್ನೆಲ್ಲಾ ಅವರು ನಿಜ ಮಾಡುವರೆ.? ಕಾದು ನೋಡಬೇಕು. ಆದರೆ ಜನಸಾಮಾನ್ಯನ ಪ್ರತಿದಿನದ ಕೆಲಸಕ್ಕೆ  ಯಾವುದೇ ರಿಯಾಯಿತಿ ಸಿಗುವುದಿಲ್ಲ. 2014ರ ಮಹಾಸಮರದಷ್ಟು ಮಹತ್ವ ದೇಶದ ಇತಿಹಾಸದಲ್ಲೇ ಯಾವ ಚುನಾವಣೆಗೂ ಇರಲಿಲ್ಲ ಅನಿಸುತ್ತೆ.


ಇನ್ನೂ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿ‌ಎ, ಕಾಂಗ್ರೆಸ್ ನೇತೃತ್ವದ ಯುಪಿಎ ಇವೆರಡನ್ನೂ ನಂಬದ ಮತದಾರ ತೃತೀಯ ರಂಗದ ಕಡೆ ವಾಲಿದ್ದಾನೆ. ಚುನಾವಣೆ ಸಮಯದಲ್ಲಿ ಮಾತ್ರ ಅಸ್ತಿತ್ವಕ್ಕೆ ಬರುವ ತೃತೀಯ ರಂಗದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ, ರೆವಲ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯ ಫಾರ್ವರ್ಡ್ ಬ್ಲಾಕ್, ಸಮಾಜವಾದಿ ಪಾರ್ಟಿ, ಜನತಾ ದಳ(ಯುನೈಟೆಡ್), ಜನತಾ ದಳ(ಸೆಕ್ಯುಲರ್), ಜಾರ್ಖಾಂಡ್ ವಿಕಾಸ್ ಮೋರ್ಚಾ, ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಹಾಗೂ ಇತರೆ ಪಕ್ಷಗಳು ಇವೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಈಗಾಗಲೇ ನರೇಂದ್ರ ಮೋದಿಯವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ

ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬೇತರ ಪ್ರಧಾನಿ ಅಭ್ಯರ್ಥಿಯ ಕೊರತೆಯಾದರೆ, ತೃತೀಯ ರಂಗದಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಿಗೆ ಲೆಕ್ಕವಿಲ್ಲ, ಜೆ‌ಡಿಯು ನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಪ್ರಧಾನಿ ಜೆ‌ಡಿ‌ಎಸ್ ನ ಎಚ್.ಡಿ.ದೇವೇಗೌಡ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಸ್‌ಪಿ ಯ ಮುಲಾಯಂ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿ‌ಎಸ್‌ಪಿ ಯ ಕುಮಾರಿ ಮಾಯಾವತಿ ಇವರು ಪ್ರಮುಖರು. ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ತೃತೀಯ ರಂಗ ರಚಿಸಿಕೊಂಡಿದ್ದಾರೆ, ಪ್ರತಿಯೊಂದು ಪಕ್ಷದಲ್ಲೂ ಒಬ್ಬೊಬ್ಬ ಪ್ರಧಾನಿ ಇರುವುದರಿಂದ ಪ್ರಧಾನಿ ಆಯ್ಕೆ ತಲೆ ನೋವಾಗಿ ಪರಿಣಮಿಸಬಹುದು. ಒಂದು ವೇಳೆ ತೃತೀಯ ರಂಗ ಬಹುಮತ ಪಡೆದರೂ ಸರ್ಕಾರ ರಚಿಸುವಲ್ಲಿ ವಿಪಲವಾಗಬಹುದು. ಕಾರಣ ಒಂದೇ ಹುದ್ದೆಗೆ ಹತ್ತಾರು ಅಭ್ಯರ್ಥಿಗಳು. ಅನುಸರಿಸಿಕೊಂಡು ಹೋಗುವ ಜಾಯಮಾನ ಯಾರಿಗೂ ಇಲ್ಲ ಏಕೆ.? ಅಧಿಕಾರದ ದಾಹ. ಅನುಸರಿಸಿಕೊಂಡು ಪ್ರಧಾನಿಯನ್ನು ಆರಿಸಿದರೂ ಸರ್ಕಾರಕ್ಕೆ ಭವಿಷ್ಯವಿಲ್ಲ. ಸಾಕ್ಷಿ ಇತಿಹಾಸದ ಪುಟಗಳು. ಸರ್ಕಾರ ರಚನೆಯ ಸಮಯದಲ್ಲಿ ಅನುಸರಿಸಿಕೊಳ್ಳದೆ ತೃತೀಯ ರಂಗ ಬಿಟ್ಟು ಯುಪಿಎ ಅಥವಾ ಎನ್‌ಡಿಎ ಕಡೆಗೆ ವಾಲುವ ಪಕ್ಷಗಳೇ ಹೆಚ್ಚು. ಎನ್‌ಡಿಎ ತೆಕ್ಕೆಯಲ್ಲಿದ್ದ ಜೆ‌ಡಿ‌ಯೂ, ನರೇಂದ್ರ ಮೋದಿ ಹೆಸರು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುತ್ತಿದ್ದಂತೆ ಹೊರ ನಡೆದು ತೃತೀಯ ರಂಗ ರಚಿಸಿದರು. ಇದರಿಂದ ಈ ಚುನಾವಣೆ ಬಿಹಾರದಲ್ಲಿ ಜೆ‌ಡಿ‌ಯೂ ಗೆ ಲಾಭ ತಂದು ಕೊಡುವ ಹಾಗೆ ಕಾಣುತ್ತಿಲ್ಲ. ಉತ್ತರಪ್ರದೇಶದಲ್ಲಿ ಎಸ್‌ಪಿ ಆಡಳಿತವಿದ್ದರೂ, ಆಡಳಿತ ವಿರೋಧಿ ಅಲೆ ಕಾಣುತ್ತಿದ್ದು ಬಿ‌ಜೆ‌ಪಿಗೆ ಲಾಭವಾಗುವ ಸಾಧ್ಯತೆ ಇದೆ. ಬಿ‌ಎಸ್‌ಪಿ ಹೀನಾಯ ಸೋಲು ಅನುಭವಿಸುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ದೇವೇಗೌಡರು ಕರ್ನಾಟಕದಿಂದ ಮೂರು ಸಂಸದರನ್ನು ಕೊಟ್ಟರೆ ಹೆಚ್ಚು. ಜಯಲಲಿತಾ ಮಾತ್ರ 20-22 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಉಳಿದಂತೆ ಗುಜರಾತ್. ಗೋವ, ಮಧ್ಯ ಪ್ರದೇಶ್, ದೆಹಲಿ, ರಾಜಸ್ಥಾನ್ ಹಾಗೂ ಛತ್ತೀಸ್ ಘರ್ ನಲ್ಲಿ ಬಿ‌ಜೆ‌ಪಿ ಪರ ಭಾರಿ ಅಲೆ ಇದೆ.  ಕರ್ನಾಟಕ 50-50, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಸಮಬಲದ ಹೋರಾಟ. ಆಮ್ ಆದ್ಮಿ ಪಾರ್ಟಿ ಯ ಎಫೆಕ್ಟ್ ಕರ್ನಾಟಕದಲ್ಲಿ ಕಾಣುತ್ತಿಲ್ಲ.  
 

ಎನ್‌ಡಿಎ, ಯುಪಿಎ ಹಾಗೂ ತೃತೀಯ ರಂಗ ಮೂರನ್ನೂ ಸೇರದೇ ಒಂಟಿಯಾಗಿ ಕೆಲವೊಂದು ಪಕ್ಷಗಳಿವೆ. ಈ ಪಕ್ಷಗಳು ಗೆದ್ದ ಎತ್ತಿನ ಬಾಲ ಹಿಡಿಯುವ ಬುದ್ಧಿವಂತರು. ಇವರು ಚುನಾವಣಾ ಫಲಿತಾಂಶದ ನಂತರ ಸರ್ಕಾರ ರಚಿಸುವ ಪಕ್ಷಕ್ಕೆ ಬೆಂಬಲ ಸೂಚಿಸಿ ಒಂದೆರಡು ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ತೆಲುಗು ದೇಶಂ ಪಾರ್ಟಿ, 1999ರಿಂದ 2004ರ ವಾಜಪೇಯಿ ಅವರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಇವರು ಈ ಭಾರಿ ಸಹ ಎನ್‌ಡಿಎ ಗೆ ಬೆಂಬಲ ಸೂಚಿಸಬಹುದು. ವೈ‌ಎಸ್‌ಆರ್ ಕಾಂಗ್ರೆಸ್, ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಕರ್ ರೆಡ್ಡಿ ನಿಧನದ ನಂತರ ಕಾಂಗ್ರೆಸ್ಸ್ ನಿಂದ ಹೊರನಡೆದು ಅವರ ಪುತ್ರ ಜಗನ್ ಸ್ಥಾಪಿಸಿದ ಪಕ್ಷ ಇವರೂ ಸಹ ಎನ್‌ಡಿಎ ತೆಕ್ಕೆಕೆ ಬೀಳಬಹುದು. ಆಂಧ್ರ ವಿಭಜನೆಯನ್ನು ಖಂಡಿಸಿ ಕಾಂಗ್ರೆಸ್ ನಿಂದ ಹೊರ ನಡೆದು ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸ್ಥಾಪಿಸಿರುವ ಜೈ ಸಮೈಕಾಂಧ್ರ ಪಕ್ಷ ತೃತೀಯ ರಂಗಕ್ಕೆ ಬೆಂಬಲ ಸೂಚಿಸಬಹುದು. ಪ್ರತ್ಯೇಕ ತೆಲಾಂಗಣಕ್ಕಾಗಿ ಹೋರಾಡಿದ್ದ ತೆಲಾಂಗಣ ರಾಷ್ಟ್ರೀಯ ಸಮಿತಿ ಪಕ್ಷ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಾಧ್ಯತೆಯಿದೆ. ಇನ್ನೂ ತಮಿಳುನಾಡಿನ ಕರುಣಾನಿಧಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಓಡಿಶಾದ ಬಿಜು ಪಟ್ನಾಯಕ್ ಚುನಾವಣಾ ಫಲಿತಾಂಶದ ನಂತರ ಗೆದ್ದ ಎತ್ತಿನ ಬಾಲ ಹಿಡಿಯಬಹುದು.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಗಳ ಹಗರಣಗಲಿಗೆ ಲೆಕ್ಕವೇ ಇಲ್ಲ. ನಕಲಿ ಗಾಂಧಿ ಕುಟುಂಬದಿಂದ ಶುರುವಾದ ಪ್ರಧಾನಿ ಹುದ್ದೆ ಅವರ ಅಧಿಕಾರದ ಲಾಲಸೆಗೆ ಒಂದೇ ಕುಟುಂಬದ ಸಾಲು ಸಾಲು ಪ್ರಧಾನಿಗಳು. ಕಳೆದ ಹತ್ತು ವರ್ಷಗಳಲ್ಲಿ ಗಾಂಧಿ ಕುಟುಂಬದ ಹಿಡಿತದ ಸರ್ಕಾರದಲ್ಲಿ ಅಭಿವೃದ್ದಿಗಿಂತ ಹಗರಣಗಳೇ ಹೆಚ್ಚು. ಸಮರ್ಥವಾದ ಹೊಡೆತ ಕೊಟ್ಟು ಜನರಿಗೆ ಆತ್ಮ ವಿಶ್ವಾಸ ತುಂಬಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇನ್ನೊಮ್ಮೆ ಆಯ್ಕೆಯಾಗುವಲ್ಲಿ ವಿಫಲರಾದರು. ಈ ಭಾರಿಯಾದರೂ  ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಮರ್ಥ ಪ್ರಧಾನಿ ಆಯ್ಕೆಯಾಗುತ್ತಾರ.? ಕಾಲ್ಕೆರೆದು ಕದನಕ್ಕೆ ಬರುವ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ, ಚೈನಾ, ಮಯನ್ಮಾರ್, ಬಾಂಗ್ಲಾದೇಶ್ ಗಳಿಗೆ  ಎದೆ ಕೊಟ್ಟು ನಿಲ್ಲುವ ಮಹಾಪುರುಷನ ಉದಯ ಆಗುತ್ತಾ.? ಬಲವಾದ ಗಡಿ ನಿರ್ಮಾಣವಾಗುತ್ತಾ.? ಸ್ವಾಮಿ ವಿವೇಕಾನಂದರ ಭಾರತ ನಿರ್ಮಾಣವಾಗುತ್ತಾ.? ಭಾರತದ ಅಭಿವೃದ್ದಿಗೆ ಮುನ್ನುಡಿ ಬರೆಯುತ್ತದೆಯೇ ಈ ಚುನಾವಣೆ.? ರೈತ ದೇಶದ ಬೆನ್ನೆಲುಬು, ಬೆನ್ನೆಲುಬೇ ಇಲ್ಲದ ದೇಶ ಹೇಗೆ ಉದ್ದಾರವಾಗುತ್ತದೆ. ರೈತರನ್ನು ಉತ್ತೇಜಿಸುವ ಸರ್ಕಾರ ಬರುತ್ತಾ.? ಭಾರತದಲ್ಲಿ ವಿದ್ಯುತ್ ನೋಡದ ಸ್ಥಳಗಳು ವಿದ್ಯುತ್ ನೋಡುತ್ತವಾ.? ಡಾಂಬಾರು ನೋಡದ ರಸ್ತೆ ಡಾಂಬಾರು ನೋಡುತ್ತವಾ.? ದೇಶೀಯ ಕ್ರೀಡೆಗಳು ಮರುಕಳಿಸುತ್ತವಾ.? ವಿಜಯನಗರದ ಶ್ರೀ ಕೃಷ್ಣದೇವರಾಯಣ ಸಾಮ್ರಾಜ್ಯ ಮತ್ತೆ ಉದಯವಾಗುತ್ತಾ.? ಪಾಶ್ಚಾತ್ಯ ಸಂಸ್ಕೃತಿಯಿಂದ ಮುಚ್ಚಿ ಹೀಗಿರುವ ಭಾರತ ಸಂಸ್ಕೃತಿ ಮತ್ತೆ ಕಣ್ಣಿಗೆ ಕಾಣಿಸುತ್ತಾ.? ಒಟ್ಟಾರೆ ಜಗತ್ತೇ ಭಾರತದ ಕಡೆ ಮುಖಮಾಡಿ ನೋಡುವ ಕಾಲ ಸನಿಹವಾಗಿದೆಯಾ? ಪ್ರಧಾನಿ ಹುದ್ದೆಗೆ ಮರಿಯಾದೆ ತರುವ ಮೂರನೇ ವ್ಯಕ್ತಿ ಯಾಗುತ್ತಾರಾ ಈ ಭಾರಿಯ ಪ್ರಧಾನಿ.? ನಿರೀಕ್ಷಿಸಿ..


ಪ್ರಧಾನಿ ಯೋಬ್ಬರೇ ಸಮರ್ಥ ಮತ್ತು  ಭ್ರಷ್ಟಾಚಾರ ವಿರೋಧಿಯಾಗಿದ್ದರೇ ಸಾಕೇ.? ಮಿತ್ರಪಕ್ಷಗಳು, ಮಂತ್ರಿ ಮಂಡಲ, ಪಕ್ಷದ ವರಿಷ್ಠರು, ಸಂಸದರು, ಶಾಸಕರು, ಸಚಿವಾಲಯಗಳ ಅಧಿಕಾರಿಗಳು, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಹ ಭ್ರಷ್ಟಾಚಾರ ವಿರೋದಿಗಳಾಗಬೇಕು. ಲೋಕ್ ಪಾಲ್ ಬಿಲ್ ಮಂಡಿಸಿದರೆ ಭ್ರಷ್ಟಾಚಾರ ನಿರ್ಮೂಲನೆ ಹಾಗುವುದೇ.? ಖಂಡಿತ ಇಲ್ಲ. ಪ್ರಧಾನಿಯಿಂದ ಹಿಡಿದು ಪಿ‌ಡಿ‌ಓ ಅಧಿಕಾರಿ ವರೆಗೆ ಎಲ್ಲರೂ ಭ್ರಷ್ಟಾಚಾರ ವಿರೋಧಿಗಳಾಗಬೇಕು. ಆಗುತ್ತದೆಯೇ? ಖಂಡಿತಾ ಇಲ್ಲ. ಆ ದೇವರೇ ಇಳಿದು ಬಂದರೂ ಇದು ಸಾಧ್ಯವಿಲ್ಲ. ಲಂಚ ಕೊಡುವವನು ನಿರಾಕರಿಸಬೇಕು, ಲಂಚ ತೆಗೆದುಕೊಳ್ಳುವವನೂ ನಿರಾಕರಿಸಬೇಕು.  ಆಗ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇದನ್ನು ಬಿಟ್ಟು ಯಾವುದೇ ಬಿಲ್ ತಂದರು ಬ್ರಷ್ಟಾಚಾರ ತಡೆಯುವಲ್ಲಿ ಸಪಲವಾಗುವುದಿಲ್ಲ.  ಸಮರ್ಥ ಅಭ್ಯರ್ಥಿಗೆ ಮತ ಹಾಕಿ. ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ನಳನಳಿಸುವಂತೆ ಮಾಡೋಣ... 


ರೂಪೇಶ್ ಆರ್ 

No comments:

Post a Comment