ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, April 22, 2011

ಬಸವಣ್ಣನ ವಚನಗಳು - 101 - 200

೧೦೧.
ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.
೧೦೨.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.
೧೦೩.
ಹೊತ್ತಾರೆಯೆದ್ದು ಶಿವಲಿಂಗದೇವನ
ದೃಷ್ಟಿಯಾರೆ ನೋಡದವನ ಸಂಸಾರವೇನವನ ?!
ಬಾಳುವೆಣನ ಬೀಳುವೆಣನ ಸಂಸಾರವೇನವನ ?!
ನಡೆವೆಣನ ನುಡಿವೆಣನ ಸಂಸಾರವೇನವನ ?!
ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ
ಸಂಸಾರವೇನವನ ?!
೧೦೪.
ವ್ಯಾಧನೊಂದು ಮೊಲನ ತಂದರೆ
ಸಲುವ ಹಾಗಕ್ಕೆ ಬಿಲಿವರಯ್ಯ.
ನೆಲನಾಳ್ದನ ಹೆಣನೆಂದರೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ.
ಮೊಲನಿಂದ ಕರಕಷ್ಟ ನರನ ಬಾಳುವೆ!
ಸಲೆ ನಂಬೋ ನಮ್ಮ ಕೂಡಲಸಂಗಮದೇವನ.
೧೦೫.
ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ?
ಅಂತು ಬಲಿದ ಸಪ್ತಧಾತುವಿನ
ನರಕದೇಹದೊಳಿಪ್ಪ ಹೇಸಿಕೆ ಸಾಲದೆ ?
ಮತ್ತೆಯು ಪಾಪಂಗಳ ಮಾಡಿ
ದುರಿತಂಗಳ ಹೆರುವ ಹೇಗತನವೇಕಯ್ಯ ?
ಕಾಲನ ಕೈಯ ಬಡಿಸಿಕೊಂಡು
ನರಕವನುಂಬುದು ವಿಧಿಯೇ, ಎಲೆ ಮನುಜ ?
ಒತ್ತೊತ್ತೆಯ ಜನನವ ಗೆಲುವಡೆ
ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ!
೧೦೬.
ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.
೧೦೭.
ನರೆ ಕೆನ್ನೆಗೆ, ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ;
ಹಲ್ಲು ಹೋಗಿ, ಬೆನ್ನು ಬಾಗಿ
ಆನ್ಯರಿಗೆ ಹಂಗಾಗದ ಮುನ್ನ;
ಕಾಲ ಮೇಲೆ ಕೈಯನೂರಿ
ಕೋಲ ಹಿಡಿಯದ ಮುನ್ನ;
ಮುಪ್ಪಿಂದೊಪ್ಪವಳಿಯದ ಮುನ್ನ;
ಮೃತ್ಯು ಮುಟ್ಟದ ಮುನ್ನ
ಪೂಜಿಸುವೋ ಕೂಡಲಸಂಗಮದೇವನ.
೧೦೮.
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ!
೧೦೯.
ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ!
ಮಾಯಾಮಂಜರ ಕೊಲುವಡೆ, ನಿನ್ನ ಹಂಜರ ಕಾವುದೇ
ಕೂಡಲಸಂಗಮದೇವನಲ್ಲದೆ ?
೧೧೦.
ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.
೧೧೧.
ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ-ಬೆಳುದಿಂಗಳು-ಸಿರಿ ಸ್ಥಿರವಲ್ಲ!
ಕೇಡಿಲ್ಲದ ಪದವಿಯನೀವ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.
೧೧೨.
ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣವೋ!
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣವೋ!
ಮರಳಿ ಭವಕ್ಕೆ ಬಹೆ ಬಾರದಿಹೆ!
ಕರ್ತೃ ಕೂಡಲಸಂಗಂಗೆ ಶರಣೆನ್ನವೋ!
೧೧೩.
ಶಕುನವೆಂದೆಂಬೆ ಅಪಶಕುನವೆಂದೆಂಬೆ,
ನಿಮ್ಮವರು ಅಳಲಿಕಂದೇಕೆ ಬಂದೆ ?
ನಿಮ್ಮವರು ಅಳಲಿಕಿಂದೇಕೆ ಹೋದೆ ?
ನೀ ಹೋಹಾಗಳಕ್ಕೆ!
ನೀ ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.
೧೧೪.
ನಿಮಿಷಂ ನಿಮಿಷಂ ಭೋ!
ಕ್ಷಣದೊಳಗರ್ಧಂ ಭೋ!
ಕಣ್ಣ ಮುಚ್ಚಿ ಬಿಚ್ಚುವಿನಿಸು ಬೇಗಂ ಭೋ
ಸಂಸಾರದಾಗುಂ ಭೋ!
ಸಂಸಾರದ ಹೋಗುಂ ಭೋ!
ಸಂಸಾರದೊಪ್ಪಂ ಭೊ!
