ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, April 20, 2012

ತಪ್ಪಿಲ್ಲವಲ್ಲ ಇದರಲ್ಲಿ?

ಖಾಲಿ ಕಂಗಳಲ್ಲಿ ಕಂಬನಿಯ ಕೊನೆ ಹನಿ ಇನ್ನೂ ಇದೆ
ಎದೆಯಾಳದಲ್ಲಿ ನೋವಿನ ಕಡೇ ಹನಿ ಉಳಿದಿರುವ ತನಕ....
ಮನದೊಳಗೆ ನಿರೀಕ್ಷೆ ಜೀವಂತ,
ಕಿರಣ ತಬ್ಬಿದ ನೆಲದ ಬತ್ತಲೆ ಮ
ನಸುಕಿನಲ್ಲೂ ನವಿರಾಗಿ ಬೆವರಿದಾಗ....
ನನ್ನೊಳಗೆ ಹುಟ್ಟಿದ ಹೊಸ ಕನಸೆ ನೀನು/
ನಿನ್ನ ಕನಸುಗಳು ಸೆರೆಯಾದ ನನ್ನ ಕಣ್ಣುಗಳಲ್ಲಿ
ಸಿರಿ ತುಂಬಿ ತುಳುಕಿತು...
ನಿನ್ನೊಲವಿನ ಜಹಗೀರಿನಲ್ಲಿ ನೆಲೆಯಾದ ನನ್ನ ಮನ
ದೋಚಲಾರದಷ್ಟು ದೊಡ್ಡ ಖಜಾನೆಯಾಯಿತು,
ಮುಂಬೆಳಗಿನ ಬೀಸೊ ಗಾಳಿ ಇಷ್ಟು ತಂಪೆನಿಸೋಕೆ...
.ಅದರಲ್ಲಿ ತೇಲಿ ಬರುತ್ತಿರೊ ನಿನ್ನ ನೆನಪೂ ಕಾರಣ//



ಹಿಮದ ಹಲಗೆಯ ಮೇಲೆ ನಿನ್ನ ಹೆಸರನ್ನ ಪ್ರಾರ್ಥನೆ ಅಂತ ಬರೆದೆ
ಕಲ್ಲಿನ ಎದೆಯ ಮೇಲೆ ನಿನ್ನ ಉಸಿರನ್ನ ವರ ಅಂತ ಕೊರೆದೆ...
ತಪ್ಪಿಲ್ಲವಲ್ಲ ಇದರಲ್ಲಿ?,
ಸಂಜೆ ನೀನೆ
ಮರಳಿ ಬರುವ ಮುಂಜಾನೆಯೂ....
ಮನಸ ಅಂಚಿನಲ್ಲಿ ಹಾಕಿದ ಚಂದದ ಚಿತ್ತಾರವೂ ನೀನೇನೆ/
ಬರುವ ಕ್ಷಣಗಳೆಲ್ಲ ಹೋಗಲೇ ಬೇಕಿದೆ
ಮನದೊಳಗೆ ಅರಳುವ ಕನಸಿನ ಸುಮಗಳೂ.....
ಎಂದಾದರೊಮ್ಮೆ ಮುದುಡಲೇ ಬೇಕಿದೆ,
ನನ್ನೆದೆಯ ಪೊಟರೆಯಲ್ಲಿ ಹಾಡುವ ಕೋಗಿಲೆಯ ಗುಂಜನವನ್ನ
ಹಾಗೆ ಕಾಯ್ದಿರಿಸಿದ್ದೇನೆ....
ಕೇಳುವ ನಿನ್ನ ಕಿವಿಯ ನಿರೀಕ್ಷೆಯಷ್ಟೆ ಇನ್ನಿರೋದು//



ಗೋಳ ಭೂಮಿಯಾಚೆ ನೀನಿದ್ದರೂ
ನಿನ್ನ ನೆನಪಿನ ತಲ್ಲಣದ ಕಂಪನ ನಿತ್ಯ ನನ್ನೆದೆಯಲ್ಲಿ ಏಳಿಸುತ್ತಿದ್ದೀಯ....
ಗಾಬರಿ ಇಲ್ಲ ಭೂಮಿ ಕಂಪಿಸಿದರೆ
ಪಾಪ ಅದಕ್ಕೂ ಅದ್ಯಾರದೋ ಕನಸಿನ ಕನವರಿಕೆ ಆವರಿಸಿದ್ದಿರಬಹುದು,
ನಾನೇನು ಬಯಸಿರಲಿಲ್ಲ
ನೀನೆ ಇಷ್ಟಪಟ್ಟು ಕೂಡಿಸಿದ್ದು ನಮ್ಮಿಬ್ಬರ ಜೀವದ ನಡುವೆ ಬಂಧದ ಕೊಂಡಿ....
ನೀನೇನೆ ಈಗ ಎಲ್ಲಾ ಅಲಿಖಿತ ಒಪ್ಪಂದಗಳನ್ನ
ಏಕಪಕ್ಷೀಯವಾಗಿ ಮುರಿದು ಹಾದಿ ಬದಲಿಸಿಕೊಂಡೆ ನಿನ್ನ ಬಾಳಿನ ಬಂಡಿ....
ಉಳಿದದ್ದು ನನ್ನ ಪಾಲಿಗೆ ನೆನಪಿನ ನೋವು ಮಾತ್ರ....ಇದನ್ನೂ ನಾನು ಬಯಸಿರಲಿಲ್ಲ!/
ನಾನು ಬಯಸಿದ್ದ ಜೀವದ್ದು ಇಷ್ಟೊಂದು ಕಲ್ಲು ಮನಸ?
ನನ್ನನ್ನದು ಆವರಿಸಿ ಒಂದೊಮ್ಮೆ ಮುದಗೊಳಿಸಿದ್ದು ಕೇವಲ ಕನಸ?
ಪಡುವಣಕ್ಕೂ ರಂಗು ರಂಗಾಗುವ ಹಕ್ಕಿದೆ......
ಅದರ ಒಳ ಮನಸಲ್ಲಿ
ಸಂಜೆಯಲ್ಲಾದರೂ ಸರಿ ರವಿ ತನ್ನನ್ನೂ ಅಪ್ಪುತ್ತಾನೆ ಅನ್ನುವ ಸೊಕ್ಕಿದೆ,
ನಸು ಇರುಳ ಮಬ್ಬು ಬೆಳಕಿನಲ್ಲಿ ನಿನ್ನ ಬಿಂಬ ಕಂಡಂತಾದ ನನ್ನ ಕನಸು......
ಎಂದಾದರೊಮ್ಮೆ ಕನಿಷ್ಠ ಕನಸಲ್ಲಾದರೂ(?) ನನಸಾದೀತ ನೀನೆ ಹೇಳು?//

No comments:

Post a Comment