ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, October 14, 2013

ಯುಗಾದಿ


 ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಶ್ರೀ ಶರತ್ ಚಕ್ರವರ್ತಿ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.



No comments:

Post a Comment