ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, April 10, 2011

ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ

('ತೆರೆದ ಮನ' ಪುಸ್ತಕದಿಂದ)
ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು.
ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ.
೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ' ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ.
ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.
ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ, ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ. ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ. ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ ಮನಸ್ಸು.
ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ ಸಾಧನೆ.

No comments:

Post a Comment