ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 13, 2012

ನನಗೆ ಹಿಡಿಸಿದ ಕೆಲವು ನಿಜಗಳು..... ನಿಮಗೂ ನಿಜವನಿಸೀತು...




ನಮ್ಮ ದೇಶದ ರೈತರ ಶಕ್ತಿಯನ್ನು ವೃತ್ತಿಪರ ನಿರ್ವಹಣೆಯೊಂದಿಗೆ ಕಲೆಹಾಕಿದರೆ ಏನಾಗಬಹುದು? ಅವರು ಏನನ್ನು ತಾನೆ ಸಾಧಿಸುವುದು ಅಸಾಧ್ಯ? ಭಾರತ ಏನನ್ನು ತಾನೆ ಹೊಂದಲಾರದು? ಆದರೆ ಇದನ್ನೆಲ್ಲಾ ಆಗ ಮಾಡುವ ಮುನ್ನ ಬಾರ್ಬರ ವಾರ್ಡ್ ಹೇಳಿದ "ಪಾಲ್ಗೊಂಡ, ಪೂರ್ಣ ಸಹಕಾರದ ನಿಜವಾದ ಅಸ್ತಿಭಾರ" ಹಾಕಬೇಕು. ಪಟ್ಟಣ ಮತ್ತು ಹಳ್ಳಿಗಳ ನಡುವೆ, ಕೈಗಾರಿಕೆ ಮತ್ತು ಕೃಷಿಗಳ ನಡುವೆ ಇರುವ ದಟ್ಟವಾದ ವ್ಯತ್ಯಾಸವನ್ನು ಸರಿಪಡಿಸಬೇಕಾದರೆ ರೈತರನ್ನು ಸಂಘಟಿಸುವುದು ಅತ್ಯಗತ್ಯವಾಗಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು "ಆನಂದ್"ನಲ್ಲಿ ನಮ್ಮ ಜನರನ್ನು ತೀರ್ಮಾನ ತೆಗೆದುಕೊಳ್ಳುವ ಕಾರ್ಯವಿಧಾನಗಳಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಧೆಗಳನ್ನು ರೂಪಿಸುವ ಅಗತ್ಯತೆ ನಮಗೆ ಕಂಡುಬಂತು. ಜನ ಸಾಮಾನ್ಯರ ಮಟ್ಟದಲ್ಲಿ ನಾವು ಪ್ರಜಾಪ್ರಭುತ್ವವನ್ನು ಹೊಂದಿಲ್ಲವಾದರೆ ಡೆಲ್ಲಿಯಲ್ಲಿ ಅದು ಇದ್ದು ಏನು ಪ್ರಯೋಜನ? ತಮ್ಮತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ನಮ್ಮ ಭಾವಿ ನಾಯಕರು ಕಲಿಯುವ ಶಾಲೆ ಹಳ್ಳಿಯ ಸಹಕಾರಿ ಸಂಘಗಳಲ್ಲದೆ ಮತ್ತೆಲ್ಲಿ? ನಿರ್ವಹಣೆ ಮತ್ತು ವ್ಯಾಪಾರ ವಾಹಿವಾಟುಗಳ ಸ್ನಾತಕೋತ್ತರ ತರಬೇತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಕಾಲೇಜುಗಳು ತಾಲೂಕು ಅಥವಾ ಜಿಲ್ಲಾ ಯೂನಿಯನ್'ಗಳೇ ಅಲ್ಲವೆ?

