ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, February 28, 2012

ಆಡಂಬರದ ಪೂಜೆ

ಕುರುಕ್ಷೇತ್ರದ ಯುದ್ಧ ಮುಗಿದು ಯುಧಿಷ್ಠರ ಚಕ್ರವರ್ತಿಯಾಗಿದ್ದಾನೆ. ದೇಶದಲ್ಲಿ ಶಾಂತಿ ಇದೆ. ಇನ್ನು ಮುಂದೆ ಯುದ್ಧದ ಭೀತಿ ಇಲ್ಲ. ಯುದ್ಧ ಮಾಡಲು ಯಾರೂ ಉಳಿದೇ ಇಲ್ಲ.
ಅರ್ಜುನನಿಗೆ ತಾನು ಯುದ್ಧದಲ್ಲಿ ಮಾಡಿದ ಸಾಧನೆಯ ಬಗ್ಗೆ ಗರ್ವ ಬಂದಿದೆ. 

ತಾನಿಲ್ಲದಿದ್ದರೆ ಪಾಂಡವರು ಗೆಲ್ಲುವುದು ಸಾಧ್ಯವಿತ್ತೇ? ತಾನು ಈಶ್ವರನನ್ನು ಒಲಿಸಿಕೊಂಡು ಪಡೆದ ಪಾಶುಪತಾಸ್ತ್ರದಿಂದಲೇ ವಿಜಯ ಸಾಧ್ಯವಾದದ್ದು ಎಂದು ಬಲವಾಗಿ ನಂಬಿದ್ದ. ಪರಶಿವನ ಬಗ್ಗೆ ತನಗಿದ್ದ ಗೌರವವನ್ನು ತೋರಿಸಲು ದಿನಾಲು ಭರ್ಜರಿಯಾಗಿ ಪೂಜೆ ಮಾಡುತ್ತಿದ್ದ.
 
ಅವನು ಪೂಜೆಗೆ ಕುಳಿತರೆ ಆ ಕರ್ಪೂರ, ಊದುಬತ್ತಿಗಳ ಘಮಲೇನು? ಅದೆಷ್ಟು ಆರತಿಗಳು, ಅದೆಷ್ಟು ಬಂಡಿ ಬಂಡಿ ಹೂಗಳು? ಅರ್ಜುನ ಪೂಜೆ ಮಾಡುವಾಗ ಅವನ ಸೇವಕರಿಗೆ ಈ ವಸ್ತುಗಳನ್ನು ಒದಗಿಸಿ ಒದಗಿಸಿ ಪ್ರಾಣ ಹೋಗುತ್ತಿತ್ತು. 

ಇಡೀ ದೇಶದ ತುಂಬೆಲ್ಲ ಅರ್ಜುನನ ಪೂಜೆಯ ವೈಖರಿಯ ಮಾತು ಹರಡಿತ್ತು. ಅದು ಪ್ರಚಾರವಾದಷ್ಟೂ ಅರ್ಜುನನ ಅಭಿಮಾನ ಹೆಚ್ಚಾಗುತ್ತಿತ್ತು, ಮತ್ತೆ ಪೂಜೆಯ ಆಡಂಬರ ಬೆಳೆಯುತ್ತಿತ್ತು. 

ಆದರೆ ಭೀಮ ಈ ತರಹದ ಪೂಜೆಯನ್ನು ಮಾಡುತ್ತಿರಲಿಲ್ಲ. ಬಹಳ ಹೆಚ್ಚೆಂದರೆ ಊಟಕ್ಕೆ ಕೂಡ್ರುವ ಮುಂದೆ ಐದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿ ಓಂ ಶಿವಾಯ ನಮಃ ಎನ್ನುತ್ತಿದ್ದ.
 
ಅದನ್ನು ನೋಡಿ ಅರ್ಜುನ ತಿರಸ್ಕಾರದ ನಗೆ ನಗುತ್ತಿದ್ದ. ತನ್ನ ಪೂಜೆಯ ಸಂಭ್ರಮದ ಬಗ್ಗೆ ಅರ್ಜುನನಿಗೆ ಬಂದ ಅಹಂಕಾರದ ಸೂಚನೆ ಕೃಷ್ಣನಿಗೆ ದೊರೆಯಿತು, ತಕ್ಷಣವೇ ಹಸ್ತಿನಾವತಿಗೆ ಬಂದ.

