ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, July 28, 2011

ಸಂಯಮವುಳ್ಳ ಶಕ್ತಿ

ಅದೊಂದು ಕರಾಟೆ ತರಬೇತಿ ನೀಡುವ ಶಾಲೆ. ಆ ಶಾಲೆಯ ಮುಖ್ಯಗುರುಗಳು ಈ ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ತಮ್ಮ ಶಿಷ್ಯರಿಗೆಲ್ಲ ಆದರ್ಶಪ್ರಾಯರಾದವರು. ಅವರಿಗೆ ಕರಾಟೆಯ ಪಾಠ ಹೊಟ್ಟೆಪಾಡಿನ ಉದ್ಯೋಗವಾಗಿರಲಿಲ್ಲ, ತರುಣ, ತರುಣಿಯರ ಜೀವನವನ್ನು ಪರಿಷ್ಕಾರಗೊಳಿಸುವ ಒಂದು ಕ್ರಿಯೆಯಾಗಿತ್ತು.

ಹಲವಾರು ಮಕ್ಕಳು, ತರುಣರು ಇಲ್ಲಿ ಕರಾಟೆ ಕಲಿಯುತ್ತಿದ್ದರು. ಒಬ್ಬ ಹುಡುಗ ಈ ಗುರುಗಳ ಹತ್ತಿರ ತನ್ನ ಐದನೇ ವಯಸ್ಸಿನಿಂದ ಕರಾಟೆ ಕಲಿಯಲು ಬರುತ್ತಿದ್ದ. ಹದಿನೈದು ವರ್ಷಗಳ ನಿರಂತರ ಪರಿಶ್ರಮದ ಸಾಧನೆಯಿಂದ ಆತ ಅತ್ಯಂತ ಶ್ರೇಷ್ಠ ಕರಾಟೆ ಪಟುವಾಗಿ ಹೊಮ್ಮಿದ. ಅತ್ಯಂತ ಶ್ರೇಷ್ಠ ಕರಾಟೆ ಸಾಧನೆ ಮಾಡಿದವನಿಗೆ  ಬ್ಲ್ಯಾಕ್ ಬೆಲ್ಟ್  ಅಂದರೆ ಕಪ್ಪುಪಟ್ಟಿಯನ್ನು ನೀಡಲಾಗುತ್ತದೆ.

ಅದನ್ನು ವಿಶೇಷ ಸಮಾರಂಭದಲ್ಲಿ ನೀಡಲು ಆಯೋಜಿಸಲಾಗಿತ್ತು. ಅದು ಆ ತರುಣನ ಕರಾಟೆ ಜೀವನದ ಮರೆಯಲಾಗದ ಸಂದರ್ಭ. ಆತ ತುಂಬ ಖುಷಿಯಾಗಿದ್ದ. ಆ ದಿನವೂ ಬಂತು.

ಕಾರ್ಯಕ್ರಮವನ್ನು ನೋಡಲು ತುಂಬ ಜನ ಬಂದಿದ್ದರು. ಹುಡುಗ ಎದ್ದು ತನ್ನ ಕಪ್ಪು ಪಟ್ಟಿಯನ್ನು ಪಡೆಯಲು ಗುರುವಿನ ಪೀಠದತ್ತ ಸಾಗಿದ.

`ಕಪ್ಪುಪಟ್ಟಿ ಪಡೆಯುವ ಎ್ಲ್ಲಲ ಅರ್ಹತೆಯನ್ನು ನೀನು ಪಡೆದುಕೊಂಡಿರುವುದು ಸಂತೋಷ, ಆದರೆ ಅದನ್ನು ಪಡೆಯುವುದಕ್ಕೆ ಮುನ್ನ ಇನ್ನೊಂದು ಮಹತ್ವದ ಪರೀಕ್ಷೆಯಲ್ಲಿ ಉತ್ತಿರ್ಣನಾಗಬೇಕು`  ಎಂದರು ಗಂಭೀರವಾಗಿ ಗುರುಗಳು.

`ನಾನು ಸಿದ್ಧವಾಗಿದ್ದೇನೆ ಗುರುಗಳೇ`  ಎಂದ ಶಿಷ್ಯ. ಬಹುಶಃ ಮತ್ತೊಂದು ದೈಹಿಕ ಪರೀಕ್ಷೆ ಇದ್ದಿರಬೇಕು ಎಂದು ಭಾವಿಸಿದ.`ಈಗ ನಾನು ಕೇಳುವ ಬಹುಮುಖ್ಯವಾದ ಪ್ರಶ್ನೆಗೆ ನೀನು ಸರಿಯಾದ ಉತ್ತರ ನೀಡಬೇಕು. ಈ ಕಪ್ಪುಪಟ್ಟಿಯ (ಬ್ಲ್ಯಾಕ್ ಬೆಲ್ಟ್ )  ನಿಜವಾದ ಅರ್ಥವೇನು?`

