ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, February 18, 2014

ಶ್ರದ್ದಾಂಜಲಿ

Krupe : Kannada Prabha

ವರ್ತಮಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುದೊಡ್ಡ ಹೆಸರು ಆರ್.ಕೆ. ಶ್ರೀಕಂಠನ್ ಅವರದ್ದು. ಸಾಹಿತ್ಯ ಶುದ್ಧ, ಶ್ರುತಿ ಶುದ್ದ, ಸ್ವರ ಶುದ್ದ ಸಂಗೀತ ಪರಂಪರೆಯಲ್ಲಿ  94 ವರ್ಷಗಳ ತುಂಬು ಜೀವನವನ್ನು ನಡೆಸಿದವರು, ಅವರು.
ಆರ್.ಕೆ. ಶ್ರೀಕಂಠನ್ ಅವರು ಹುಟ್ಟಿದ್ದು ಹಾಸನ ಜಿಲೆಯ ರುದ್ರಪಟ್ಟಣಂ ಎಂಬ ಸಂಗೀತವೇ ಉಸಿರಾದ ಊರಿನಲ್ಲಿ 14 ನೇ ಜನವರಿ 1920ರಲ್ಲಿ. ಇವರ ತಂದೆ ಕೃಷ್ಣ ಶಾಸ್ತ್ರಿಗಳು ಒಳ್ಳೆಯ ಗಮಕಿಗಳು. ಕವಿಗಳು, ನಾಟಕಾಗಾರರು ಆಗಿದ್ದರು.. ತಾಯಿ ಸಣ್ಣಮ್ಮನವರು ಕೂಡ ಒಳ್ಳೆಯ ಗಾಯಕಿ ಆಗಿದ್ದರು ಆದರೆ ದುರದೃಷ್ಟವಶಾತ್ ಆರ್.ಕೆ. ಶ್ರೀಕಂಠನ್ ಅವರು 2 ವರ್ಷ ಚಿಕ್ಕವರಾಗಿದ್ದಾಗಲೇ ತಾಯಿ ತೀರಿಕೊಂಡರು. ಇವರ ತಾತ ವೀಣೆ ನಾರಾಯಣ ಸ್ವಾಮಿಯವರು.. ವೀಣೆ ಶೇಷಣ್ಣ & ವೀಣೆ ಸುಬ್ಬಣ್ಣನವರ ಸಮಕಾಲೀನರು.
ಶ್ರೀಯುತರು ತಮ್ಮ ಪ್ರಾಥಮಿಕ & ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಮೈಸೂರಿನ ಸದ್ವಿದ್ಯಾ ಪಾಠ ಶಾಲಾ ಹಾಗೂ ಡಿ. ಬನುಮಯ್ಯ ಪ್ರೌಢ ಶಾಲೆಗಳಲ್ಲೂ, ಬಿ.ಎ. ಪದವಿಯನ್ನು ಮಹಾರಾಜ ಕಾಲೇಜಿನಲ್ಲೂ ಪಡೆದುಕೊಂಡರು.
ಸಂಗೀತವಂತೂ ಮನೆತನದಲ್ಲೇ ಇದ್ದುದರಿಂದ ತಂದೆಯೇ ಅವರಿಗೆ ಮೊದಲ ಗುರುವಾಗಿದ್ದರು. ನಂತರದಲ್ಲಿ ವೀಣೆ ಸುಬ್ಬಣ್ಣ & ಪಿಟೀಲು ಚೌಡಯ್ಯನವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ಅವರ ಸೋದರ ಆರ್.ಕೆ. ವೆಂಕಟರಮಣ ಶಾಸ್ತ್ರಿಯವರಲ್ಲಿ ಸಂಗೀತ ಅಭ್ಯಾಸ ಮುಂದುವರಿಸಿದರು.ಇವರು ಸಂತ ತ್ಯಾಗರಾಜ ಸ್ವಾಮಿ ಗುರುಪರಂಪರೆಗೆ ಸೇರಿದವರು.
ಹರೆಯದ ದಿನಗಳಲ್ಲಿ ಮೈಸೂರು ಸಂಸ್ಥಾನದಲಿ ಒಡೆಯರ ಪ್ರೋತ್ಸಾಹದಲ್ಲಿ ನಡೆಯುತ್ತಿದ್ದ ಎಲ್ಲ ಸಂಗೀತಕಚೇರಿಗಳಲ್ಲೂ ತಪ್ಪದೆ ಪಾಲ್ಗೊಳ್ಳುತ್ತಿದ್ದ ಇವರು ಅದೇ ಕಾಲದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆರೈಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತದಿಂದ ಪ್ರಭಾವಿತರಾಗಿದ್ದರು.
ಅತ್ಯಂತ ಸಾಹಿತ್ಯಶುದ್ದವೂ ಸ್ವರಬದ್ದವೂ ಆದ ಅವರ ಸಂಗೀತ ಕಚೇರಿಗಳು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿವೆ.ಹಾಗೆಯೇ ಅವರ ಕಚೇರಿಗಳಲ್ಲಿ ಬಹಳವಾಗಿ ಕನ್ನಡ ಕೃತಿಗಳು, ದಾಸರ ರಚನೆಗಳು ಬಳಕೆಯಾಗುತ್ತಿದವು.
ಅವರ ಕೊನೆಯ ದಿನಗಳ ವರೆಗೂ ಅವರ ಮಗ ಆರ್.ಎಸ್. ರಮಾಕಾಂತ ಅವರೊಂದಿಗೆ ಕಚೇರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿದುಷಿ ಎಂ.ಎಸ್. ಶೀಲಾ, ಟಿ.ಎಸ್. ಸತ್ಯವತಿ, ಎಚ್.ಕೆ. ನಾರಾಯಣ್ ಹಾಗೂ ಮಗಳು ಗಾಯಕಿ ರತ್ನಮಾಲಾ ಪ್ರಕಾಶ್ ಕೂಡ ಅವರ ಪ್ರಸಿದ್ದ ಶಿಷ್ಯ ವೃಂದ.
ಅವರಿಗೆ ಸಂಗೀತ ಒಲಿದಿದ್ದಂತೆಯೇ ಬೇಕಾದಷ್ಟು ಪ್ರಶಸ್ತಿ-ಪುರಸ್ಕಾರಗಳು ಹುಡುಕಿ ಬಂದಿದ್ದವು.
1979- ಕೇಂದ್ರ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1981- ರಾಜ್ಯ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ
1995- ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಬಿರುದು
1994- ಟಿ. ಚೌಡಯ್ಯ ರಾಷ್ಟ್ರೀಯ ಸಂಗೀತ ಪ್ರಶಸ್ತಿ
ಕರ್ನಾಟಕ ಸರ್ಕಾರ ಕೊಡಮಾಡುವ ಕನಕ-ಪುರಂದರ ಪ್ರಶಸ್ತಿ
2011 - ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ
ಹೀಗೆ ನೂರಾರು ಪ್ರಶಸ್ತಿ- ಪುರಸ್ಕಾರಗಳು ದೊರೆತಿವೆ.
 ಇಷ್ಟೆಲ್ಲಾ ಸಾಧನೆಯ ಈ ರಾಜ್ಯದ ಕರ್ನಾಟಕ ಸಂಗೀತದ ಮೇರು ಪ್ರತಿಭೆ 2014, ಫೆಬ್ರವರಿ 17 ರ ಸೋಮವಾರ ರಾತ್ರಿ ಶಾಶ್ವತವಾಗಿ ತಮ್ಮ ಸ್ವರ & ಉಸಿರಿನ ಸಂಚಾರ ನಿಲ್ಲಿಸಿದರು.
 ಆದರೆ ಅವರು ಹಾಡಿ ಖ್ಯಾತಿಗೊಳಿಸಿದ ನೂರಾರು ಕನ್ನಡ ಕೃತಿಗಳು ಇನ್ನೂ ಅಲಾಪಿಸುತ್ತಲೆ ಇವೆ.


-
- ರಾಜೇಂದ್ರ ಪ್ರಸಾದ್, ಮಂಡ್ಯ

No comments:

Post a Comment