ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, July 22, 2011

ನಂಬಿಕೆಯೇ ದೇವರು

ರಾಜೀವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನಿಗೆ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೈದರ ಹುಡುಗನ ಹಾಗೆ ಸಂತೋಷವಾಗಿ ಚಟುವಟಿಕೆಯಿಂದ ಕೆಲಸಮಾಡಿಕೊಂಡಿದ್ದ. ಒಂದು ದಿನ ತುಂಬ ತಲೆನೋವು ಕಾಣಿಸಿಕೊಂಡಿತು.

ಯಾವುದೋ ಮಾತ್ರೆ ತೆಗೆದುಕೊಂಡ. ತಾತ್ಪೂರ್ತಿಕವಾಗಿ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುಕಳಿಸಿತು. ಮರುದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಎಡಕಣ್ಣಲ್ಲಿ ಒಂದು ಕೆಂಪು ಚುಕ್ಕಿ ಕಂಡಂತಾಯಿತು. ಸಂಜೆಯ ಹೊತ್ತಿಗೆ ಅದು ಕಣ್ಣು ತುಂಬೆಲ್ಲ ಹರಡಿಕೊಂಡು ಕಣ್ಣೇ ಕಾಣದಂತಾಯಿತು. ಮರುದಿನವೇ ವೈದ್ಯರ ಕಡೆಗೆ ಹೋದ.

ಹತ್ತಾರು ಪರೀಕ್ಷೆಗಳನ್ನು ನಡೆಸಿ ರಾಜೀವನ ಎಡಕಣ್ಣಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ತಡೆಯುಂಟಾಗಿದ್ದು ಆ ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿದೆ ಎಂತಲೂ ಅದನ್ನು ಸರಿಮಾಡುವುದು ಸಾಧ್ಯವಿಲ್ಲವೆಂದೂ ವೈದ್ಯರು ತಿಳಿಸಿದರು. ಇದು ಏಕೆ ಆಯಿತು ಎಂಬುದು ತಿಳಿಯದಾಗಿದೆ ಎಂದರು. ಈ ಆಘಾತವೇ ಸಾಕಾಗಿತ್ತು.

ಮಾರನೆಯ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ತಲೆಗೆ ಸುತ್ತುಬಂದಂತಾಗಿ ರಾಜೀವ ಕುಸಿದುಬಿದ್ದ. ಮತ್ತೆ ಅವನನ್ನು ಆಸ್ಪತ್ರೆಗೆ ಸೇರಿಸಿದರು.

ಈ ಬಾರಿ ಹೃದಯತಜ್ಞರು ಪರೀಕ್ಷೆಗಳನ್ನು ನಡೆಸಿದರು. ಅವರ ತೀರ್ಮಾನ ಇನ್ನೂ ಭಯಂಕರವಾಗಿತ್ತು. ಇದೊಂದು ಅತ್ಯಂತ ಅಪರೂಪದ ರೋಗ ತಾಕಾಯಾಸಸ್ ಆರ್ಟಿರಿಟಿಸ್ ರೋಗವಂತೆ. ಇದರಿಂದ ರಕ್ತನಾಳಗಳಲ್ಲಿ ಉರಿ, ಊತ, ಉಂಟಾಗುತ್ತ ಅವು ಸಣ್ಣದಾಗುತ್ತ ಹೋಗುತ್ತವಂತೆ. ತಕ್ಷಣವೇ ಆಪರೇಷನ್ ಮಾಡದೇ ಹೋದರೆ ಬದುಕುವುದು ದುಸ್ತರ.

ನಾಲ್ಕು ದಿನಗಳ ಹಿಂದೆಯೇ ಆರೋಗ್ಯವಾಗಿದ್ದ ರಾಜೀವನಿಗೆ ಸಿಡಿಲು ಬಡಿದಂತಾಯಿತು. ನಾಲ್ಕೇ ದಿನಗಳಲ್ಲಿ ಅದೆಷ್ಟು ಬದಲಾವಣೆ? ರಾಜೀವ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ. ಮತ್ತೊಬ್ಬರಿಗೆ ಈ ಪರಿಯ ತೊಂದರೆ ಬಂದರೆ ಯಾವ ಚಿಂತೆ ಮಾಡಬೇಡಿ ಎಲ್ಲ ಸರಿಹೋಗುತ್ತದೆ ಎಂದು ಹೇಳುವುದು ಬಹಳ ಸುಲಭ. ಆ ಪರಿಸ್ಥಿತಿ ತಮಗೇ ಬಂದಾಗ ಯಾವ ಹೊರಗಿನ ಸಮಾಧಾನ ಧೈರ್ಯವನ್ನು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಸೇರಿಕೊಂಡ ರಾಜೀವ ದಿನದಿನಕ್ಕೆ ಹತಾಶನಾಗುತ್ತಿದ್ದ. ತನ್ನ ನಂತರ ಹೆಂಡತಿ ಹಾಗೂ ಸಣ್ಣ ವಯಸ್ಸಿನ ಮಗನ ಜೀವನ ನಡೆಯುವ ಬಗೆ ಹೇಗೆ ಎಂದು ಚಿಂತಿಸತೊಡಗಿದ. ಅವನ ಪರಿವಾರದವರೂ ಎದೆ ಒಡೆದುಕೊಂಡಿದ್ದರು.

ಆಸ್ಪತ್ರೆಯಲ್ಲಿ ಅವನನ್ನು ಕಾಣಲು ಸ್ನೇಹಿತರು ಬರುತ್ತಿದ್ದರು. ಕೆಲವರು ಶುಭಸಂದೇಶದ ಪತ್ರಗಳನ್ನು ಕೊಟ್ಟು ಹೋಗುತ್ತಿದ್ದರು. ರಾಜೀವನನ್ನು ತಪಾಸಿಸಲು ಬಂದ ಆಸ್ಪತ್ರೆಯ ವೈದ್ಯರೂ ಒಂದು ಶುಭಸಂದೇಶದ ಕಾರ್ಡನ್ನು ಕೊಟ್ಟು ಹೋದರು. ನಂತರ ರಾಜೀವ ಅದನ್ನು ಗಮನವಿಟ್ಟು ನೋಡಿದ. ಅದರ ಮುಖಪುಟದ ಮೇಲೆ ಸುಂದರವಾದ ಶ್ರೀ ಕೃಷ್ಣನ ಚಿತ್ರವಿದೆ. ಆದರೆ ಶ್ರೀ ಕೃಷ್ಣ ವೈದ್ಯರ ಹಾಗೆ ಗೌನು ಹಾಕಿಕೊಂಡಿದ್ದಾನೆ, ಕೊರಳಲ್ಲಿ ಸ್ಟೆಥಾಸ್ಕೋಪ್ ಇದೆ. ಚಿತ್ರದ ಮೇಲೊಂದು ಸುಂದರ ಬರಹ,  `ನಮ್ಮ ಮುಖ್ಯ ಶಸ್ತ್ರಚಿಕಿತ್ಸಕ.` ಅದನ್ನು ನೋಡಿ ರಾಜೀವನಿಗೆ ಏನೋ ಧೈರ್ಯ ಬಂದಂತಾಯಿತು. ತಾನು ಅತ್ಯಂತ ಸಮರ್ಥ ಶಸ್ತ್ರಚಿಕಿತ್ಸಕನ ಕೈಯಲ್ಲಿ ತನ್ನ ದೇಹವನ್ನು ಒಪ್ಪಿಸಿದ್ದೇನೆ ಎನ್ನಿಸಿತು. ಆಪರೇಷನ್ ಮಾಡುವ ವೈದ್ಯರ ಹೃದಯದಲ್ಲಿರುವ ಭಗವಂತ ತನ್ನನ್ನು ರಕ್ಷಿಸುತ್ತಾನೆ ಎಂಬ ಭಾವನೆ ಬಂತು. ಮನಸ್ಸು ನಿರಾಳವಾಯಿತು. ಹೆಂಡತಿ, ಸ್ನೇಹಿತರೊಂದಿಗೆ ನಗುನಗುತ್ತ ಹಿಂದಿನ ದಿನ ಕಳೆದ. ಮರುದಿನವೇ ಆಪರೇಷನ್ ಇದ್ದರೂ ಚೆನ್ನಾಗಿ ನಿದ್ರೆ ಮಾಡಿದ. ಮರುದಿನ ಆಪರೇಷನ್ ಥೇಟರಿಗೆ ಕರೆದುಕೊಂಡು ಹೋಗುವಾಗ ಹೆಂಡತಿಗೆ ಹೇಳಿದ, `ನನಗೇನಾಗುತ್ತದೆ ಎಂಬ ಚಿಂತೆಯಿಲ್ಲ. ಭಗವಂತನ ಕೈಯಲ್ಲಿ ಒಪ್ಪಿಸಿಕೊಂಡು ಬಿಟ್ಟಿದ್ದೇನೆ. ನೀನು ಭಯಪಡಬೇಡ.`