`ಗುರುಗಳೇ ಬಂದು ರೀತಿಯಲ್ಲಿ ಇದು ಮಹಾನ್ ಪ್ರಯಾಣದ ಅಂತಿಮ ಹಂತ. ದೀರ್ಘ ಕಾಲದ ಪರಿಶ್ರಮದ ಕಲಿಕೆಗೆ ದೊರೆತ ಪಾರಿತೋಷಕ.`ಗುರುಗಳು ಕ್ಷಣಕಾಲ ಯಾವ ಮಾತೂ ಆಡದೇ ನಿಂತು ನಂತರ ನಿಧಾನವಾಗಿ ಹೇಳಿದರು, `ನೀನು ಇನ್ನೂ ಕಪ್ಪು ಪಟ್ಟಿಗೆ ಸಿದ್ಧನಾಗಿಲ್ಲ, ಇನ್ನೊಂದು ವರ್ಷ ಪ್ರಯತ್ನಮಾಡಿ ಮರುವರ್ಷ ಬಾ.`
ಒಂದು ವರ್ಷದ ನಂತರ ಮತ್ತೆ ತರುಣ ಮೊಣಕಾಲೂರಿ ಗುರುವಿನ ಮುಂದೆ ಕಪ್ಪು ಪಟ್ಟಿಗಾಗಿ ಕುಳಿತ.

`ಈಗ ಹೇಳು ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`  ಕೇಳಿದರು ಗುರುಗಳು.  `ಪರಿಶ್ರಮ ಸಾರ್ಥಕವಾದದ್ದರ ಸಂಕೇತ ಈ ಕಪ್ಪುಪಟ್ಟಿ` ಎಂದು ನುಡಿದ ಶಿಷ್ಯ.
ಗುರು ಮತ್ತೆ ಕ್ಷಣಕಾಲ ಸುಮ್ಮನಿದ್ದು ತಲೆ ಅಲ್ಲಾಡಿಸಿ ಅಸಮ್ಮತಿ ವ್ಯಕ್ತಪಡಿಸಿ,  `ಮಗೂ, ನೀನು ಇನ್ನೊಂದು ವರ್ಷ ಸಾಧನೆ ಮುನ್ನಡೆಸಿ ಬಾ` ಎಂದು ನಡೆದುಬಿಟ್ಟರು.

ಮುಂದಿನ ವರ್ಷ ಅದೇ ದಿನ ಗುರುಗಳು ಮತ್ತೆ ಅದೇ ಪ್ರಶ್ನೆ ಕೇಳಿದರು.  `ಈ ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`ಈ ಬಾರಿ ಹುಡುಗ ನಿಧಾನವಾಗಿ ಹೇಳಿದ,  `ಗುರುಗಳೇ ಈ ಕಪ್ಪುಪಟ್ಟಿ ಸಾಧನೆಯ ಅಂತ್ಯವಲ್ಲ, ಪ್ರಾರಂಭ.

ಸದಾ ಉನ್ನತದ ಸಾಧನೆಯೆಡೆಗೆ ತುಡಿಯುವ, ಎಂದಿಗೂ ಮುಗಿಯದ ಸಾಧನೆಯ ಪ್ರಯಾಣದ ಪ್ರಾರಂಭದ ಸಂಕೇತ. ಇದು ಅಸಾಮಾನ್ಯ ಶಕ್ತಿಯ ದ್ಯೋತಕವಲ್ಲ, ಶಕ್ತಿಯಿದ್ದೂ ಅದನ್ನು ದುರ್ಬಳಕೆ ಮಾಡದಿರುವ ಸಂಯಮದ ಸಂಕೇತ.`
ಗುರುಗಳು ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಸಿ,  `ಈಗ ನೀನು ಕಪ್ಪುಪಟ್ಟಿಗೆ ಅರ್ಹನಾಗಿದ್ದೀಯಾ` ಎಂದು ಅವನನ್ನು ಅಪ್ಪಿಕೊಂಡು ಕಪ್ಪುಪಟ್ಟಿ ನೀಡಿದರು.

ರಾಕ್ಷಸರ ಹಾಗೆ ವಿಪರೀತ ಶಕ್ತಿ ಪಡೆಯುವುದು ದೊಡ್ಡದಲ್ಲ, ಭಾರೀ ಶಕ್ತಿ ಇದ್ದೂ ಅದನ್ನು ರಾಕ್ಷಸರ ಹಾಗೆ ಬಳಸದಿರುವುದು ಬಹುದೊಡ್ಡ ಶಕ್ತಿ. ಅದೇ ಸಂಯಮ.ಸಂಯಮವಿಲ್ಲದ ಶಕ್ತಿ ಘಾತಕವಾದದ್ದು. ಅದಕ್ಕೇ ಕವಿ ಹೇಳಿದ್ದು,  ವೈರಾಗ್ಯ, ಕಾರುಣ್ಯ ಮೇಳನವೇ ಧೀರತನ . ಕರುಣೆ, ಮತ್ತು ವೈರಾಗ್ಯವಿಲ್ಲದ ಶಕ್ತಿ ಅಪಾಯಕಾರಿಯಾದದ್ದು.

ಶಕ್ತಿ ಇದ್ದೂ ಅದನ್ನು ವೈರಾಗ್ಯದಿಂದ, ಕರುಣೆಯಿಂದ ಕಾಣುವ ಶಕ್ತಿಯೇ ಧೀರತನ, ಅದರಿಂದಲೇ ಜಗತ್ತಿನ ಬೆಳವಣಿಗೆ, ರಕ್ಷಣೆ ಸಾಧ್ಯವಾಗುತ್ತದೆ.

Krupe Prajavani  06 July 2011

No comments:

Post a Comment