ದೆಹಲಿಯಲ್ಲಿ ಫ್ಲೈ ಓವರ್ ಗಳನ್ನು ಕಟ್ಟುವುದು ತಪ್ಪಲ್ಲ, ನಮ್ಮ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳನ್ನು ನಾಡಿನುದ್ದಕ್ಕೂ ನಾವು ನಿರ್ಮಿಸದಿರುವುದು ಅಪರಾಧ. ನಮ್ಮ ರಾಜಧಾನಿ ಬಣ್ಣ ಬಣ್ಣದ ಬೆಳಗು ಸೂಸುವ ಕಾರಂಜಿಗಳನ್ನು ಹೊಂದಿರುವುದು ಎಂದೂ ತಪ್ಪಲ್ಲ, ಏನೆ ಆದರೂ ದೆಹಲಿ ಸುಂದರವಾಗಿರಲೇಬೇಕು. ಆದರೆ ನಾವು ನಮ್ಮ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಧೆ ಮಾಡದಿರುವುದು, ಹನಿ ನೀರಿಗಾಗಿ ಗ್ರಾಮೀಣ ಜನ ಮೈಲುಗಟ್ಟಲೆ ಅಂಡಲೆಯುವುದು ಅನ್ಯಾಯ. ಮುಂಬಯಿಯಲ್ಲಿ ಆಧುನಿಕ ಖಾಸಗಿ ಆಸ್ಪತ್ರೆ ಇರುವುದಾಗಲಿ ಇಲ್ಲವೇ ಏಮ್ಸ್ ದೆಹಲಿಯಲ್ಲಿರುವುದಾಗಲಿ ತಪ್ಪೇನೂ ಅಲ್ಲ, ಆದರೆ ಹಳ್ಳಿಯ ಬಡವನ ಆಗತಾನೆ ಜನಿಸಿದ ಮಗುವಿಗೆ ಸಂಭಾವ್ಯ ಕುರುಡು ತಪ್ಪಿಸಲು ಎರಡೇ ಎರಡು ಹನಿ ಔಷಧಿ ವ್ಯವಸ್ಥೆ ಮಾಡದಿರುವುದು ಪರಮ ಘಾತುಕತನ. ಇದ್ದಕ್ಕೆಲ್ಲ ಕೇವಲ ಮುಂದಾಲೋಚನೆಯ ಮುತುವರ್ಜಿ ಸಾಕೆ ಸಾಕು, ಹಣದ ಅಗತ್ಯ ತೀರಾ ಕಡಿಮೆ ಆದರೂ ಪಂಚತಾರಾ ಆಸ್ಪತ್ರೆಗಳನ್ನು ಕೋಟ್ಯಾಂತರ ಖರ್ಚು ಮಾಡಿ ಮಹಾನಗರಗಳಲ್ಲಿ ಕಟ್ಟಲು ಮುಂದಾಗುತ್ತೇವೆ. ಕುಗ್ರಾಮಗಳಲ್ಲಿ ಜೀವರಕ್ಷಕ ಮದ್ದುಗಳ ಕಿರು ಆರೋಗ್ಯ ಘಟಕಗಳನ್ನ ಸ್ಥಾಪಿಸಲು ಮರೆಯುತ್ತೇವೆ. ಹೀಗೆ ಆಗುತ್ತಿರುವುದಾದರೂ ಏಕೆ? ಏಕೆಂದರೆ ನೀತಿ ನಿರೂಪಿಸುವ ಅಧಿಕಾರ ನಮ್ಮ ಗಣ್ಯರ ಕೈಯಲ್ಲಿ ಇದ್ದು ಮತ್ತು ಸ್ವಾಭಾವಿಕವಾಗಿಯೋ ಇಲ್ಲವೇ ಅವರ ಅರಿವಿಗೆ ಬಾರದೆ ನಿರೂಪಿಸುವ ಕಾನೂನುಗಳೆಲ್ಲ ಅವರಿಗೆ ಹಾಗು ಇದನ್ನ ಓದುತ್ತಿರುವ ನಮ್ಮಂತಹ "ನಾಗರೀಕ"ರಿಗೆ ಮಾತ್ರ ಅನುಕೂಲವಾಗುವಂತೆಯೇ ಇರುತ್ತದೆ. ಹೀಗಾಗಿ ನಾಚಿಕೆಯೇ ಇಲ್ಲದೆ ಎಲ್ಲರಿಗೂ ಸೇರಿದ ಸಂಪತ್ತುಗಳನ್ನು ನಾವಷ್ಟೆ ನಿರ್ಲಜ್ಜರಾಗಿ ಅನುಭವಿಸುತ್ತಿದ್ದೇವೆ. ಇನ್ನೂ ದುರಂತವೆಂದರೆ ಇದರ ಅರಿವೇ ನಮಗಿಲ್ಲ!

-ವರ್ಗೀಸ್ ಕುರಿಯನ್ (ಅಮೂಲ್ ಯಶಸ್ಸಿನ ರೂವಾರಿ)

No comments:

Post a Comment