ಕೂಡಲಸಂಗಮದೇವ ಮಾಡಿದ
ಮಾಯಂ ಭೋ!
ಅಭ್ರಚ್ಛಾಯಂ ಭೋ!
೧೧೫.
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು-
ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯ;
ನೆರೆಯದ ವಸ್ತು ನೆರೆವುದು ನೋಡಯ್ಯ;
ಅರಸು ಪರಿವಾರ ಕೈವಾರ ನೋಡಯ್ಯ.
ಪರಮನಿರಂಜನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ.
೧೧೬.
ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು!
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು!
ಪುಣ್ಯಗಳಹ ಕಾಲಕ್ಕೆ ಹಾವು ನೇವಳವಹುದು!
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು!
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಲಹುದು!
ಭಕ್ತಿ ಕೆಟ್ಟರೆ ಪುಣ್ಯವೂ ಕೆಡುವುದು!
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯ ಕೂಡಲಸಂಗಮದೇವ .
೧೧೭.
ಹೊಯ್ದರೆ ಹೊಯ್ಗಳು ಕೈಯ ಮೇಲೆ,
ಬೈದರೆ ಬೈಗಳು ಕೈಯ ಮೇಲೆ,
ಹಿಂದಣ ಜನನವೇನಾದರಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯ,
ನಿನ್ನ ಪೂಜಿಸಿದ ಫಲ ಕೈಯ್ಯ ಮೇಲೆ!
೧೧೮.
ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಂಗೆ.
೧೧೯.
ಅಚ್ಚಿಗವೇಕಯ್ಯ ? ಸಂಸಾರದೊಳಗಿರ್ದು
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು.
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು!
ಬೇಗ ಬೇಗ ಕೂಡಲಸಂಗನ ಕೂಡುವುದು!
೧೨೦.
ಅಂದು ಇಂದು ಮತ್ತೊಂದೆನಬೇಡ.
ದಿನವಿಂದೇ ಶಿವಶರಣೆಂಬವಂಗೆ,
ದಿನವಿಂದೇ ಹರಶರಣೆಂಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
೧೨೧.
ಸುಪ್ರಭಾತ ಸಮಯದಲ್ಲಿ
ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ!
ದೇವಪೂಜೆಯ ಮಾಟ
ದುರಿತಬಂಧನದೋಟ!
ಶಂಭು ನಿಮ್ಮಯ ನೋಟ
ಹೆರೆಹಿಂಗದ ಕಣ್ಬೇಟ!!
ಸದಾ ಶಿವಲಿಂಗಸನ್ನಿಹಿತನಾಗಿಪ್ಪುದು,
ಶರಣೆಂದು ನಂಬುವುದು.
ಜಂಗಮಾರ್ಚನೆಯ ಮಾಟ
ಕೂಡಲಸಂಗನ ಕೂಟ!!!
೧೨೨.
ನಾದಪ್ರಿಯ ಶಿವನೆಂಬರು,
ನಾದಪ್ರಿಯ ಶಿವನಲ್ಲಯ್ಯ!
ವೇದಪ್ರಿಯಶಿವನೆಂಬರು
ವೇದಪ್ರಿಯ ಶಿವನಲ್ಲಯ್ಯ!
ನಾದವ ಮಾಡಿದ ರಾವಣಂಗೆ
ಆರೆಯಾಯುಷವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ,
ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
೧೨೩.
ತನ್ನಾಶ್ರಯದ ರತಿಸುಖವನು
ತಾನುಂಬ ಊಟವನು
ಬೇರೊಬ್ಬರ ಕೈಯಲು ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ
ನಿತ್ಯ ನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲು ಮಾಡಿಸಬಹುದೇ ?
ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ.
೧೨೪.
ಬಂಡಿ ತುಂಬಿದ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ.
ತಾಪತ್ರಯವ ಕಳೆದು ಪೂಜಿಸಿ:
ತಾಪತ್ರಯವ ಲಿಂಗನೊಲ್ಲ!
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ ?
೧೨೫.
ಕನ್ನಡಿಯ ನೋಡುವ ಅಣ್ಣಗಳಾ,
ಜಂಗಮವ ನೋಡಿರೇ!
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
ಸ್ಥಾವರ ಜಂಗಮ ಒಂದೆಂದುದು ಕೂಡಲಸಂಗನ ವಚನ.
೧೨೬.
ಗೀತವ ಹಾಡಿದರೇನು,
ಶಾಸ್ತ್ರ ಪುರಾಣವ ಕೇಳಿದರೇನು,
ವೇದವೇದಾಂತವನೋದಿದರೇನು,
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ?
ಇವೆಲ್ಲರಲ್ಲಿಯೂ ಅನುಭಾವಿಯಾದರೇನು,
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
೧೨೭.
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
ದಕ್ಕ ನುಂಗಿದಂತೆ ಬೆರೆದುಕೊಂಡಿರಬೇಡ.
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.
೧೨೮.
