ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, September 28, 2012

ವಲಿ..... (ಭಾಗ-2)

ಈ ವಿಶ್ವಾಸಾರ್ಹತೆಯ ತಳಹದಿಯ ಮೇಲೆ ಅದಾಗಲೆ ಎರಡೆರಡು ಮದುವೆಯಾಗಿದ್ದು ಎರಡು ಗಂಡು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದ ಖತೀಜ ಮಹಮದ್ ಮೇಲೆ ಅನುರಾಗ ಬೆಳೆಸಿಕೊಂಡು ವಿವಾಹ ಪ್ರಸ್ತಾಪವನ್ನು ಮುಂದಿಟ್ಟಳು. ಆದರೆ ಅವರಿಬ್ಬರ ನಡುವಿನ ಅಂತಸ್ತಿನ ವ್ಯತ್ಯಾಸದ ದೆಸೆಯಿಂದ ಅವಳನ್ನು ಮರುವಿವಾಹವಾಗಲು ಅಷ್ಟರಲ್ಲಿ ಯತ್ನಿಸಿ ಸೋತಿದ್ದ ಖುರೈಷಿ ಗಣ್ಯರಿಂದ ಈ ಮದುವೆಗೆ ಭಾರಿ ವಿರೋಧ ವ್ಯಕ್ತವಾಯಿತು. ಸಾಲದ್ದಕ್ಕೆ ಸುಂದರಿ ವಿಧವೆ ಖತೀಜಳ ಮುದಿತಂದೆ ಈ ಮದುವೆಗೆ ತನ್ನ ಅಸಮ್ಮತಿ ಪ್ರಕಟಿಸಿದ. ಇದರ ಹಿಂದಿನ ಹುನ್ನಾರ ಗ್ರಹಿಸಿದ ಖತೀಜ ಮದುವೆಗೆ ಮಹಮದ್'ನ ಸಮ್ಮತಿ ದೊರೆತ ನಂತರ ಉಪಾಯವಾಗಿ ಒಂದುದಿನ ಮನೆಗೆ ತನ್ನ ತಂದೆ ಹಾಗೂ ಬುಡಕಟ್ಟಿನ ಗಣ್ಯರನ್ನು ಊಟಕ್ಕಾಗಿ ಆಹ್ವಾನಿಸಿ ಅವರಿಗಾಗಿಯೆ ವಿಶೇಷವಾಗಿ ದನ ಕಡಿಸಿ ಅದರ ಮಾಂಸ ಹಾಗೂ ಮದ್ಯದ ಸಮಾರಾಧನೆಯನ್ನೆ ನಡೆಸಿ, ಅವರೆಲ್ಲ ಮತ್ತಿನಲ್ಲಿ ತೇಲುತ್ತಿದ್ದಾಗ ಕಾಟಾಚಾರಕ್ಕೆ ಅವರೆಲ್ಲರ ಸಮ್ಮತಿ ಪಡೆದು ಅಂದೆ ವಿವಾಹ ನೆರವೇರಿಸಿ ಕೊಂಡುಬಿಟ್ಟಳು! ನಶೆ ಇಳಿದು ಸ್ಮೃತಿ ತಿಳಿಯಾದ ಬಳಿಕ ನಡೆದ ಎಲ್ಲಾ ವಿದ್ಯಾಮಾನವನ್ನರಿತ ಖತೀಜಳ ತಂದೆ ಈ ವಿವಾಹವನ್ನ ವಿರೋಧಿಸಿ ಕಾಲುಕೆರೆದು ಜಗಳಕ್ಕೆ ನಿಂತ. ಆದರೆ ಬುಡಕಟ್ಟಿನ ಮುಖಂಡರ ಸಮಯಸ್ಪೂರ್ತಿಯಿಂದ ಜಗಳ ರಕ್ತಪಾತಕ್ಕೆ ತಿರುಗುವ ಮೊದಲೆ ಸಂಧಾನ-ಸಮಾಧಾನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಹೀಗೆ ನಲವತ್ತು ವರ್ಷದ ಸುಂದರಿ- ಸಿರಿವಂತ ವಿಧವೆ ಖತೀಜ ಇಪ್ಪತ್ತೈದರ ಚಲುವ ತರುಣ ಮಹಮದ್'ನ ಮಡದಿಯಾದಳು. ಅಥವಾ ನಿಜಾರ್ಥದಲ್ಲಿ ಸಂಸಾರಿಯಾದ ಮಹಮದ್ ಖತೀಜಾಳ ಪತಿಯಾದ. ಸುಖಮಯವಾಗಿ ಮುಂದಿನ ಹನ್ನೆರಡುವರ್ಷ ಸಾಗಿದ ಅವರ ಸಂಸಾರದ ಫಲವಾಗಿ ಎಂಟು ಗಂಡು ಮಕ್ಕಳೂ. ನಾಲ್ಕು ಹೆಣ್ಣುಮಕ್ಕಳೂ ಜನ್ಮತಾಳಿದರು. ಆದರೆ ದುರದೃಷ್ಟದಿಂದ ಯಾವೊಂದು ಗಂಡು ಮಗುವೂ ಬದುಕುಳಿಯಲಿಲ್ಲ. ಮದುವೆಯ ನಂತರ ಮಡದಿಯ ಅಂತಸ್ತಿಗೆ ತಕ್ಕ ಹಾಗೆ ಮಹಮದ್ ಕುರಿ ಕಾಯದೆ ಹೆಂಡತಿಯ ವ್ಯಾಪಾರದಲ್ಲಿ ಸಕ್ರಿಯನಾಗಿ ತೊಡಗಿಕೊಂಡ. 