ಎಂಟು ತಾಸುಗಳ ಆಪರೇಷನ್ ನಡೆಯಿತು. ಅವನ ರಕ್ತನಾಳಗಳನ್ನೆಲ್ಲ ಸರಿಪಡಿಸಿದರು ವೈದ್ಯರು. ಮೂರು ದಿನಗಳ ದೀರ್ಘ ಮಂಪರಿನಿಂದ ಹೊರಬಂದ ರಾಜೀವ. ಅವನಿಗೆ ಪುನರ್ಜನ್ಮವಾಗಿತ್ತು. ಈಗಲೂ ಅವನ ಎಡಗಣ್ಣು ಕಾಣುವುದಿಲ್ಲ, ಮೊದಲಿನ ಹಾಗೆ ಹಾರಾಟ ಮಾಡುವಂತಿಲ್ಲ. ಆದರೂ ತನ್ನನ್ನು ನಿಭಾಯಿಸಿಕೊಂಡು ಬದುಕಿದ್ದಾನೆ. ಬದುಕಿನಲ್ಲಿ ಆಶಾವಾದ ಉಳಿಸಿಕೊಂಡಿದ್ದಾನೆ, ಉತ್ಸಾಹ ಬೆಳೆಸಿಕೊಂಡಿದ್ದಾನೆ. ಇದು ಪವಾಡವಲ್ಲ. ವೈದ್ಯರ ಪರಿಶ್ರಮ ಹಾಗೂ ವಿಜ್ಞಾನದ ಪ್ರಗತಿಯ ಸಾಧನೆ. ಇದರೊಂದಿಗೆ ಮನಸ್ಸಿಗೆ ಚೈತನ್ಯ ತಂದ ನಂಬಿಗೆಯ ಫಲ. ಯಾವುದೇ ನಂಬುಗೆ ಪವಾಡಸದೃಶ ಬದಲಾವಣೆಯನ್ನು ತರಬಲ್ಲದು.

ಬಾಳಿನ ಬುನಾದಿ ನಂಬಿಕೆ. ಈ ನಂಬಿಕೆ ವ್ಯಕ್ತಿಗಳ ಮೇಲೆ ಇರಬಹುದು, ಸಂಸ್ಥೆಗಳ ಮೇಲೆ, ದೇಶದ ಮೇಲೆ, ಮಾನವ ಸ್ವಭಾವಗಳ ಮೇಲೆ ಅಥವಾ ಭಗವಂತನ ಮೇಲಿರಬಹುದು. ನಮ್ಮ ನಂಬಿಕೆಯೇ ನಮ್ಮನ್ನು ದೇವರಾಗಿ ಕಾಪಾಡುತ್ತದೆ.

Krup: Prajavani   21 July 211

No comments:

Post a Comment