ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, September 26, 2012

ಮರಳುಗಾಡಿನ ಮರ್ಮರ...

ಭೂಮಂಡಲದಲ್ಲಿ ಅರೇಬಿಯಾ ಭೂಭಾಗ ಬೃಹತ್ ಮರಳುಗಾಡು ವ್ಯಾಪಿಸಿರುವ ಒಣ ಪ್ರದೇಶ. ಅದರ ಪೂರ್ವದಿಕ್ಕಿನಲ್ಲಿ ಪರ್ಷಿಯನ್ ಕೊಲ್ಲಿ, ಪಶ್ಚಿಮಕ್ಕೆ ಕೆಂಪುಸಮುದ್ರ ಹಾಗೂ ದಕ್ಷಿಣಕ್ಕೆ ಅರಬ್ಬಿಸಮುದ್ರ ಆವರಿಸಿದ್ದು ಅದೊಂದು ಪರ್ಯಾಯದ್ವೀಪವಾಗಿ ಅಸ್ತಿತ್ವದಲ್ಲಿದೆ. ಈ ಪರ್ಯಾಯದ್ವೀಪದ ಪಶ್ಚಿಮ ಭಾಗದಲ್ಲಿ ಕೆಂಪುಸಮುದ್ರಕ್ಕೆ ಅಂಟಿಕೊಂಡಂತೆ ಒರಟು ಕೆಂಪುಮರಳುಗಲ್ಲಿನ ಗಿರಿಶ್ರೇಣಿಗಳು ದಕ್ಷಿಣದಿಂದ ಉತ್ತರದ ಕಡೆಗೆ ಹರಡಿವೆ. ಇದರ ಒಂದು ಭಾಗ ಸಮುದ್ರ ತೀರದಡೆಗೆ ಚಾಚಿದ್ದರೆ ಇನ್ನೊಂದು ಭಾಗ ಸಮುದ್ರ ಮಟ್ಟಕ್ಕಿಂತ ಸ್ವಲ್ಪ ತಗ್ಗಿನವರೆಗೂ ಒಳನಾಡಿನತ್ತ ಮೈಲಿಗಳ ದೂರ ವ್ಯಾಪಿಸಿದೆ. ಈ ಗಿರಿಶಿಖರ ಹಾಗೂ ಕೆಂಪುಸಮುದ್ರದ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದೆ ಇತಿಹಾಸ ಪ್ರಸಿದ್ಧ ಮೆಕ್ಕಾ ಹಾಗು ಮದೀನಾ ನಗರ ಗಳು. ಅರೇಬಿಯಾ ಒಟ್ಟಾರೆ 1400ಮೈಲಿ ಉದ್ದವಿದ್ದು, 1250ಮೈಲಿ ಅಗಲವಾಗಿದೆ. ಆದರೆ ಈ ವಿಶಾಲಪ್ರದೇಶ ಒಂದೇ ಒಂದು ದೊಡ್ಡ ನದಿ ಅಥವಾ ಹೊಳೆಯನ್ನ ಹೊಂದಿಲ್ಲದಿರುವುದು ವಿಸ್ಮಯ ಹುಟ್ಟಿಸುತ್ತದೆ. ಅರೇಬಿಕ್ ಭಾಷೆಯಲ್ಲಿ 'ಅರಬ' ಎಂದರೆ ಬರಡು ಎಂದರ್ಥ. ಹೆಸರಿಗೆ ತಕ್ಕಂತೆ ಈ ಪ್ರೆದೇಶ ಒಂದು ಬರಡು ಭೂಮಿಯೆ ಆಗಿದ್ದು ಈ ಎರಡು ನಗರಗಳಿರುವ ಪ್ರದೇಶದಿಂದ ಪೂರ್ವಕ್ಕೆ ಭೂಮಿ ಇಳಿಜಾರಾಗಿದ್ದು ನಡುನಡುವೆ ಕೆಲವೊಮ್ಮೆ 12000ಅಡಿ ಎತ್ತರದ ಪರ್ವತಗಳು ಏರ್ಪಟ್ಟು ಮತ್ತೆ ಕೊಲ್ಲಿಯವರೆಗೂ ಇಳಿಜಾರಾಗಿ ಒಂದು ಬಗೆಯ ವಿಲಕ್ಷಣತೆ ಹೊಂದಿರುವುದು ಒಂದು ವಿಶೇಷ. ಆದರೆ ಇಲ್ಲಿನ ನೈಋತ್ಯ ಭಾಗ ಸಣ್ಣಪುಟ್ಟ ನೀರಿನ ಒರತೆ-ಹಳ್ಳಗಳನ್ನು ಹೊಂದಿದ್ದು ಅಲ್ಲಿನ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ. ಉಳಿದಂತೆ ಇನ್ನು ಯಾವ ಭಾಗವೂ ಆ ಭಾಗ್ಯ ಹೊಂದಿರದೆ ಬೆಂಗಾಡಾಗಿ ಕೇವಲ ಅಲ್ಲಲ್ಲಿ ಕಾಣುವ ಓಯಸಿಸ್'ಗಳಿಂದಷ್ಟೆ ನೀರುಂಡು ಕರ್ಜೂರ- ಬಾರ್ಲಿ- ಅಕೇಶಿಯ ಮುಂತಾದ ಸಸ್ಯಗಳನ್ನಷ್ಟೆ ಬೆಳೆದುಕೊಳ್ಳಲು ಶಕ್ತವಾಗಿವೆ. ಈ ಜಲವಸತಿಗಳ ಸುತ್ತ ಜನವಸತಿ ಹಬ್ಬಿದೆ. ಅನಾದಿಕಾಲದಿಂದಲೂ ಇಂತಹ ಓಯಸಿಸ್'ಗಳ ಸುತ್ತ ಏರ್ಪಟ್ಟ ಜನವಸತಿಗಳ ಬುಡಕಟ್ಟಿನ ಮಂದಿಗೆ ಇಲ್ಲಿನ ಉರಿ ಉಷ್ಣಾಂಶವೆ ಮೊದಲ ಶತ್ರು. ಹಗಲಲ್ಲಿ ತಾರಕಕ್ಕೇರುವ ಉಷ್ಣಾಂಶ ಜನರ ರಕ್ತ ಕುದಿಸಿ ಮುಖವನ್ನ ಸುಡಿಸುವಂತಿರುವುದರಿಂದ ಇಲ್ಲಿನ ನಿವಾಸಿಗಳು ಮರಳು ಮಿಶ್ರಿತ ಸುಡುಗಾಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಮೈತುಂಬ ನಿಲುವಂಗಿ ಹಾಗೂ ತಲೆಗೆ ಸುತ್ತಿಕೊಳ್ಳುವ ಬಟ್ಟೆ ಧರಿಸುವುದು ವಾಡಿಕೆ. ಮಳೆ ಎನ್ನುವುದು ಕೇವಲ ನೆನಪಿನ ಮಿತ್ರನಾಗಿದ್ದು, ಉರಿಕೆಂಡದಂತಹ ಸೂರ್ಯನ ಸ್ನೇಹವಿರುವುದರಿಂದ ಆಕಾಶ ವರ್ಷಪೂರ್ತಿ ತಿಳಿಯಾಗಿದ್ದು ಬೀಸುವ ಗಾಳಿ 'ಹೊಳೆಯುವ ದ್ರಾಕ್ಷಾರಸ' (Sparkling Wine) ದಂತೆ ಅನುಭವವಾಗುತ್ತದೆ ಎಂದಿದ್ದಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್. ತಮ್ಮದೆ ವಿಶಿಷ್ಟ ಸಂಸ್ಕೃತಿ, ನಡೆ- ನುಡಿ, ಹವ್ಯಾಸಗಳನ್ನ ಹೊಂದಿ ಇವೆಲ್ಲದರ ಕೂಡ ಬಾಳ್ವೆ ನಡೆಸುವುದು ಇಲ್ಲಿನ ಜನರಿಗೆ ಸಾಮಾನ್ಯ ಸಂಗತಿಯಾಗಿತ್ತು. ಆದರೆ ದಿನ ಬಳಕೆಯ ದವಸಧಾನ್ಯಗಳು ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳಿಗಾಗಿ ದೂರದೇಶದವರೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಳ್ಳುವುದು ಅರಬ್ಬಿಗಳಿಗೆ ತೀರಾ ಅನಿವಾರ್ಯವೆ ಆಗಿತ್ತು. ಹೀಗಾಗಿ ಸಾರ್ಥ (ಕ್ಯಾರವಾನ್) ಕಟ್ಟಿಕೊಂಡು ನೂರಾರು ಮೈಲಿ ಸುತ್ತುವುದನ್ನ ಜೀವನದ ಅಂಗವಾಗಿಸಿಕೊಂಡಿದ್ದ ಅರಬ್ಬಿಗಳು ಒಂಟೆ, ಕುದುರೆಗಳ ಮೇಲೆ ಕೊಂಡ ಸಾಮಾನುಗಳನ್ನ ಹೇರಿಕೊಂಡು ಅವುಗಳ ರಕ್ಷಣೆಗಾಗಿ ಅಂಗರಕ್ಷಕರ ನೆರವಿನಿಂದ ಅಥವಾ ಸ್ವತಃ ತಾವೆ ಶಸ್ತ್ರಸಜ್ಜಿತರಾಗಿ ದಾರಿಗಳ್ಳರೊಂದಿಗೆ ರೋಷಾವೇಶದಿಂದ ಹೋರಾಡುವುದನ್ನು ರೂಢಿಸಿಕೊಂಡಿದ್ದರು, ಅರೇಬಿಯಾದ ಉದ್ದಗಲಕ್ಕೂ ಇಂತಹ ಕ್ಯಾರವಾನ್'ಗಳು ಸರ್ವೆಸಾಮಾನ್ಯವಾಗಿದ್ದು, ಅದು ಅಲ್ಲಿನ ನಿವಾಸಿಗಳ ಬದುಕಲ್ಲಿ ಹಾಸು ಹೊಕ್ಕಾಗಿತ್ತು. ಅಲ್ಲಿನ ಭಯಂಕರ ದುರ್ಗಮ ಮರಳುಗಾಡಿನಲ್ಲಿ ಪ್ರಯಾಣಿಸುವುದು ಪ್ರಯಾಸಕರವಾಗಿದ್ದು ಅನಿರೀಕ್ಷಿತ ಅಪಾಯಗಳಿಗೇನೂ ಕೊರತೆಯಿರಲಿಲ್ಲ. ಹೀಗಾಗಿ ಕ್ಯಾರವಾನಿಗರು ತಮ್ಮ ಸ್ವತ್ತುಗಳ ರಕ್ಷಣೆಗಾಗಿ ಕಾಣದ ದೇವರನ್ನ ಮೊರೆ ಹೋಗುವುದು ಸ್ವಾಭಾವಿಕವೆ ಆಗಿತ್ತು. ದಾರಿಯುದ್ದ ಸಿಗುವ ವಿವಿಧ ದೇವತಾರಾಧನ ಸ್ಥಳಗಳಲ್ಲಿ ತಮ್ಮ ಬುಡಕಟ್ಟಿಗೆ ಸೇರಿದ ದೇವರನ್ನ ಶ್ರದ್ಧಾಭಕ್ತಿಯಿಂದ ಆರಾಧಿಸುವುದು, ದೈವ ಕೃಪೆಯನ್ನ ಅಪೇಕ್ಷಿಸಿ ಪ್ರಾರ್ಥಿಸುವುದು ಅವರ ಬಾಳಿನ ಒಂದು ಅವಿಭಾಜ್ಯ ನಡೆಯಾಗಿತ್ತು. ಅರಬ್ಬಿಗಳೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಂಡಿದ್ದ ಪ್ರಮುಖ ವಿದೇಶಗಳಲ್ಲಿ ಸಿರಿಯಾ ಹಾಗೂ ಪ್ಯಾಲಸ್ತೈನ್ ಪ್ರಮುಖವಾಗಿದ್ದವು. ಇವುಗಳೊಂದಿಗೆ ನೆರೆಯ ಇರಾನ್. ಇರಾಕ್ ಹಾಗೂ ಭಾರತದವರೆಗೂ ಅರಬ್ಬಿ ವಣಿಕರು ಕ್ಯಾರವಾನ್ ನಡೆಸುತಿದ್ದುದೂ ಇತ್ತು. ಅರಬ್ಬರಲ್ಲಿ ಕೆಲವರು ಹೀಗೆ ವ್ಯವಹಾರ ಕೌಶಲ್ಯ ಮೆರೆದರೆ, ಇನ್ನುಳಿದವರು ಹೊರದೇಶಗಳಲ್ಲಿ ಈ ವ್ಯವಹಾರ ಕೌಶಲ್ಯ ಮೆರೆದು ಪ್ರಸಿದ್ಧರೂ ಆಗಿದ್ದರು. ಆದರೆ ಅವರ ಆರ್ಥಿಕ ನೆಮ್ಮದಿಯನ್ನ ಕಲಕಿದ್ದು ವಿದೇಶಿ ವ್ಯಾಪಾರಗಳಲ್ಲಿ ರೋಮನ್ನರ ಅಧಿಪತ್ಯ. ಕ್ರೈಸ್ತ ಮತ ರಾಜಧರ್ಮವಾಗಿ ರೋಮನ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದ ಕಾರಣ ಕ್ಯಾರವಾನ್'ಗಳ ಮೇಲೆ ರೋಮನ್ ಸುಂಕಾಧಿಕಾರಿಗಳು ಹೇರಲಾರಂಭಿಸಿದ ದುಬಾರಿ ಶುಲ್ಕ ಹಾಗೂ ವಿಪರೀತ ನಿರ್ಬಂಧಗಳ ಕಾರಣ ಕೆಂಗೆಟ್ಟ ಅನೇಕ ಅರಬ್ಬರು ಮರಳಿ ಮಾತೃಭೂಮಿಗೆ ಬಂದು ಮೆಕ್ಕಾ, ಮದೀನ ಹಾಗೂ ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಾದ್ಯಂತ ಹರಿದು ಹಂಚಿಹೋದರು. ಗ್ರೀಕನ್ನರಿಂದ 'ಸೇರಾಕೆನಾಯ್' (Serakenoi) ಅಥವಾ "ಸಾರ್'ಸೆನ್ಸ್" ಎಂದು ಕರೆಸಿಕೊಂಡ ಅರೆಬಿಯಾವನ್ನ (ಅರಬ್ಬಿಯಲ್ಲಿ ಹಾಗೆಂದರೆ ಪೂರ್ವದವರು ಎಂದರ್ಥ) ಕ್ರಿಸ್ತಪೂರ್ವ 240ರಲ್ಲಿ ಮೊಗಾನ್ ಎಂಬುವವ ಆಳುತ್ತಿದ್ದ. ಅವನನ್ನು ಬೆಬಿಲೋನಿಯಾದ ರಾಜ ನರಂಸಿನ್ ಸೋಲಿಸಿದ ಬಗೆಗಿನ ಶಿಲಾಶಾಸನವೊಂದು ಲಭ್ಯವಿದೆ. ಅರೇಬಿಯಾದ ಇತರ ಶಾಸನಗಳ ಪ್ರಕಾರ ಕ್ರಿಸ್ತಪೂರ್ವ 800ರಲ್ಲಿ ಅದೆ ಮನೆತನದ ಇಪ್ಪತೈದಕ್ಕೂ ರಾಜರು ಅರೆಬಿಯಾವನ್ನ ಆಳಿದ್ದಾರೆ. ಇತಿಹಾಸ ಪ್ರಸಿದ್ಧ ರಾಣಿ ಶೀಬಾ ದಕ್ಷಿಣ ಅರೆಬಿಯಾದಲ್ಲಿರುವ ಯಮನ್'ನ ಸಾಬಾದಿಂದ ರಾಜ್ಯಭಾರ ಮಾಡುತ್ತಿದ್ದಳು. ಆಕೆ ಅವಳ ಕಾಲದವನೆ ಆಗಿದ್ದ ರಾಜಾ ಸೋಲೋಮನ್ನನನ್ನು ಕ್ರಿಸ್ತಪೂರ್ವ 950ರಲ್ಲಿ ಭೇಟಿಮಾಡಿದ್ದಳು. ಸಾಬಾದ ರಾಜರು ಮಾರಿಬ್'ನಲ್ಲಿ ಕಾಲಾನಂತರ ರಾಜಧಾನಿಯನ್ನು ಸ್ಥಾಪಿಸಿ ಉಛ್ರಾಯ ಸ್ಥಿತಿಯನ್ನ ತಲುಪಿ, ಉತ್ತಮ ನೌಕಾಪಡೆ ಹೊಂದಿ ದೂರದ ಭಾರತದೊಂದಿಗೆ ಸಮುದ್ರಮಾರ್ಗದ ವ್ಯಾಪಾರ ನಡೆಸುತ್ತಿದ್ದರು. ಕ್ರಮೇಣ ರೋಮನ್ನರ ಪ್ರಾಬಲ್ಯ ಹೆಚ್ಚಿ ಅವರು ಅರೇಬಿಯಾದ ಪ್ರಸಿದ್ಧ ರೇವುಪಟ್ಟಣವಾಗಿರುವ ಏಡನ್'ನ್ನು ಅತಿಕ್ರಮಿಸಿ ಈಜಿಪ್ಟ್ ಹಾಗೂ ಭಾರತದ ಮೇಲಿನ ವ್ಯಾಪಾರದ ಮೇಲೆ ಹತೋಟಿ ಸಾಧಿಸಿತು. ಏಡನ್ ಬದಲಾಗುತ್ತಿದ್ದ ಕಾಲಮಾನದಲ್ಲಿ ಅರಬ್, ರೋಮನ್ ಹಾಗು ಪರ್ಷಿಯನ್ ಚಕ್ರಾಧಿಪತ್ಯಕ್ಕೆ ಒಳಗಾಗಿದ್ದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಕ್ರಿಸ್ತಶಕ ಎರಡನೆ ಶತಮಾನವನ್ನೆ ಗಮನಿಸುವುದಾದರೆ ಸಮೈರಾ ನಗರದ ಸಾನಿಸ್ಸಾಡರು ರೋಮನ್ನರ ಅಧೀನದಲ್ಲಿದ್ದರೆ, ಯುಫ್ರೆಟಿಸ್ ನದಿಯ ದಡದಲ್ಲಿ ಇದ್ದ ಅಲ್-ಹಿರಾ ರಾಜ್ಯ ಪರ್ಶಿಯನ್ನರ ಪ್ರಭಾವದಲ್ಲಿತ್ತು. ಈ ಎರಡೂ ರಾಜ್ಯಗಳು ಕ್ರಿಸ್ತಮತದ ಪ್ರಭಾವಕ್ಕೆ ಒಳಪಟ್ಟಿದ್ದವು.ಕ್ರಿಸ್ತಶಕ ಏಳನೆ ಶತಮಾನದ ವೇಳೆಗೆ ಈ ಎರಡೂ ರಾಜ್ಯಗಳು ತಮ್ಮ ಅಸ್ಥಿತ್ವವನ್ನ ಕಳೆದುಕೊಂಡವು. ರೋಮ್ ಹಾಗೂ ಪರ್ಷಿಯಾ ಚಕ್ರಾದಿಪತ್ಯಗಳು ಉನ್ನತ ಸ್ಥಿತಿಯಲ್ಲಿದ್ದಾಗ ಇತ್ತ ಅರೇಬಿಯಾ ಕತ್ತಲೆಯತ್ತ ಜಾರತೊಡಗಿತ್ತು. ಕ್ರಿಸ್ತಪೂರ್ವದಲ್ಲಿ ಅಲ್ಲಿದ್ದ ವೈಭವ ಏಳನೆ ಶತಮಾನದಲ್ಲಿ ಅಸ್ತಂಗತವಾಗಿತ್ತು. ಹೊರಪ್ರಪಂಚದ ಮಟ್ಟಿಗೆ ಅರಬ್ಬರು ಅಪ್ರಸ್ತುತರಾಗಿಬಿಟ್ಟಿದ್ದರು. ಹೀಗಾಗಿ ಕಗ್ಗತ್ತಲೆಯ ಆಫ್ರಿಕಾ ಖಂಡದಂತೆ ಅರೇಬಿಯಾ ಪರ್ಯಾಯ ದ್ವೀಪವೂ ಕಗ್ಗತ್ತಲ ದ್ವೀಪವಾಗಿ ಪರಿಣಮಿಸಿತು. ಆರನೆ ಶತಮಾನದಲ್ಲಿ ಅರೇಬಿಯಾದ ನೂರಾರು ಬುಡಕಟ್ಟುಗಳ ಜನರು ಬದುಕಿನ ಬಹುತೇಕ ಆಸರೆ ಕಳೆದುಕೊಂಡು ಅಲೆಮಾರಿಗಳಾಗಿ, ಅಸಂಸ್ಕೃತರಾಗಿ ದೇಶವನ್ನ ಸುತ್ತುವುದು ಸಾಮಾನ್ಯವಾಗಿತ್ತು. ಅವರೆಲ್ಲರೂ ತಮ್ಮತಮ್ಮ ಬುಡಕಟ್ಟುಗಳ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡಿದ್ದು ಅಸಹನೆ, ಕೋಪ- ತಾಪ, ನಿಷ್ಠೂರತೆ ಮುಂತಾದ ಗುಣಧರ್ಮಗಳನ್ನು ವಿಪರೀತವಾಗಿ ಬೆಳೆಸಿಕೊಂಡಿದ್ದರು. ಯಾರ ಹಿಡಿತಕ್ಕೂ ಸಿಗದೆ ನಿರ್ಭೀತರಾಗಿ-ಸ್ವತಂತ್ರ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಒಂದು ನಿರ್ದಿಷ್ಟ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರಲಿಲ್ಲ. ಪ್ರತಿ ಬುಡಕಟ್ಟಿಗೆ 'ಶೇಖ್' ಎಂಬ ನೇತಾರನಿದ್ದರೂ ಅವನಿಂದಲೂ ಗುಂಪಿನ ಎಲ್ಲರನ್ನು ಬಯಸಿದಾಗ ನಿಯಂತ್ರಿಸೋದು ಕಷ್ಟವಾಗುತ್ತಿತ್ತು. ಒಂದು ವಿಚಿತ್ರ ರೀತಿಯ ಅರಬ್ಬರ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹ ವಿರೋಧಾಭಾಸಗಳು ಕಂಡು ಬರುತ್ತಿದ್ದವು ಎನ್ನುತ್ತಾನೆ ವಿಲ್ ಡ್ಯೂರಾಂಟ್. ಒಂದುಕಡೆ ಅಸಂಖ್ಯಾತ ಉಪ ಬುಡಕಟ್ಟುಗಳ ಜನರು ಒಂದೆ ಭಾಷೆ, ನಡೆ- ನುಡಿ, ನ್ಯಾಯ ಸೂತ್ರಗಳನ್ನ ಒಪ್ಪಿಕೊಂಡಿದ್ದರೂ ಸಹ ಆಂತರಿಕವಾಗಿ 'ಸ್ವತಂತ್ರ ಮನೋಭಾವ'ವನ್ನೆ ಬೆಳೆಸಿಕೊಂಡು ಸಮಯ ಬಂದಾಗ ಯಾವುದೆ ನೈತಿಕ ನ್ಯಾಯ ಸೂತ್ರಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಸದಾ ಚಡಪಡಿಸುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಿದ್ದು ಸಣ್ಣಪುಟ್ಟ ಕ್ಷುದ್ರ ಕಾರಣಗಳಿಗೂ ಭೀಕರ ಮಾರಾಮಾರಿ- ಕದನ- ನೆತ್ತರ ಚೆಲ್ಲಾಟ ಸಾಮಾನ್ಯವೆಂಬಂತೆ ನಡೆಯುತ್ತಿದ್ದವು. ರಕ್ತ ಸಂಬಂಧ ಹಾಗೂ ಇನ್ನಿತರ ಯಾವುದೆ ಆಪ್ತ ಸಂಬಂಧಗಳ ಬೇಲಿಯೂ ಆ ಕ್ಷಣ ಅವರೊಳಗಿನ ಪಶು ವರ್ತನೆಯನ್ನು ತಡೆಯುತ್ತಿರಲಿಲ್ಲ. ಯಾವ ರಾಜನ ಚಕ್ರಾಧಿಪತ್ಯಕ್ಕೂ ಒಪ್ಪದೆ, ತಮ್ಮೊಳಗಿನ ನಾಯಕನ ಮುಂದಾಳತ್ವಕ್ಕೂ ಕಿಮ್ಮತ್ತು ಕೊಡದೆ ತಮಗೆ ಬೇಕಾದಂತೆ ಇರೋದು ಅವರ ರೂಢಿಯಾಗಿತ್ತು. ಐಕ್ಯತೆಯಲ್ಲಿ ನಂಬಿಕೆಯಿಡದೆ ಅನೈಕ್ಯತೆಯ ಅನಿಷ್ಟಗಳನ್ನ ಧಾರಾಳವಾಗಿ ಅನುಭವಿಸುತ್ತಿದ್ದ ಅರಬ್ಬರು ವಿರೋಧಾಭಾಸಪೂರಿತ ಜೀವನ ಶೈಲಿಯನ್ನು ಹೊಂದಿದ್ದದು ಸ್ಪಷ್ಟವಾಗಿತ್ತು. ಯಾವುದೆ ನಸರ್ಗಿಕ ತಡೆಗಳಿಲ್ಲದಿದ್ದರೂ ಅರಬ್ಬರ ಸ್ವಾತಂತ್ರ ಕಾಪಾಡಿದ್ದು ಇದೆ ವಿರೋಧಾಭಾಸ ಅನ್ನುವುದು ಇತಿಹಾಸಕಾರರ ಖಚಿತ ಅಭಿಪ್ರಾಯ. ಇಲ್ಲಿನ ಪ್ರತಿಯೊಂದು ಬುಡಕಟ್ಟು ಕೂಡ ಒಬ್ಬ ಪೂರ್ವಿಕನ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಉದಾಹಾರಣೆಗೆ 'ಬಾನ್ ಫಾಸನ್' ಬುಡಕಟ್ಟಿನವರು ತಾವು 'ಫಾಸನ್' ಎಂಬ ಸಂತತಿಗೆ ಸೇರಿದವರು ಎಂದು ಸಾರಿಕೊಳ್ಳುತ್ತಿದ್ದರು. ಹೀಗೆ ತಮ್ಮ ಬುಡಕಟ್ಟಿನ ಸಂಸ್ಕೃತಿ ಹಾಗೂ ಅಂತಸ್ತಿನ ಬಗ್ಗೆ ಅವರಲ್ಲಿ ಅತೀವ ಹೆಮ್ಮೆಯಿದ್ದು ತಮಗಿಂತ ಕೆಳ ಅಂತಸ್ತಿನ ಪಂಗಡದ ಜೊತೆ ಸಂಬಂಧ ಬೆಳೆಸುವುದರ ಬಗ್ಗೆ ಸಾಮಾಜಿಕ ವಿರೋಧ ವ್ಯಕ್ತವಾಗುತ್ತಿತ್ತು. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಐದನೆ ಮೂರು ಭಾಗದಷ್ಟು ಮಂದಿ ಅಲೆಮಾರಿ ಬಿದೊವಿನ್ (bedowin) ಪಂಗಡದವರಾಗಿದ್ದು ತಮ್ಮ ಜಾನುವಾರುಗಳೊಂದಿಗೆ ಜಲವಸತಿ ಹುಡುಕಿಕೊಂಡು ಅಲೆದಾಡುವ ಪರಿಪಾಠ ಅವರದ್ದಾಗಿತ್ತು. ಕುದುರೆಗಳನ್ನ ಸಾಕಿ ಬೆಳೆಸುವುದು ಅವರ ಅನ್ನಕ್ಕೆ ದಾರಿಯಾಗಿದ್ದರೂ ಒಂಟೆಗಳು ಅವರ ಸರ್ವಸ್ವವಾಗಿದ್ದವು. ಅವರ ಜೀವನದ ಅಂಗವಾಗಿದ್ದ ಒಂಟೆ ಅವರೊಂದಿಗೆ ಹುಟ್ಟಿ ಮರುಭೂಮಿಯ ವೈಪರೇತ್ಯಗಳನ್ನೆಲ್ಲ ಸಹಿಸಿಕೊಂಡು ಸಾವಿನಲ್ಲೂ ಉಪಕಾರಿಯಾಗಿಯೆ ಸಾಯುತ್ತಿತ್ತು. ಉರಿ ಬೇಸಿಗೆಯಲ್ಲಿ ಐದು ದಿನಗಳವರೆಗೆ ನೀರಿಲ್ಲದೆ ಬದುಕುವ ಒಂಟೆ ಚಳಿಗಾಲದಲ್ಲಿ ನೀರಿಲ್ಲದೆ ಇಪ್ಪತೈದು ದಿನ ಸವೆಸಬಲ್ಲದು. ಪೌಷ್ಟಿಕತೆ ಹೆಚ್ಚಿಸುವ ಅದರ ಹಾಲು, ಬೆರಣಿಯಾಗಿ ಇಂಧನವಾಗುವ ಅದರ ಸಗಣಿ, ಸತ್ತರೆ ಆಹಾರವಾಗಬಹುದಾದ ಅದರ ಮಾಂಸ, ಗುಡಾರ- ಉಡುಪು ಇನ್ನಿತರ ನಿತ್ಯೋಪಯೋಗಿ ವಸ್ತುಗಳಾಗುವ ಅದರ ಚರ್ಮ ಹೀಗೆ ಅವರ ಸಮಸ್ತ ಅಗತ್ಯಗಳನ್ನೂ ಪೂರೈಸುವ ಒಂಟೆಯೆಂದರೆ ಅವರಿಗೆ ಅಚ್ಚುಮೆಚ್ಚು. ಅದರಷ್ಟೆ ಅವರೂ ಕಷ್ಟ ಸಹಿಷ್ಣುಗಳಾಗಿದ್ದರು. ಹೋರಾಟ- ಮೋಜು- ಪ್ರೇಮ- ಕಲಹ ಇವಷ್ಟೆ ಅವರ ಬಾಳ್ವೆಯಾಗಿತ್ತು.ಇನ್ನಿತರ ಉಪ ಬುಡಕಟ್ಟುಗಳನ್ನ ಮಣಿಸಿ ಅವರನ್ನ ದೋಚುವುದು ; ಅಂತೆಯೆ ತನ್ನ ಮೇಲೆ ಎರಗುವ ಇತರ ಬುಡಕಟ್ಟುಗಳವರಿಂದ ತನ್ನನ್ನು ಕಾಪಾಡಿಕೊಳ್ಳಲು ಹೆಣಗುವುದು. ತನಗೆ ಅದೆಂದೊ ಒದಗಿದ್ದ ಅವಮಾನಕ್ಕೆ ಪ್ರತಿಕಾರವಾಗಿ ಸೇಡು ತೀರಿಸಿಕೊಳ್ಳುವುದು ಇವೆ ಅವರ ಜೀವನದ ರೀತಿಯಾಗಿತ್ತು .'ಪವಿತ್ರ ದಿನ'ಗಳೆಂದು ಪರಿಗಣಿಸುವ ದಿನಗಳಲ್ಲಿ ಅವರು ವಿಶ್ರಾಮದಲ್ಲಿರುತ್ತಿದ್ದು ಹೋರಾಟದಿಂದ ವಿಮುಖರಾಗುತ್ತಿದ್ದರು. ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿವ ಇತರ ಜನಾಂಗದವರನ್ನ ಬೆದರಿಸಿ- ಲೂಟಿ ಹೊಡೆದುಕಳಿಸಲಾಗುತ್ತಿತ್ತು! ಇವರನ್ನು 'ಕರುಣಾಳು, ಕೊಲೆಗಡುಕ, ಉದಾರಿ, ದುರಾಸಾಪೂರಿತ, ನಂಬಲರ್ಹ, ನಂಬಿಕೆ ದ್ರೋಹಿ ಹಾಗೂ ಎದೆಗಾರಿಕೆಯುಳ್ಳವರು!' ಎಂದು ವಿಚಿತ್ರವಾಗಿ ವಿಲ್ ಡ್ಯೂರಾಂಟ್ ವರ್ಣಿಸಿದ್ದಾನೆ. ರಾಜಕೀಯ ಸಂಗತಿಗಳಲ್ಲಿ ಹೊಂದಿದ್ದಷ್ಟೆ ಅನೈಕ್ಯತೆಯನ್ನ ಅರಬ್ಬರು ದೇವಾರಾಧನೆಗಳ ವಿಷಯದಲ್ಲೂ ಹೊಂದಿದ್ದರು. ಯಾವ ಸುಧಾರಣೆಗೂ ಸೊಪ್ಪು ಹಾಕದೆ, ಯಹೂದಿ ಹಾಗೂ ಕ್ರೈಸ್ತ ಏಕದೇವತಾರಾಧನೆಯನ್ನ ಒಪ್ಪದೆ ಬಹುದೇವರನ್ನ ನಂಬುತ್ತಾ ವಿಗ್ರಹಾರಾಧನೆಯಲ್ಲಿ ನಂಬಿಕೆಹೊಂದಿದ್ದರು. ಯಾವುದೆ ಬಾಹ್ಯ ಪ್ರಭಾವಗಳು ಈ ನಂಬಿಕೆಯನ್ನ ಸಡಿಲಗೊಳಿಸಿರಲಿಲ್ಲ. ದೇವರೊಂದಿಗೆ ಅವರು ದೆವ್ವಗಳನ್ನೂ (ಜಿನ್ ) ನಂಬುತ್ತಿದ್ದು ಆಗಾಗ ಬಲಿ ನೀಡುವ ಮೂಲಕ, ಕವಿತ್ವ ಪ್ರದರ್ಶನದ ಮೂಲಕ ಹಾಡಿ ಸ್ತುತಿಸಿ ನಲಿದು ದೇವರನ್ನ ಒಲಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿತ್ತು. ಅರಬ್ಬರ ಆರಾಧನಾ ಸ್ಥಳಗಳಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮೆಕ್ಕಾದ ವಿಗ್ರಹಾರಾಧನೆಯ ಗುಡಿಯೂ ಒಂದಾಗಿತ್ತು. ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಮೆಕ್ಕಾ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿತ್ತು ಅನ್ನುವುದು ಇತಿಹಾಸಕಾರರ ನಂಬಿಕೆ. ಮೆಕ್ಕಾ ಒಂದು ಬರಡು ಕಣಿವೆಯಲ್ಲಿದ್ದು ಅದರ ಸುತ್ತಲೂ ಕೆಂಪುಕಲ್ಲಿನ ಪರ್ವತಗಳಿಂದ ಅದು ಸುತ್ತುವರೆದಿದೆ. ಕೆಂಪುಸಮುದ್ರ ಇಲ್ಲಿಗೆ ಕೇವಲ ಐವತ್ತು ಮೈಲಿ ದೂರದಲ್ಲಿದೆ. ಅರೇಬಿಯಾದಿಂದ ಹೊರಸಾಗುವ ಕ್ಯಾರವಾನ್'ಗಳು ಹಾಗೂ ಅರೇಬಿಯಾದ ಒಳ ಪ್ರವೇಶಿಸುವ ಕ್ಯಾರವಾನ್'ಗಳು ಇಲ್ಲಿ ಲಂಗರು ಹಾಕುತ್ತಿದ್ದವು. ಇಂತಹ ಸಾವಿರಾರು ಕ್ಯಾರವಾನ್'ಗಳು ವಿಶ್ರಮಿಸುವ ಸರ್ವಋತು ತಂಗುದಾಣಕ್ಕೆ ಒಂದು ಪೂಜಾಸ್ಥಳದ ಅಗತ್ಯ ಕಂಡುಬರೋದರಲ್ಲಿ ಅಚ್ಚರಿಯೇನಿಲ್ಲ. ಸದಾ ವಣಿಕರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಅನುಸಾರ ಅರಬ್ಬರು ಒಂದು ಗುಡಿ ಕಟ್ಟಿಕೊಂಡಿದ್ದು ಅದನ್ನ 'ಕಾಬಾ' ಎಂದು ಕರೆದುಕೊಂಡಿದ್ದರು. ಇದೊಂದು ಚಚ್ಚೌಕದ ಕಟ್ಟಡವಾಗಿದ್ದು ಒಟ್ಟು ಹತ್ತು ಬಾರಿ ಇದನ್ನ ನಿರ್ಮಿಸಲಾಗಿದೆ ಅನ್ನುವುದು ಮುಸ್ಲೀಮರ ನಂಬಿಕೆ. ಮೊದಲನೆ ಕಟ್ಟಡ ಅನಾದಿಕಾಲದಲ್ಲಿ ದೇವದೂತರ ನಿರ್ಮಿತಿಯಾಗಿದ್ದಾರೆ ಎರಡನೆಯದನ್ನ ಬೈಬಲ್'ನಲ್ಲಿ ಬರುವ ಪ್ರವಾದಿ ಆದಂ ಕಟ್ಟಿದ ಎನ್ನಲಾಗುತ್ತದೆ. ಮೂರನೆಯದನ್ನು ಅವನ ಮಗ ಸೇಥ್, ನಾಲ್ಕನೆಯದನ್ನು ಮೊಮ್ಮಗ ಅಬ್ರಾಹಂ ಹಾಗೂ ಐದನೆಯದನ್ನು ಮರಿಮಗ ಹಗರ್ ಕಟ್ಟಿದ್ದನಂತೆ. ಆರು ಮತ್ತು ಏಳನೆಯದನ್ನು ಇಸ್ಲಾಂ ಪೂರ್ವದ ಖುರೈಷಿ ಬುಡಕಟ್ಟಿನವರು ಕಟ್ಟಿದ್ದಾರೆ ಎಂಟನೆಯದ್ದನ್ನು ಮಹಮದ್ ಕಾಲದಲ್ಲಿ ಮತ್ತವರೆ ಕಟ್ಟಿದ್ದರು. ಕ್ರಿಸ್ತಶಕ 681 ಮತ್ತು 696ರಲ್ಲಿ ಮುಸ್ಲೀಂ ಶ್ರದ್ಧಾಳುಗಳು ಒಂಬತ್ತನೆ ಹಾಗು ಹತ್ತನೆ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈಗ ಅಲ್ಲಿರುವ ಕಟ್ಟಡ ಅನಂತರದ ದಿನಗಳಲ್ಲಿ ವಿವಿಧ ಖಲೀಫರಿಂದ ನಿರ್ಮಾಣಗೊಂಡಿತು. 40 ಅಡಿ ಉದ್ದ ಹಾಗೂ 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಚಚ್ಚೌಕದಾಕೃತಿಯ ಕಾಬಾ ತನ್ನ ದಕ್ಷಿಣ ಭಾಗದಲ್ಲಿ ನೆಲದಿಂದ ಐದು ಅಡಿ ಎತ್ತರದಲ್ಲಿ 'ಪವಿತ್ರ ಕರಿಶಿಲೆ'ಯನ್ನ ಹೊಂದಿದೆ. ಮುಸ್ಲೀಮರಿಗೆ ಈ ಕರಿಶಿಲೆ ಪರಮ ಪವಿತ್ರ. ಅದನ್ನು ಸ್ವರ್ಗದಿಂದಲೆ ಪಡೆಯಲಾಗಿದೆ ಎಂದು ನಂಬುವ ಮುಸ್ಲಿಂ ಯಾತ್ರಿಕರು ಶ್ರದ್ಧಾ ಭಕ್ತಿಯಿಂದ ಉಮ್ರಾದಲ್ಲಿ ಅದಕ್ಕೆ ಮುತ್ತಿಟ್ಟು ಧನ್ಯರಾಗುತ್ತಾರೆ. 'ಕಾಬಾ' ಕಟ್ಟಡ ದೊಳಗೆ ಇಸ್ಲಾಮಿನ ಉಗಮಕ್ಕೂ ಪೂರ್ವದಲ್ಲಿಯೇ ಒಟ್ಟು 361 ವಿವಿಧ ದೇವರುಗಳ ವಿಗ್ರಹಗಳನ್ನು ಆರಾಧಿಸುವ ಪದ್ದತಿಯಿತ್ತು. ಈ ಅನೇಕ ವಿಗ್ರಹಗಳ ಪೈಕಿ 'ಅಲ್ಲಾಹ'ನೂ ಒಬ್ಬನಾಗಿದ್ದ. ಅವನನ್ನು ಕೇವಲ ಮೆಕ್ಕಾ ಮೂಲ ನಿವಾಸಿಗಳು ಆರಾಧಿಸುತ್ತಿದ್ದರು ಅನ್ನುವ ವಿಶ್ಲೇಷಣೆ ವಿಲ್ ಡ್ಯೂರಂಟನದು. ಇದು ಇಸ್ಲಾಂ ಪೂರ್ವದ ಅರೇಬಿಯಾದಲ್ಲಿ ಮೂರ್ತಿ ಪೂಜೆಯೊಂದಿಗೆ ಬಹುದೇವತಾರಾಧನೆಯೂ ಇತ್ತು ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ( ಇನ್ನೂ ಇದೆ.... )

No comments:

Post a Comment