ಮರುದಿನ, ಅರ್ಜುನನ ಪೂಜೆಯ ಆರ್ಭಟವನ್ನು ನೋಡಿದ. ಪೂಜೆಯ ನಂತರ ಹೇಳಿದ, `ಅರ್ಜುನ, ನಿನ್ನ ಪೂಜೆಯನ್ನು ನೋಡಿ ತುಂಬ ಸಂತೋಷವಾಯಿತು. ಇದು ಈಶ್ವರನನ್ನು ನಿಜವಾಗಿಯೂ ಒಲಿಸುವ ಬಗೆ ಅಲ್ಲವೇ?` `ಹೌದು ಕೃಷ್ಣ, ಮಹೇಶ್ವರನ ಗೌರವಕ್ಕೆ ತಕ್ಕ ರೀತಿಯಲ್ಲಿ ಪೂಜೆ ಮಾಡಬೇಡವೇ? ಭೀಮನ ಹಾಗೆ ಒಮ್ಮೆ ಮಾತ್ರ ಓಂ ಶಿವಾಯ ನಮಃ ಎಂದರೆ ಸಾಕೇ? ಅದೂ ಒಂದು ಪೂಜೆಯೇ` ಎಂದು ಅಹಂಕಾರದಿಂದ ಬೀಗಿದ ಅರ್ಜುನ. 

ಆಗ ಕೃಷ್ಣ ಹೇಳಿದ, `ಅರ್ಜುನ, ನೀನು ಆ ಮಹೇಶ್ವರನನ್ನು ನೋಡಿ ತುಂಬ ದಿನಗಳಾದುವಲ್ಲವೇ? ನಡೆ, ನಾವಿಬ್ಬರೂ ಸೇರಿ ಕೈಲಾಸಕ್ಕೆ ಹೋಗಿ ಆತನಿಗೆ ಪ್ರಣಾಮ ಸಲ್ಲಿಸಿ ಬರೋಣ.` ಅರ್ಜುನ ಒಪ್ಪಿದ. ಮರುದಿನವೇ ಇಬ್ಬರೂ ಪ್ರಯಾಣ ಬೆಳೆಸಿದರು.

ಕೈಲಾಸದ ಹತ್ತಿರಕ್ಕೆ ಬರುತ್ತಿದ್ದರು. ಆಗ ಅಲ್ಲೊಂದು ದೃಶ್ಯ ಕಾಣಿಸಿತು. ಒಬ್ಬ ಮನುಷ್ಯ ಒಂದು ಗಾಡಿಯ ತುಂಬ ಹೂಗಳನ್ನು ತುಂಬಿಕೊಂಡು ಬಂದು ಒಂದೆಡೆಗೆ ಸುರಿಯುತ್ತಿದ್ದ. ಅವನ ಹಿಂದೆ ಮತ್ತೊಂದು ಬಂಡಿ, ಅದರ ಹಿಂದೆ ಇನ್ನೊಂದು ಬಂಡಿ. ಹೀಗೆ ಬಂಡಿಗಳ ಸಾಲೇ ಬರುತ್ತಿದ್ದವು. ಒಬ್ಬೊಬ್ಬರಾಗಿ ಬಂದು ಹೂಗಳನ್ನು ತಂದು ತೆಗ್ಗಿನಲ್ಲಿ ಸುರುವಿ ಮತ್ತೆ ಅವಸರದಿಂದ ಹೋಗುತ್ತಿದ್ದರು. 

ಕೃಷ್ಣ ಆ ಬಂಡಿ ಸವಾರನನ್ನು ಕೇಳಿದ, `ಏನಪ್ಪಾ ಇದು. ಇಷ್ಟೊಂದು ಹೂಗಳನ್ನು ಇಲ್ಲಿ ಸುರಿದು ಹೋಗುತ್ತಿದ್ದೀರಿ?` ಆತ ಹೇಳಿದ, `ಸ್ವಾಮೀ ದಯವಿಟ್ಟು ನಮ್ಮನ್ನು ಮಾತನಾಡಿಸಬೇಡಿ. 

ನಮಗೆ ಒಂದು ನಿಮಿಷವೂ ಪುರುಸೊತ್ತಿಲ್ಲ, ಈಗಾಗಲೇ ಐದು ನೂರು ಬಂಡಿ ಹೂಗಳನ್ನು ಕೈಲಾಸದಿಂದ ತಂದು ಸುರುವಿದ್ದೇವೆ. ಇನ್ನೂ ಸಾವಿರ ಬಂಡಿಗಳಷ್ಟು ಹೂಗಳಿವೆ. ಈಶ್ವರನಿಗೆ ಅರ್ಪಿಸಿದ ಹೂಗಳನ್ನು ಖಾಲಿಮಾಡುವುದರಲ್ಲಿ ಸಾಕುಸಾಕಾಗಿ ಹೋಗಿದೆ.

` ಅರ್ಜುನ ಉತ್ಸಾಹದಿಂದ ಕೇಳಿದ, `ಯಾರು ಇಷ್ಟು ಪ್ರಮಾಣದಲ್ಲಿ ಈಶ್ವರನಿಗೆ ಹೂ ಅರ್ಪಿಸಿದವರು?` ಸೇವಕ ಹೇಳಿದ, `ಮತ್ತಾರು ಸ್ವಾಮಿ, ಅವನೇ ಭೀಮಸೇನ. ದಿನಾಲು ಅವನು ಅರ್ಪಿಸಿದ ಹೂಗಳನ್ನು ತೆಗೆಯುವುದೇ ಕಷ್ಟ.` ಅರ್ಜುನನಿಗೆ ಆಶ್ಚರ್ಯವಾಯಿತು. `ಇವು ಅರ್ಜುನ ಅರ್ಪಿಸಿದ ಹೂಗಳಿರಬೇಕು. ಭೀಮನೆಲ್ಲಿ ಹೂ ಅರ್ಪಿಸುತ್ತಾನೆ?` ಎಂದ.
 
ಅದಕ್ಕೆ ಸೇವಕ, `ಛೇ ಆ ಅಹಂಕಾರದ ಮುದ್ದೆ ಅರ್ಜುನನೆಲ್ಲಿ ಹೂ ಏರಿಸುತ್ತಾನೆ? ತೋರಿಕೆಗಾಗಿ ಪೂಜೆಯ ಆಡಂಬರ ಮಾಡುತ್ತಾನೆ. ಬಹಳವೆಂದರೆ ದಿನವೂ ಕೇವಲ ಒಂದೆರಡು ಹೂಗಳು ಇಲ್ಲಿಗೆ ಬಂದಿರಬಹುದು. ಆದರೆ ಅತ್ಯಂತ ಭಕ್ತಿಯಿಂದ ಭೀಮ ಕ್ಷಣಮಾತ್ರ ಮಾಡಿದ ಪೂಜೆಯಿಂದ ಬಂಡಿಗಟ್ಟಲೆ ಹೂಗಳು ಇಲ್ಲಿಗೆ ಈಶ್ವರನ ಪಾದಕ್ಕೆ ತಲುಪುತ್ತವೆ` ಎಂದ. ಕೃಷ್ಣ ಅರ್ಜುನನ ಮುಖ ನೋಡಿದ. ಅಹಂಕಾರ ಪೂರ್ತಿ ಇಳಿದುಹೋದದ್ದು ಕಾಣುತ್ತಿತ್ತು.

ಪೂಜೆ ಭಕ್ತ-ಭಗವಂತರ ನಡುವಿನ ಅತ್ಯಂತ ಪ್ರೀತಿಯ ಸಂಬಂಧ, ಸಂವಾದ. ಅದಕ್ಕೆ ಆಡಂಬರದ ಅವಶ್ಯಕತೆ ಇಲ್ಲ. ಆಡಂಬರ ಹೆಚ್ಚಾದಂತೆ ನಮ್ಮ ಅಹಂಕಾರದ ಮೆರವಣಿಗೆಯಾಗುತ್ತದೆ ಅಷ್ಟೇ. ಅದು ಭಕ್ತಿಯ ಪೂಜೆ ಆಗುವುದಿಲ್ಲ.

1 comment: