ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, July 24, 2011

ವಿಚಿತ್ರ ತೀರ್ಮಾನ

ಅವನೊಬ್ಬ ಹತ್ತಿಯ ವ್ಯಾಪಾರಿ. ತಾನು ರೈತರಿಂದ ಹತ್ತಿಯನ್ನು ಕೊಂಡು, ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿ ದಿಂಡುಗಳನ್ನು ಮಾಡಿ ಪಟ್ಟಣಕ್ಕೆ ಒಯ್ದು ಹೆಚ್ಚಿನ ಹಣಕ್ಕೆ ಮಾರಿ ಬರುತ್ತಿದ್ದ. ಅವನ ಜೀವನ ಸುಖವಾಗಿ ಸಾಗುತ್ತಿತ್ತು.

ಒಂದು ದಿನ ಹೀಗೆ ಐವತ್ತು ಹತ್ತಿಯ ದಿಂಡುಗಳನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಊಟಕ್ಕೆಂದು ಮರದ ಕೆಳಗೆ ಕುಳಿತ. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ. ಆ ಮರದ ಕೆಳಗೆ ಒಂದು ಸುಂದರವಾದ ಬುದ್ಧನ ವಿಗ್ರಹ. ಅದರ ಮುಂದೆಯೇ ಮಲಗಿದ. ಎಚ್ಚರವಾದ ಮೇಲೆ ನೋಡುತ್ತಾನೆ,

ತನ್ನ ಬಂಡಿ ಪೂರ್ತಿ ಖಾಲಿಯಾಗಿದೆ. ಎಲ್ಲ ಹತ್ತಿಯ ದಿಂಡುಗಳನ್ನು ಯಾರೋ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ! ಯಾರನ್ನಾದರೂ ಕೇಳೋಣವೆಂದರೆ ಬುದ್ಧನ ವಿಗ್ರಹದ ಹೊರತು ಯಾರೂ ಅಲ್ಲಿ ಇಲ್ಲ. ಅವನು ತಕ್ಷಣವೇ ಹೋಗಿ ನ್ಯಾಯಾಧಿಕಾರಿಗೆ ದೂರು ಒಪ್ಪಿಸಿದ.

ಆ ನ್ಯಾಯಾಧೀಶ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡು ಒಂದು ತೀರ್ಮಾನಕ್ಕೆ ಬಂದ. ಆ ಹತ್ತಿಯ ದಿಂಡುಗಳನ್ನು ಬುದ್ಧನ ವಿನಾ ಇನ್ನಾರೂ ಕದ್ದಿರುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದ್ದರಿಂದ ಬುದ್ಧನನ್ನು ನ್ಯಾಯಾಲಯಕ್ಕೆ ಕರೆತರುವಂತೆ ಅಪ್ಪಣೆ ಮಾಡಿದ. ಅಧಿಕಾರಿಗಳು ಕಷ್ಟಪಟ್ಟು ವಿಗ್ರಹವನ್ನು ಹೊತ್ತು ತಂದರು.

ನ್ಯಾಯಾಲಯದಲ್ಲಿ ಜನಸಂದಣಿ. ಇದೆಂಥ ವಿಚಾರಣೆ? ಬುದ್ಧನ ವಿಗ್ರಹ ಹತ್ತಿಯ ದಿಂಡುಗಳನ್ನು ಕಳವು ಮಾಡುವುದುಂಟೇ? ಒಂದು ವೇಳೆ ಬುದ್ಧನೇ ಕಳವು ಮಾಡಿದ್ದು ನಿಜವೆಂದು ತೀರ್ಮಾನವಾದರೆ ದಿಂಡುಗಳನ್ನು ವ್ಯಾಪಾರಿಗೆ ಯಾರು ಕೊಡುವವರು?

ನ್ಯಾಯಾಧೀಶ ಗಂಭೀರವಾಗಿ ಬಂದು ತನ್ನ ಆಸನದಲ್ಲಿ ಕುಳಿತ. ಎಲ್ಲರೂ ಕುತೂಹಲದಿಂದ ಕಲಾಪವನ್ನು ಗಮನಿಸುತ್ತಿದ್ದರು. ನ್ಯಾಯಾಧೀಶ ವ್ಯಾಪಾರಿಗೆ ಮತ್ತೊಮ್ಮೆ ತನ್ನ ತಕರಾರನ್ನು ವಿವರಿಸಲು ಹೇಳಿದ. ಆತ ಚಾಚೂ ತಪ್ಪದಂತೆ ಎಲ್ಲವನ್ನೂ ವಿವರಿಸಿ. ತನ್ನ ಕಳವಾದ ಮಾಲನ್ನು ಹೇಗಾದರೂ ಹುಡುಕಿಕೊಡುವಂತೆ ಬೇಡಿಕೊಂಡ. ನ್ಯಾಯಾಧೀಶ ಅದೇ ಗಂಭೀರತೆಯಿಂದ ನ್ಯಾಯಾಲಯದಲ್ಲಿ ಇಡಲಾಗಿದ್ದ ಬುದ್ಧನ ವಿಗ್ರಹಕ್ಕೆ ಕೇಳಿದ,  `ಈ ತಕರಾರಿನ ಬಗ್ಗೆ ನಿನಗೇನಾದರೂ ಹೇಳುವುದು ಇದೆಯೇ?`  ಜನರೆಲ್ಲ ಗೊಳ್ಳೆಂದು ನಕ್ಕರು. ವಿಗ್ರಹ ಮಾತನಾಡುವುದುಂಟೇ? ನ್ಯಾಯಾಧೀಶ ಮೇಜು ಕುಟ್ಟಿ ಹೇಳಿದ,  `ಸದ್ದು, ನ್ಯಾಯಾಲಯದಲ್ಲಿ ಈ ರೀತಿಯ ಗಲಾಟೆ ಆಗಕೂಡದು`.  ಜನ ಸ್ತಬ್ಧರಾದರು.

ಮತ್ತೆ ನ್ಯಾಯಾಧೀಶ ಬುದ್ಧನ ವಿಗ್ರಹದ ಕಡೆಗೆ ನೋಡಿ ಹೇಳಿದ,  `ನಿನಗೆ ಹೇಳುವುದು ಏನೂ ಇಲ್ಲದಿದ್ದರೆ ನಾನು ತೀರ್ಪು ನೀಡಬೇಕಾಗುತ್ತದೆ ಮತ್ತು ನಾನು ನೀಡುವ ತೀರ್ಪಿಗೆ ನೀನು ಬದ್ಧನಾಗಬೇಕಾಗುತ್ತದೆ.` ವಿಗ್ರಹ ಏನು ಹೇಳೀತು?

ನಿಧಾನವಾಗಿ ನ್ಯಾಯಾಧೀಶ ತೀರ್ಪು ಕೊಟ್ಟ.  `ಅಪರಾಧಿ ಬುದ್ಧನೇ. ಅವನೇ ಹತ್ತಿಯ ದಿಂಡುಗಳನ್ನು ಕದ್ದು ಬೇರೆಯವರಿಗೆ ಮಾರಿದ್ದಾನೆ. ಯಾಕೆಂದರೆ ಅಪರಾಧ ನಡೆದಾಗ ಅವನ ವಿನಾ ಮತ್ತಾರೂ ಇರಲೇ ಇಲ್ಲ. ಆದ್ದರಿಂದ ಮೂರು ದಿನದ ಒಳಗಾಗಿ ಆತ ಕದ್ದ ಮಾಲನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು.` ಜನಕ್ಕೆ ನಗು ತಡೆಯಲಾಗಲಿಲ್ಲ. ಈ ನ್ಯಾಯಾಧೀಶನ ಮೂರ್ಖತನಕ್ಕೆ ಅವರು ಕೈ ತಟ್ಟಿ ಜೋರಾಗಿ ನಕ್ಕರು.

ನ್ಯಾಯಾಲಯ ಗದ್ದಲಮಯವಾಯಿತು. ತಕ್ಷಣ ನ್ಯಾಯಾಧೀಶ ಹೇಳಿದ,  `ನಾನು ಆಗಲೇ ನಿಮಗೆ ತಾಕೀತು ಮಾಡಿದ್ದೆ, ನ್ಯಾಯಾಲಯದ ಗೌರವಕ್ಕೆ ಕುಂದುಬರದ ಹಾಗೆ ನಡೆದುಕೊಳ್ಳಬೇಕು ಎಂದು. ನೀವು ಅದಕ್ಕೆ ಭಂಗ ತಂದಿದ್ದೀರಿ. ಆದ್ದರಿಂದ ನಿಮಗೆಲ್ಲ ಶಿಕ್ಷೆ ನೀಡಲೇಬೇಕು. ಅಧಿಕಾರಿಗಳು ಇಲ್ಲಿರುವ ಎಲ್ಲರ ಹೆಸರು, ವಿಳಾಸಗಳನ್ನು ಬರೆದುಕೊಳ್ಳಬೇಕು. ಮತ್ತು ಪ್ರತಿಯೊಬ್ಬರೂ ಇನ್ನು ನಾಲ್ಕು ತಾಸಿನಲ್ಲಿ ಮೂರು ಮೂರು ಹತ್ತಿಯ ದಿಂಡುಗಳನ್ನು ದಂಡವಾಗಿ ತಂದು ನ್ಯಾಯಾಲಯಕ್ಕೆ ಒಪ್ಪಿಸಬೇಕು.`

ಅನಿವಾರ್ಯವಾಗಿ ಎಲ್ಲರೂ ಮೂರು ದಿಂಡುಗಳನ್ನು ತಂದಿಟ್ಟರು. ಮೂಟೆಗಳನ್ನು ಕಳೆದುಕೊಂಡ ವ್ಯಾಪಾರಿ ಈ ರಾಶಿಗಳೊಳಗೆ ತನ್ನ ದಿಂಡುಗಳನ್ನು ಗುರುತಿಸಿದ. ಯಾಕೆಂದರೆ ಅವನು ತನ್ನ ದಿಂಡುಗಳ ಮೇಲೆ ನೀಲಿ ಬಣ್ಣದ ಗುರುತು ಮಾಡಿದ್ದ. ನ್ಯಾಯಾಧೀಶನ ಬುದ್ಧಿವಂತಿಕೆಯಿಂದ ನಿಜವಾದ ಕಳ್ಳರು ಸಿಕ್ಕಿಬಿದ್ದರು.

ಕೆಲವೊಂದು ಬಾರಿ ಕೆಲವು ವಿಚಾರಗಳು ಮೇಲ್ನೋಟಕ್ಕೆ ವಿಚಿತ್ರ, ಅಸಂಬದ್ಧ ಎನ್ನಿಸಿದರೂ ಆಳದಲ್ಲಿ ನೋಡಿದಾಗ ಚಿಂತನೆ ಕಂಡುಬರುತ್ತದೆ. ಆದ್ದರಿಂದ ಯಾವುದೇ ಚಿಂತನೆ, ನಮ್ಮ ಮನಸ್ಸಿಗೆ ಸರಿ ತೋರಲಿಲ್ಲವೆಂದಾಗ ಅದನ್ನು ಅಪ್ರಸ್ತುತ, ಅಪ್ರಯೋಜಕ ಎಂದು ತಳ್ಳಿಹಾಕುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.  22- July 11

No comments:

Post a Comment