'ದೇವರು ಕರುಣಾಮಯಿ ; ತನ್ನನ್ನು ನಂಬಿದವರನ್ನೆಂದೂ ಕೈಬಿಡದೆ ಅವರ ವ್ಯವಹಾರಗಳಲ್ಲಿ ವೃದ್ಧಿ ತರುವ ಆತ... ಅವಿಶ್ವಾಸಿಗಳಿಗೆ ನಷ್ಟವನ್ನಷ್ಟೆ ಕೊಡುತ್ತಾನೆ' ಎನ್ನುತ್ತಾ ಆತ ವ್ಯಾಪಾರಕ್ಕೆ ಒಂದು ಧಾರ್ಮಿಕ ಘನತೆಯನ್ನು ಆರೋಪಿಸಿ ಆಗೋಚರವಾಗಿಯೂ ಆಗುತ್ತಿದ್ದ ಮೋಸ- ವಂಚನೆಗಳನ್ನ ಹಿಡಿತಕ್ಕೆ ತಂದ. ಹೀಗೆ ಸುಖಮಯವಾಗಿದ್ದ ಮಹಮದ್ ವಯಕ್ತಿಕ ಜೀವನಕ್ಕೆ ಕುತ್ತು ಬಂದದ್ದು ಮದುವೆಯ ಹದಿಮೂರನೆ ವರ್ಷಕ್ಕೆ ಒದಗಿಬಂದ ಕಾಬಾದ ಮರುನಿರ್ಮಾಣ ಕಾರ್ಯದಿಂದ. ಆಗ ಆತನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು. ಪ್ರಾಕೃತಿಕವಾಗಿ ವಿರಳ ಮಳೆ ಕಾಣುತ್ತಿದ್ದ ಅರೇಬಿಯದಲ್ಲಿ ಕ್ರಿಸ್ತಶಕ 605ರಲ್ಲಿ ಕುಂಭದ್ರೋಣ ವರ್ಷಧಾರೆ ಸುರಿದು ಪ್ರವಾಹ ಬೀದಿಗಳಲ್ಲಿ ಉಕ್ಕಿ ಹರಿಯಿತು. ಕಾಬಾ ಗುಡಿ ಸಹಜವಾಗಿ ಜಖಂ ಆಯಿತು. ಹೀಗಾಗಿ ಗುಡಿಯ ದುರಸ್ತಿ ನಡೆಸಿ ಇನ್ನಷ್ಟು ಎತ್ತರದ ಗೋಡೆ ಹಾಗೂ ಛಾವಣಿ ನಿರ್ಮಿಸಲು ಖುರೈಷಿಗಳು ತೀರ್ಮಾನಿಸಿದರು. ಅವರ ಅದೃಷ್ಟಕ್ಕೆ ಆ ಮಳೆಗಾಲದಲ್ಲಿ ಎದ್ದಿದ್ದ ಬಿರುಗಾಳಿಗೆ ಸಿಲುಕಿ ಕೆಂಪು ಸಮುದ್ರದ ದಡಕ್ಕೆ ಬಂದು ಅಪ್ಪಳಿಸಿ ಪತನವಾದ ಗ್ರೀಕ್ ವ್ಯಾಪಾರಿ ನೌಕೆಯೊಂದು ವರದಾನದಂತೆ ಒದಗಿಬಂತು. ಇದರ ಖಚಿತ ಸುದ್ದಿ ತಿಳಿದ ಖುರೈಷಿಗಳ ಮುಖಂಡ ಅಲ್ ವಾಲಿದ್ ಅಲ್ಲಿಗೆ ಧಾವಿಸಿ ನೌಕೆಯ ಅಳಿದುಳಿದ ನಿರುಪಯುಕ್ತ ಮರ ಹಾಗೂ ಲೋಹಗಳ ಅವಶೇಷಗಳನ್ನು ಖರೀದಿಸಿದ. ಮೆಕ್ಖಾ ಸಮೀಪದ ಕೆಂಪು ಕಲ್ಲುಗಳ ಕಣಿವೆಯಿಂದ ಕಲ್ಲುಗಳನ್ನೂ ತರಿಸಿ ಬಾಕುನ್ ಎಂಬ ರೋಮನ್ ವಾಸ್ತುಶಿಲ್ಪಿಯ ಮಾರ್ಗದರ್ಶನದೊಂದಿಗೆ ಹೊಸ ಕಾಬಾದ ನಿರ್ಮಾಣ ಕಾರ್ಯ ಆರಂಭಿಸಿದ. ಗೋಡೆಗಳು ಮೇಲೆದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ 'ಪವಿತ್ರ ಕಪ್ಪುಶಿಲೆ'ಯನ್ನು ಎಲ್ಲಿ, ಹೇಗೆ, ಯಾರು ಇರಿಸಬೇಕು? ಎಂಬ ನೈತಿಕ ಪ್ರಶ್ನೆ ಉದ್ಭವವಾಯ್ತು.ಈ ಶಿಲೆ ಆರು ಇಂಚು ಎತ್ತರ ಹಾಗೂ ಎಂಟಿಂಚು ಅಗಲವಾಗಿತ್ತು, ಭಕ್ತಾದಿಗಳ ಶ್ರದ್ಧಾಭಕ್ತಿಗೆ ಅದು ಒಳಗಾಗಿತ್ತು ಎನ್ನುತ್ತಾನೆ ವಿಲ್ ಡ್ಯೂರಂಟ್. ಆ ಶಿಲೆಯ ಹಣೆಬರಹ ನಿರ್ಧರಿಸುವುದು ತಮ್ಮ ಹಕ್ಕೆಂದು ಕೆಲವು ಖುರೈಷಿ ಗಣ್ಯರು ಗದ್ದಲ ತೆಗೆದರು. ಇನ್ನಿತರರು ತಮ್ಮ ಹಕ್ಕು ಮಂಡಿಸಿ ಅದನ್ನು ಬಲವಾಗಿಯೆ ವಿರೋಧಿಸಿದರು. ಈ ವಾದ ವಿವಾದ ತಾರಕಕ್ಕೇರಿ ಹೊಯ್'ಕೈ ನಡೆದು ಮತ್ತೆ ರಕ್ತದೋಕುಳಿಯಾಡುವ ಎಲ್ಲಾ ಸೂಚನೆಗಳು ಕಂಡುಬಂದಾಗ ಖುರೈಷಿಗಳಲ್ಲೆ ಹಿರಿಯನಾಗಿದ್ದವನೊಬ್ಬ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಂಧಾನ ಸೂತ್ರವನ್ನೇರ್ಪಡಿಸಿದ. ಅದು ಹೀಗಿತ್ತು 'ಇಂದು ಯಾವ ವ್ಯಕ್ತಿ ಮೊತ್ತ ಮೊದಲನೆಯವನಾಗಿ ಕಾಬಾದ ಒಳಕ್ಕೆ ಹೊರಗಿನಿಂದ ಬರುತ್ತಾನೊ, ಅವನಿಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಅಥವಾ ಅವನಿಗೆ ಕರಿಶಿಲೆಯನ್ನ ಸೂಕ್ತ ಸ್ಥಳದಲ್ಲಿರಿಸುವ ಅಧಿಕಾರ ನೀಡೋಣ" ಅನ್ನುವುದಾಗಿತ್ತು. ನೆರೆದಿದ್ದವರ ಸಮ್ಮತಿ ಆ ಸೂತ್ರಕ್ಕೆ ದೊರಕುತ್ತಿದ್ದಾಗಲೆ ಮಹಮದ್ ಮೊದಲನೆಯವನಾಗಿ ಗುಡಿಯ ಒಳ ಪ್ರವೇಶಿಸಿದ್ದು ಎಲ್ಲರ ಕಣ್ಣಿಗೂ ಬಿತ್ತು! ಆವಾಗ ಎಲ್ಲರೂ 'ಅಲ್ ಅಮೀನ್' ಮೊದಲು ಬಂದ ಹೀಗಾಗಿ ಅವನು ಸೂಚಿಸುವ ಸೂತ್ರಕ್ಕೆ ನಮ್ಮ ಸಮ್ಮತಿಯಿದೆ ಎಂದು ಸಾಮೂಹಿಕವಾಗಿ ಕೂಗಿದರು. ಅತ್ಯಂತ ಸಾವಧಾನ ಚಿತ್ತದಿಂದ ಮಹಮದ್ ಈ ಕಾರ್ಯಭಾರವನ್ನು ಒಪ್ಪಿಕೊಂಡು ಕಾರ್ಯಪ್ರವೃತ್ತನಾದ. ತಾನು ಹೂದ್ದಿದ್ದ ಬಟ್ಟೆಯನ್ನು ನೆಲಕ್ಕೆ ಹಾಸಿ ಕಪ್ಪುಶಿಲೆಯನ್ನು ಅದರ ಮೇಲಿರಿಸಿ ಖುರೈಷಿಗಳ ನಾಲ್ಕೂ ಗುಂಪಿನ ಸದಸ್ಯರನ್ನು ಕರೆದು ಬಟ್ಟೆಯ ನಾಲ್ಕು ತುದಿಗಳನ್ನು ಅವರಿಂದ ಎತ್ತಿಸಿ ಅವರೆಲ್ಲರೂ ಕೂಡಿ ಕಪ್ಪುಶಿಲೆಯನ್ನು ಗೋಡೆಯ ಬದಿಗೆ ಅಂಟಿಸುವಂತೆ ಮಾಡಿದ. ತಾನೂ ಸ್ವತಃ ಈ ಕಾರ್ಯದಲ್ಲಿ ಅವರೊಂದಿಗೆ ಸಹಕರಿಸಿದ. ಹೀಗಾಗಿ ಕಟ್ಟಡದ ಕಾರ್ಯ ಸುಗಮವಾಗಿ ಸಾಗುವಂತಾಯಿತು. ಇದೆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಈ ಕಾರ್ಯ ಸಾಗುವಾಗ ಭಯ ಭಕ್ತಿಯಿಂದ ಖುರೈಶಿಗಳು ತಮ್ಮ ಒಳವಸ್ತ್ರವನ್ನು ತೆಗೆದು ಹೆಗಲ ಮೇಲೆ ಇಳಿಬಿಟ್ಟುಕೊಂಡಿದ್ದರು.ಮಹಮದನೂ ಹಾಗೆಯೆ ಮಾಡಿದ್ದವ ಕೊನೆಯಲ್ಲಿ ಎಡವಿ ಮುಖ ಕೆಳಗಾಗಿ ನೆಲಕ್ಕೆ ಬಿದ್ದ. ಆಗ "ನಿನ್ನ ಗುಪ್ತಾಂಗವನ್ನು ಇನ್ಯಾರಿಗೂ ತೋರಿಸಬೇಡ" ಎಂಬ ಒಂದು ಅಶರೀರವಾಣಿ ಅವನಿಗೆ ಕೇಳಿಸಿದಂತಾಯಿತು. ಆದರಿಂದ ಅಂದಿನಿಂದ ಅದನ್ನು ಯಾರೊಬ್ಬರೂ ಕಾಣಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್-ಮುಬಾರಕಿ. ಈ ಸಮಸ್ಯೆ ಸುರಳಿತವಾಗಿ ನೆಲೆಕಂಡರೂ ಮೆಕ್ಕಾದಲ್ಲಿ ಸೂಕ್ತ ಅಧಿಕಾರ ಕೇಂದ್ರದ ಅಭಾವ ಎದ್ದುಕಾಣುತ್ತಿತ್ತು. ಖುರೈಷಿಗಳ ಒಳ ಪಂಗಡಗಳಲ್ಲೆ ವಿಪರೀತ ಕಚ್ಚಾಟವಿದ್ದರೂ ಅದೊಂದು ಬಗೆಯ ಸಾಮರಸ್ಯವೂ ಅವರಲ್ಲಿದ್ದು ವ್ಯಾಪಾರ- ವ್ಯವಹಾರಗಳಿಗೆ ಅದರಿಂದ ಅಡ್ಡಿಯಾಗದೆ ಮೆಕ್ಕಾ ಆರ್ಥಿಕವಾಗಿ ಬಲಗೊಂಡಿತ್ತು. ಉದ್ದಿಮೆದಾರರು ದೂರದ ಸಿರಿಯಾ, ನೆರೆಯ ಇರಾಕ್ ನಡುವೆ ವ್ಯಾಪಾರ ಸಂವರ್ಧನೆ ಸಾಧಿಸಿದ್ದರು. ಕ್ರಿಸ್ತ ಶಕ 606ರಲ್ಲಿ ಪರ್ಶಿಯಾದೊಂದಿಗೆ ವ್ಯಾಪಾರಿ ಸಂಬಂಧಗಳು ಅಬು ಸಫ್ಯಾನನ ಮುಂದಾಳುತ್ವದಲ್ಲಿ ಧೃಡಗೊಂಡವು. ಹೀಗೆ ಮೆಕ್ಕಾ ಉನ್ನತಿಯತ್ತ ಸಾಗುತ್ತಿದ್ದರೆ ಇತ್ತ ಮಹಮದ್'ನ ವೈವಾಹಿಕ ಜೀವನದಲ್ಲೂ ಶಾಂತಿ ನೆಲೆಸಿತ್ತು. ಮೂವರು ಹೆಣ್ಣು ಮಕ್ಕಳಿಗೆ ವಿವಾಹ ಯೋಗ ಕೂಡಿಬಂದಿತ್ತು. ಮೊದಲನೆಯವಳಾದ ಜನಾಬ್'ಳನ್ನು ಖತೀಜಳ ತಂಗಿಯ ಮಗನಿಗೆ ಕೊಟ್ಟು ಲಗ್ನ ಕುದುರಿಸಲಾಯಿತು. ಗಮನಿಸಿ ಅರಬ್ಬಿಗಳಲ್ಲಿ ಸೋದರಿಕೆಯ ಒಳವಿವಾಹಗಳು ನಿಶಿದ್ಧವಾಗಿರಲಿಲ್ಲ, ಅಂದರೆ ಅಣ್ಣತಮ್ಮಂದಿರ ಮಕ್ಕಳು ಹಾಗೂ ಅಕ್ಕತಮ್ಮಂದಿರ ಮಕ್ಕಳು ವಿವಾಹವಾಗಬಹುದಿತ್ತು. ಅದೆ ಸಾಮಾಜಿಕ ವ್ಯವಸ್ಥೆಯನ್ನ ಜಗತ್ತಿನ ಎಲ್ಲಾ ಮುಸ್ಲೀಮರೂ ಪಾಲಿಸುತ್ತಾರೆ. ಇನ್ನಿಬ್ಬರು ಹೆಣ್ಣುಮಕ್ಕಳಾದ ರೋಶಿಯಾ ಹಾಗು ಉಮ್'ಕುಲ್'ಸುಮ್'ರನ್ನು ಅಬು ಲಹಾಬ್'ನ ಮಕ್ಕಳಾದ ಓತ್ವಾ ಹಾಗೂ ಒಬೈಬಾರಿಗೆ ಕೊಟ್ಟು ಲಗ್ನ ನೆರವೇರಿಸಲಾಯಿತು. ಮಹಮದ್ ತನ್ನ ಎಳೆಮಗ ಕಾಸಿಂ ಮರಣ ಹೊಂದಿದ ಮೇಲೆ ಅಬು ತಾಲಿಬ್'ನ ಐದು ವರ್ಷದ ಮಗ ಆಲಿಯನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾನೆ. ಅಬು ತಾಲಿಬ್ ಕಡು ಬಡತನದಲ್ಲಿದ್ದುದ್ದರಿಂದ ಮಹಮದ್ ಮಗುವನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನ ಸಂಕಟವನ್ನು ಕೊಂಚ ನಿವಾರಿಸಿದನು. ಇದೆ ಅಲಿ ಮುಂದೆ ಮಹಮದನಿಗೆ ಪ್ರಾಮಾಣಿಕನಾಗಿದ್ದುಕೊಂಡು ಆತನ ಧರ್ಮಾಭಿಮಾನಿಯಾಗಿ ಮೆರೆಯಲಾರಂಭಿಸಿದ. ಅದೆ ಸಮಯದಲ್ಲಿ ಆಲಿಯಂತೆಯೇ ತನ್ನ ಕುಟುಂಬಕ್ಕೆ ಪರಕೀಯನಾಗಿದ್ದ ಹಾರಿಥಾ ಎಂಬ ವ್ಯಕ್ತಿಯ ಮಗನಾದ ಜೈದ್'ಎಂಬಾತನನ್ನೂ ಹೀಗೆಯೆ ದತ್ತು ತೆಗೆದುಕೊಳ್ಳಲಾಯಿತು. ಹಾರಿಥಾ ವಾಸ್ತವವಾಗಿ ಸಿರಿಯನ್ ಕ್ರೈಸ್ತ ಬುಡಕಟ್ಟಿಗೆ ಸೇರಿದ್ದ. ಜೈದ್ ಇನ್ನೂ ಮಗುವಾಗಿದ್ದಾಗಲೆ ಅರಬ್ಬಿ ದರೋಡೆಗಾರರ ಕೈಸೇರಿ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಹಾಗೂ ಖತೀಜಳಿಗೆ ಗುಲಾಮನಾಗಿ ಮಾರಲ್ಪಟ್ಟಿದ್ದ. ಲಗ್ನದ ನಂತರ ಆಕೆಯ ಕೊಡುಗೆಯಾಗಿ ಜೈದ್ ಮಹಮದ್'ನಿಗೆ ಸಂದಿದ್ದ. ಮಹಮದ್ ಆತನನ್ನು ಗುಲಾಮನಾಗಿ ಪರಿಗಣಿಸದೆ ತನ್ನ ಒಡಹುಟ್ಟಿದವನಂತೆ ಕಂಡು ಕಡೆಗೊಮ್ಮೆ ತನ್ನ ದತ್ತು ಮಗನನ್ನಾಗಿ ಸ್ವೀಕರಿಸಿದ. ಆದರೆ ಕಾಲಕ್ರಮೇಣ ಹಾರಿಥಾನಿಗೆ ಕಳೆದು ಹೋಗಿದ್ದ ತನ್ನ ಮಗನ ಸುಳಿವು ಸಿಕ್ಕು ಆತ ಮಗನನ್ನು ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಮೆಕ್ಕಾಗೆ ಧಾವಿಸಿದ. ಅದಕ್ಕಾಗಿ ಮಹಮದನಿಗೆ ಅಪಾರ ಒತ್ತೆಹಣ ನೀಡಲು ಆತ ತಯಾರಿದ್ದರೂ ಮಹಮದ್ ಅದನ್ನು ಒಪ್ಪದೆ ಜೈದ್'ನಿಗೆ ತಂದೆಯೊಂದಿಗೆ ಸಾಗುವ ಅಥವಾ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನೀಡಿದ. ಜೈದ್ ಮಾತ್ರ ತಂದೆಯೊಂದಿಗೆ ಸಾಗಲು ನಿರಾಕರಿಸಿ ಮಹಮದನೆ ತನ್ನ ತಂದೆ-ತಾಯಿಯೆಂದು ಘೋಷಿಸಿಕೊಂಡು ಅಲ್ಲೆ ಉಳಿಯುವ ನಿರ್ಧಾರ ಪ್ರಕಟಿಸಿದ. ಅವನ ಈ ನಡೆಯಿಂದ ವಿಪರೀತ ಹರ್ಷಿತನಾದ ಮಹಮದ್ ಜೈದನ್ನು ಕಾಬಾದ ಕರಿಶಿಲೆಯ ಸಾಕ್ಷಿಯಾಗಿ ತನ್ನ ಉತ್ತರಾಧಿಕಾರಿಯೆಂದು ಪ್ರಮಾಣ ಮಾಡಿದ. ಅಂದಿನಿಂದ ಜೈದ್'ನನ್ನು 'ಜೈದ್ ಇಬ್ನ ಮಹಮದ್' ಅಂದರೆ ಮಹಮದನ ಮಗ ಜೈದ್ ಎಂದು ಗುರುತಿಸಲಾಯಿತು. ಮಹಮದನ ಇಚ್ಛೆಯ ಪ್ರಕಾರವೆ ಜೈದ್ ಮುಂದೆ ಉಮ್ ಐಮನ್ ಎಂಬ ಕೆಲಸದವಳೊಬ್ಬಳನ್ನು ವಿವಾಹವಾಗಬೇಕಾಯಿತು. ಇತಿಹಾಸಕಾರ ಮ್ಯೂರನ ಪ್ರಕಾರ ಆಕೆಯ ವಯಸ್ಸು ಜೈದನ ವಯಸ್ಸಿನ ಎರಡರಷ್ಟಾಗಿತ್ತು!. ಹೀಗಿದ್ದರೂ ಅವರ ವೈವಾಹಿಕ ಬದುಕಿಗೆ ಅದರಿಂದೇನೂ ತೊಂದರೆಯಾಗಲಿಲ್ಲ.'ಒಸಾಮಾ'ನೆಂಬ ಮಗ ಅವರಿಗೆ ಹುಟ್ಟಿದ. ತನ್ನ ವಯಸ್ಸು ನಲವತ್ತರ ಸಮೀಪ ಮುಟ್ಟುತ್ತಿದ್ದ ಹಾಗೆ ಮಹಮದನ ಒಳಮನಸು ತೀವ್ರವಾಗಿ ಚಡಪಡಿಸಲು ಆರಂಭಿಸಿತ್ತು. ಸ್ವಭಾವತಃ ಅಂತರ್ಮುಖಿಯಾಗಿದ್ದ ಆತ ಈಗ ಹಿಂದಿಗಿಂತಲೂ ಹೆಚ್ಚಾಗಿ ಯೋಚನಾಪರನಾಗಿ ಕಾಲ ಕಳೆಯಹತ್ತಿದ್ದ. ಈ ಪರಿಯ ಆತ್ಮಾವಲೋಕನದ ಸಮಯದಲ್ಲಿ ಆತನಿಗೆ ದೈವತ್ವ ಹಾಗೂ ಧರ್ಮದ ಕುರಿತು ಜಿಜ್ಞಾಸೆ ಒಳಗೊಳಗೆ ಮೂಡಲು ಆರಂಭಿಸಿತ್ತು. ಹೀಗೆ ಮುಕ್ಕಾದ ಸುತ್ತಲಿನ ಪರ್ವತದ ಕಣಿವೆಗಳಲ್ಲಿರುವ ಗುಹೆಗಳಲ್ಲಿ ದೀರ್ಘಕಾಲ ಏಕಾಂತದಲ್ಲಿದ್ದು ಚಿಂತಿಸಲು ಆತ ತೊಡಗಿದ. ಹೀರಾ ಪರ್ವತದಲ್ಲಿದ್ದ ಒಂದು ಗುಹೆ ಆತನಿಗೆ ಆಪ್ತವಾದ ಸ್ಥಳವಾಗಿದ್ದಿತು. ಹೀಗೆ ಏಕಾಂತದಲ್ಲಿ ಚಿಂತಿಸುತ್ತಾ ಧ್ಯಾನಾಸಕ್ತನಾಗಿ ಬಹು ಸಮಯವನ್ನ ಅಲ್ಲಿಯೆ ಕಳೆಯಲು ಆರಂಭಿಸಿದ ಕೆಲದಿನಗಳ ನಂತರ ಒಮ್ಮೆ ಅಲ್ಲಿಯೆ ತಿರುಗಾಡುತ್ತಿದ್ದಾಗ ಆಗಸದಿಂದ ಒಬ್ಬ ಯಕ್ಷನ ಗಟ್ಟಿಧ್ವನಿಯೊಂದು ಮಹಮದನಿಗೆ ಕೇಳಿಸಿದಂತಾಗಿ ಆತ ಗಾಬರಿಯಾದ. ತಲೆಯೆತ್ತಿ ನೋಡಿದಾಗ ಅತಿಮಾನುಷ ಯಕ್ಷನ ದರ್ಶನ ಅವನಿಗಾಯಿತು. ಮನೆಗೆ ಹಿಂದಿರುಗಿದ ಆತ ಪತ್ನಿ ಖತೀಜಳಲ್ಲಿ ಈ ವಿಷಯವನ್ನ ಅರಹುತ್ತಾ "ವಿಗ್ರಹಾರಾಧನೆ ಹಾಗು ಭವಿಷ್ಯವಾಣಿ ನುಡಿಯುವುದನ್ನ ನಂಬದಿರುವ ಹಾಗೂ ಅಸಹ್ಯ ಪಡುವ ನಾನೆ ಈಗ ನನಗರಿವಿಲ್ಲದ ಹಾಗೆ ಭವಿಷ್ಯ ನುಡಿವ ಜೋತಿಷಿಯಾಗುತ್ತಿದ್ದಿನೇನೊ!" ಎನ್ನುತ್ತಾ ವಿಹ್ವಲನಾದ. ಆದರೆ ಆತನ ಈ ಮಾತಿಗೆ ಸೊಪ್ಪು ಹಾಕದೆ ಖತೀಜಾ 'ಖಂಡಿತಾ ಇಲ್ಲ! ದೇವರು ನಿನಗೆ ಹಾಗಾಗಲು ಬಿಡನು" ಎಂದು ಸಮಾಧಾನಿಸಿ ಈ ಸಂಗತಿಯನ್ನ ತನ್ನ ಹಿರಿಯ ಸಂಬಂಧಿಕ ವರಾಕನಿಗೆ ತಿಳಿಸುತ್ತಾಳೆ. ಇದನ್ನು ಕೇಳಿ ಹರ್ಷಿತನಾದ ವರಾಕ "ಸಂಶಯವಿಲ್ಲ ಇದೆಲ್ಲ ಒಳ್ಳೆಯದರ ಆರಂಭ! ಆತ ದೇವರ ದಯದಿಂದ ಸತ್ಯವನ್ನಷ್ಟೆ ನುಡಿಯುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ. ಅಲ್ ವಾಕಿಡಿ, ಇಬ್ನ ಹಿಶಾಮ್ ಹಾಗೂ ಅಲ್ ತಾಬರಿಯಂತಹ ಇತಿಹಾಸಕಾರರು ಮಹಮದ್ ಯಕ್ಷ ಗೇಬ್ರಿಯಲ್'ನಿಂದ ಅಪೌರುಷೇಯವಾದ ದಿವ್ಯಜ್ಞಾನ ಪಡೆದಿದ್ದನ್ನು ದಾಖಲಿಸಿದ್ದಾರೆ. ಇವರನ್ನೆ ಉದಾಹರಿಸುತ್ತ ಇತಿಹಾಸಕಾರ ಸರ್ ವಿಲಿಯಂ ಮೊಯಿರ್ ತಮ್ಮ ಗ್ರಂಥದಲ್ಲಿ ಕೊಡುವ ಸಾರಾಂಶ ಇಷ್ಟು "ಮಹಮದ್ ತನ್ನ ಕುಟುಂಬಸ್ಥರೊಂದಿಗೆ ಒಂದೊಮ್ಮೆ ಹೀರಾಪರ್ವತದ ಗುಹೆಯಲ್ಲಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಗೇಬ್ರಿಯಲ್ಲನ ಪ್ರವೇಶವಾಗುತ್ತದೆ. ಅವನ ಕೈಯಲ್ಲಿ ಒಂದು ರೇಷ್ಮೆಯ ತುಂಡಿದ್ದು ಅದರಲ್ಲಿ ಅದೇನೂ ಬರೆದಿರುತ್ತದೆ. ಯಕ್ಷ ಮಹಮದನನ್ನು ಗಟ್ಟಿಯಾಗಿ ಹಿಡಿದುಕೊಂಡು 'ಓದು' ಎಂದು ಆದೇಶಿಸುತ್ತಾನೆ. ಆದರೆ ಅನಕ್ಷರಸ್ಥನಾಗಿದ್ದ ಮಹಮದ್ ಓದಲಾಗದೆ ಯಕ್ಷನ ಬಿಗಿ ಹಿಡಿತದಿಂದ ವೇದನೆ ಅನುಭವಿಸುತ್ತಾ 'ಏನನ್ನು ಓದಲಿ?' ಎಂದು ಕೇಳಲು, ಗೇಬ್ರಿಯಲ್ ದೇವರ ಹೆಸರಲ್ಲಿ ಓದು ಎಂದಾಗ ಹುಟ್ಟುವುದೆ ಖುರಾನಿನ 96ರಿಂದ 5ರವರೆಗಿನ ಸುರಾಗಳು ಅಂದರೆ ಶ್ಲೋಕಗಳು. ಅವುಗಳನ್ನಾತ ಗಟ್ಟಿಯಾಗಿ ನುಡಿದ ನಂತರ ಯಕ್ಷ ಅಲ್ಲಿಂದ ನಿರ್ಗಮಿಸಿದ ; ಅವಷ್ಟೂ ಸುರಾಗಳೂ ಮಹಮದನ ಹೃದಯದಲ್ಲಿ ಅಚ್ಚು ಹಾಕಿದಂತೆ ಅನುಭವವಾಯಿತು" ಹೀಗೆ ಕುರಾನಿನ 96ನೆ ಸುರಾದಲ್ಲಿದ್ದ 15 ಪದ್ಯಗಳು ಮಹಮದನಿಗೆ ಮೊದಲು ವ್ಯಕ್ತವಾದದ್ದು ಅಪೌರುಷೇಯವಾಣಿಯೊಂದರಿಂದ. ಹೀಗೆ ಕೆಲತಿಂಗಳುಗಳು ಕಳೆದ ನಂತರ ಯಕ್ಷ ಗೇಬ್ರಿಯಲ್ಲನ ಪುನರಾಗಮನವಾಯಿತು. ಈ ಹಂತದಲ್ಲಿ ಆದ ಮಾನಸಿಕ ತಳಮಳ ಹಾಗು ಆಂತರಿಕ ಹತಾಶೆಯಿಂದ ಮಹಮದ್ ಹತಾಶನಾಗಿಹೋಗಿ ಆತ್ಮಹತ್ಯೆಗೂ ಯೋಚಿಸಿದ್ದ ದಿನಗಳವು! ಆದರೆ ಇದ್ದಕ್ಕಿದಂತೆ ಒಂದು ದಿನ ಆಗಸದಲ್ಲಿ ಸಿಂಹಾಸನದಲ್ಲಿ ಕೂತಿದ್ದ ಗೇಬ್ರಿಯಲ್ಲನ ದರ್ಶನ ಅವನಿಗಾಯಿತು. ಯಕ್ಷ "ಓ ಮಹಮದ್! ನೀನೀಗ ದೇವರ ಪ್ರವಾದಿ ಹಾಗೂ ನಾನು ಯಕ್ಷನಾದ ಗೇಬ್ರಿಯಲ್... ಇದು ಸತ್ಯ!" ಎಂದು ಸಾರಿದ್ದನ್ನು ಮಹಮದ್ ಆಲಿಸಬೇಕಾಯಿತು. ಅವನೊಳಗೆ ಅಡಗಿದ್ದ ಗೊಂದಲಗಳನ್ನೆಲ್ಲಾ ಗೇಬ್ರಿಯಲ್ ಒಂದೊಂದಾಗಿ ಪರಿಹರಿಸಿ ಅವನನ್ನು ಮಾನಸಿಕವಾಗಿ ತಣಿಸಿದ. ಧೃಡಗೊಂಡ ಮನಸ್ಸಿನಿಂದ ಮುಂದಿನ ದಿನಗಳಲ್ಲಿ ಮಹಮದ್ ಮರಳಿ ಮರಳಿ ದೈವವಾಣಿಯ ಸಾರುವಿಕೆಯನ್ನ ಆರಂಭಿಸಿದ್ದು ಹೀಗೆ. ಇದೆ ಮುಂದೆ 'ಖುರಾನ್' ಎಂದು ಪ್ರಸಿದ್ಧವಾದ ಧರ್ಮಗ್ರಂಥವಾಯಿತು. 'ತನಗೆ ದೈವವಾಣಿಯ ಸಾಕ್ಷಾತ್ಕಾರವಾಗಿದೆ, ತಾನಿನ್ನು ಅಲ್ಲಾನ ಪ್ರವಾದಿ' ಎಂದು ಆರಂಭಿಸಿದ ಮಹಮದನ ಮತಪ್ರಚಾರಕ್ಕೆ ಮೊದಲು ಸಮ್ಮತಿಸಿ ಆತನ ಶಿಷ್ಯೆಯಾದವಳು ಸ್ವತಃ ಆತನ ಮಡದಿ ಖತೀಜಾ. ಆಕೆ ಗಂಡನನ್ನು ಪ್ರವಾದಿ ಎಂದು ಒಪ್ಪಿಕೊಂಡ ಮೇಲೆ ನಿಧಾನವಾಗಿ ಸಂಬಂಧಿಕರು, ಸ್ನೇಹಿತರು ಕುಟುಂಬದ ಆತ್ಮೀಯರು ಹೀಗೆ ಒಬ್ಬೊಬ್ಬರಾಗಿ ಆಕೆಯನ್ನು ಹಿಂಬಾಲಿಸಲಾರಂಭಿಸಿದರು. ಕುಟುಂಬದ ಸದಸ್ಯರಲ್ಲಿ ಪ್ರಮುಖವಾಗಿ ಮಹಮದನ ಸಾಕು ಮಗ ಜೈದ್, ದೊಡ್ಡಪ್ಪನ ಮಗ ಆಲಿ, ಪತ್ನಿ ಖತೀಜಾಳ ಬಂಧು ವರಾಕಾ, ಆಪ್ತ ಸ್ನೇಹಿತ ಅಬು ಬಕರ್ ಪ್ರಮುಖರು.ಅಬು ಬಕರ್ ಮಹಮದನಿಗಿಂತ ಕೇವಲ ಎರಡುವರ್ಷಕ್ಕೆ ಕಿರಿಯನಾಗಿದ್ದು ಆತನ ವಿಧೇಯ ಚುರುಕು ಬುದ್ದಿಯ ಆಪ್ತಮಿತ್ರನಾಗಿದ್ದ. ಪ್ರವಾದಿಯೊಂದಿಗೆ ಸಲುಗೆಯ ನಿಕಟ ಬಾಂಧವ್ಯ ಹೊಂದಿದ್ದ ಆತನನ್ನು ಮುಸ್ಲಿಂ ಪ್ರಪಂಚ 'ಅಸ್ ಸಿದ್ಧಿಕಿ' ಎಂದೆ ಗುರುತಿಸುತ್ತದೆ, ಅರಬ್ಬಿಯಲ್ಲಿ ಹಾಗೆಂದರೆ ಸತ್ಯವಂತ ಎಂದರ್ಥ. ವಾಸ್ತವವಾಗಿ ಅವನ ಅಸಲಿ ಹೆಸರು 'ಅಬ್ದುಲ್ಲಾ ಇಬ್ನ ಒತ್ಹಾಮನ್ ಅಬು ಕುಹಾಫಾ' ಎಂದಾಗಿದ್ದರೂ ಒಂಟೆಗಳ ಮೇಲೆ ಅವನಿಗಿದ್ದ ವಿಪರೀತ ಮೋಹ ಹಾಗೂ ಕಾಳಜಿಯ ಕಾರಣದಿಂದ ಆತನಿಗೆ ಅಬು ಬಕರ್ ಎಂಬ ಅಡ್ಡ ಹೆಸರು ಇಡಲಾಗಿತ್ತು ಅನ್ನುತ್ತಾನೆ ಇತಿಹಾಸಗಾರ ಮ್ಯೂರ್. ವ್ಯವಹಾರಸ್ಥನಾಗಿ ಅಪಾರ ಹಣಗಳಿಸಿದ್ದ ಅಬು ಬಕರ್ ತನ್ನ ಹಿತಮಿತ ಹಾಗೂ ಸೌಜನ್ಯಯುತ ಸಂಭಾಷಣೆಗಳಿಂದ ಜನಮನ ಗೆದ್ದಿದ್ದ. ತನ್ನ ನ್ಯಾಯಯುತ ನಡುವಳಿಕೆಗಳಿಂದ ತನ್ನ ಖುರೈಷಿ ಬುಡಕಟ್ಟಿನ ಮುಖಂಡರ ಸ್ನೇಹ ಗೌರವ ಸಂಪಾದಿಸಿದ್ದ. ಒಬ್ಬ ವೀರ ಪೂಜಕನಾಗಿದ್ದ ಆತ ತನ್ನ ಕೊನೆಯ ಉಸಿರಿರುವವರೆಗೂ ತಾನು ನಂಬಿದ ನಾಯಕನನ್ನು ಅತ್ಯಂತ ವಿಧೇಯನಾಗಿ ಆರಾಧಿಸಿದ. ಇಂತಹ ಅಬು ಬಕರ್'ನ ಶ್ರದ್ಧಾಪೂರ್ಣ ನಂಬಿಕೆಗೆ ಪಾತ್ರನಾದದ್ದು ಮತಪ್ರಚಾರದ ದೃಷ್ಟಿಯಿಂದ ಮಹಮದ್ ಸಾಧಿಸಿದ ಮೊತ್ತಮೊದಲ ವಿಜಯವಾಗಿತ್ತು. ಅಬು ಬಕರ್'ನ ಪ್ರಭಾವದಿಂದಲೆ ಮುಂದೆ ಐವರು ಪ್ರಮುಖ ಖುರೈಷಿ ಪ್ರಮುಖರು ನೂತನ ಧರ್ಮಾನುಯಾಯಿಗಳಾಗಳು ಸಾಧ್ಯವಾಯಿತು. ಅವರೆಂದರೆ ತನ್ನ ಹದಿನಾರನೆ ವಯಸ್ಸಿನಲ್ಲಿಯೆ ಹೊಸಧರ್ಮಕ್ಕೆ ಸೇರಿದ ಸಾದ್ ಎಂಬ ಯುವಕ, ಅಲ್ ಗುಬೈರ್ ಎಂಬ ಖತೀಜಾ ಹಾಗೂ ಮಹಮದನ ನಿಕಟ ಸಂಬಂಧಿ, ಮುಂದೆ ಮಹಮದನ ಮಗಳು ರೋಕೈಯಾಳ ಎರಡನೆ ಪತಿಯಾದ 'ಒತ್ಹಮನ್' ಎಂಬ ಯುವಕ ( ಅದಾಗಲೆ ಒತ್ವಾನನ್ನು ವಿವಾಹವಾಗಿದ್ದ ರೋಕೈಯಾ ಮುಂದೆ ಆತನಿಂದ ವಿಚ್ಚೇದಿತೆಯಾಗಿ ಈ ಒತ್ಹಮನ್'ನನ್ನು ಮರುವಿವಾಹವಾದಳು). ತಲ್ಹಾ ಎಂಬ ಅಬು ಬಕರನ ಸಂಬಂಧಿ ಹಾಗೂ ಮಹಾಮದನಿಗಿಂತ ವಯಸ್ಸಿನಲ್ಲಿ ಹತ್ತುವರ್ಷ ಕಿರಿಯನಾಗಿದ್ದ ಅಬ್ದುಲ್ ರೆಹಮಾನ್ ಎಂಬ ಯುವಕ. ಗುಲಾಮಗಿರಿಯಿಂದ ವಿಮೋಚಿತರಾಗುವ ಆಕರ್ಷಣೆಯಿಂದ ಹಲವಾರು ಗುಲಾಮರು ಮತಾಂತರಗೊಂಡರು. ಆ ಪೈಕಿ ಅಬಿಸೀನಿಯಾ ದೇಶದ ಗುಲಾಮ ಬಿಲಾಲ್ ಪ್ರಮುಖನಾದವ, ಅಬು ಬಾಕರ್ ಆತನನ್ನು ಒತ್ತೆಹಣ ನೀಡಿ ಗುಲಾಮಗಿರಿಯಿಂದ ಬಿಡಿಸಿದ ಮೇಲೆ ಆತನನ್ನು ಸಂತೋಷದಿಂದಲೆ ಮಹಮದ್ ತನ್ನ ಧರ್ಮಕ್ಕೆ ಬರಮಾಡಿಕೊಂಡ. ಇದೆ ಬಿಲಾಲ್ ಮುಂದೆ ಇಸ್ಲಾಮಿಕ್ ಪ್ರಪಂಚದ ಮೊತ್ತಮೊದಲ 'ಮುಯಾಜಿನ್' ಎಂದು ಕರೆಸಿಕೊಂಡ. ಮುಯಾಜಿನ್ ಅಂದರೆ ಅರಬ್ಬಿಯಲ್ಲಿ 'ಪ್ರಾರ್ಥನೆಗೆ ಕರೆನೀಡುವ ವ್ಯಕ್ತಿ' ಎಂದು ಅರ್ಥ ಬರುತ್ತದೆ. ಅಬ್ದುಲ್ಲಾ ಇಬ್ನ ಮಸೂದ್ ಎಂಬ ಇನ್ನೊಬ್ಬ ಮತಾಂತರಿತ ಗುಲಾಮ ಮುಂದೆ ಮಹಮದನ ಆಪ್ತಸೇವಕನಾಗಿ ಪ್ರಸಿದ್ಧಿಗಳಿಸಿದ. ಕಾಬ್ದಾಲ್ ಎಂಬ ಇನ್ನೊಬ್ಬ ಗುಲಾಮನನ್ನೂ ಈ ಪಟ್ಟಿಯಲ್ಲಿ ಹೆಸರಿಸಬಹುದು. ಈ ಬಹುತೇಕ ಮತಾಂತರಿತ ಗುಲಾಮರು ಮೂಲದಲ್ಲಿ ಒಂದೋ ಯಹೂದಿ ಅಥವಾ ಸಿರಿಯನ್ ಕ್ರೈಸ್ತರಾಗಿದ್ದು ತಮ್ಮ ಕೆಟ್ಟ ನಸೀಬಿನಿಂದ ಪಾರಾಗಿ ಗುಲಾಮಗಿರಿಯಿಂದ ಮುಕ್ತರಾಗಲು ಮತಾಂತರವಾದದ್ದು ಸಹಜ ಎನ್ನುತ್ತಾನೆ ಇತಿಹಾಸಕಾರ ಅಲ ಹಾಜ್ ಕಾಸಿಂ ಅಲಿ ಜೈರಾಜಬಿ. ಹೀಗೆ ಸ್ಥಾಪಿತವಾಗಿದ್ದ ಮಹಮದನ ನೂತನ ಧರ್ಮ ಸಾಮಾಜಿಕ ಭೀತಿಯಿಂದ ಆರಂಭದಲ್ಲಿ ಕೇವಲ ಒಂದು 'ಗುಪ್ತ ಸಂಘ'ವಾಗಿದ್ದಿತು. ಅತ್ಯಂತ ಗೌಪ್ಯವಾಗಿ ಮತಪ್ರಚಾರದ ಕಾರ್ಯಕೈಗೊಳ್ಳಲಾಗುತ್ತಿತ್ತು. ಕ್ರಮೇಣ ಇಸ್ಲಾಂ ಬಲಗೊಂಡಾದ ಮೇಲೆ ಗುಪ್ತ ಪ್ರಚಾರದ ನಿಯಮಗಳನ್ನೆಲ್ಲಾ ಬದಿಗೊತ್ತಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಒಮ್ಮೆ ಯಾರಾದರೂ ಈ ಸಂಘದ ಸದಸ್ಯರಾದರೆ ಅನಂತರ ಕೊನೆಯುಸಿರು ಇರುವವರೆಗೂ ಅವರು ಅಲ್ಲಿನ ಅಜೀವ ಸದಸ್ಯರಾಗಿಯೆ ಬಾಳುವುದು ಕಡ್ಡಾಯವಾಗಿತ್ತು. ಹಾಗೊಂದು ವೇಳೆ ಇನ್ಯಾವುದೊ ಹೊಸ ನಂಬಿಕೆಗೆ ಮಾರುಹೋದರೆ ಜೀವ ತೆರಬೇಕಾಗಿದ್ದಿತು. ಇದೆ ಅತಿರೇಕದ ನಿಯಮ ಇನ್ನೂ ಇಸ್ಲಾಮಿನಲ್ಲಿ ಚಾಲ್ತಿಯಲ್ಲಿದೆ. ಇಂದಿಗೂ ಇಸ್ಲಾಮಿನಲ್ಲಿ ಈ ನಿಯಮ ಪಾಲನೆಯನ್ನು ಕಾಣಬಹುದಾಗಿದೆ. ಒಮ್ಮೆ ಮುಸ್ಲೀಮನಾಗಿ ಮತಾಂತರವಾದವನ ಪುನರ್ ಮತಾಂತರ ದುಸ್ಸಾಧ್ಯ! ( ಇನ್ನೂ ಇದೆ...)

No comments:

Post a Comment