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯ
ನಮ್ಮ ಶರಣರಿಗೆ ಉರಿಗರಗಾಗಿ ಕರಗದನ್ನಕ ?
ಸ್ಥಾವರ ಜಂಗಮ ಒಂದೆಂದು ನಂಬದನ್ನಕ ?
ಕೂಡಲಸಂಗಮದೇವ,
ಬರಿಯ ಮಾತಿನ ಮಾಲೆಯಲೇನಹುದು ?
೧೨೯.
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ-
ಅದು ಬೇಡದು, ಬೆಸಗೊಳ್ಳದು !
ತಂದೊಮ್ಮೆ ನೀಡಬಹುದು !
ಕಾಡುವ ಬೇಡುವ ಜಂಗಮ ಬಂದರೆ
ನೀಡಲು ಬಾರದು ಕೂಡಲಸಂಗಮದೇವ.
೧೩೦.
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!
೧೩೧.
ಎರೆದರೆ ನೆನೆಯದು, ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ನೋಡಯ್ಯ, ಕೂಡಲಸಂಗಮದೇವಯ್ಯ,
"ಜಂಗಮ"ಕ್ಕೆರೆದರೆ, "ಸ್ಥಾವರ" ನೆನೆಯಿತ್ತು.
೧೩೨.
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ;
ಭೂಮಿಯಧಾರದಲ್ಲಿ ವೃಕ್ಷ ನೀರುಂಬುದಯ್ಯ.
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿಯಹುದಯ್ಯ
"ವೃಕ್ಷಸ್ಯ ವದನಂ ಭೂಮಿಃ
ಸ್ಥಾವರಸ್ಯ ತು ಜಂಗಮಃ!
ಅಹಂ ತುಷ್ಟಿರುಮೇ ದೇವ್ಯು-
ಭಯೋರ್ಜಂಗಮಲಿಂಗಯೋಃ ||"
ಇದು ಕಾರಣ ಕೂಡಲಸಂಗನ ಶರಣರಲ್ಲಿ
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ.
೧೩೩.
ಬಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೊಗಬಾರದು.
ಕಳ್ಳನಾಣ್ಯ ಸಲಿಕೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯ.
ಭಕ್ತಿಯೆಂಬ ಬಂಡಕ್ಕೆ ಜಂಗಮವೇ ಸುಂಕಿಗ
ಕೊಡಲಸಂಗಮದೇವ.
೧೩೪.
ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು
ನೀವೆಲ್ಲ ಕೇಳಿರಣ್ಣ;
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ,
ನಮಸ್ಕಾರವ ಮಾಡುವನಂತೆ,
ತನ್ನ ಕೆರಹಿನ ಧ್ಯಾನವಲ್ಲದೆ,
ದೇವರ ಧ್ಯಾನವಿಲ್ಲ;
ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು!
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.
೧೩೫.
ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ!
ಉಂಡುದೇನಾಯಿತೆಂಬುದ ನಿನ್ನ ನೀ ತಿಳಿದು ನೋಡಾ!
ಉಂಡುದಾಗಳೇ ಆ ಪೀಯವಾಯಿತ್ತು!
ಆ ಉಂಡುದನುಣಬಂದ ಹಂದಿಯ ಬಾಳುವೆಯವರ
ಕಂಡು ಆನು ಮರುಗುವೆನಯ್ಯ ಕೂಡಲಸಂಗಮದೇವ.
೧೩೬.
ಆಯುಷ್ಯವುಂಟು ಪ್ರಳಯವಿಲ್ಲೆಂದು,
ಅರ್ಥವ ಮಡಗುವಿರಿ:
ಆಯುಷ್ಯ ತೀರಿ ಪ್ರಳಯ ಬಂದರೆ
ಆ ಅರ್ಥವನುಂಬವರಿಲ್ಲ:
ನೆಲನನಗೆದು ಮಡಗದಿರಾ!
ನೆಲ ನುಂಗಿದರುಗುಳುವುದೇ ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ
ಉಣ್ಣದೆ ಹೋಗದಿರಾ;
ನಿನ್ನ ಮಡದಿಗಿರಲೆಂದರೆ--ಮಡದಿಯ ಕೃತಕ ಬೇರೆ!
ನಿನ್ನೊಡಲು ಕೆಡೆಯಲು
ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ.
ಕೂಡಲಸಂಗನ ಶರಣರಿಗೆ ಒಡನೆ ಸೆವೆಸುವುದು.
೧೩೭.
ಅವಳ ವಚನ ಬೆಲ್ಲದಂತೆ!
ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,
ವಚನದಲೊಬ್ಬನ ನೆರೆವಳು!
ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!
ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ.
೧೩೮.
ತನು-ಮನ-ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು
ನೀವೆಲ್ಲ ಕೇಳಿರೆ:
ತಲಹಿಲ್ಲದ ಕೋಲು ಪೊಳ್ಳುಹಾರುವುದಲ್ಲದೆ
ಗುರಿಯ ತಾಗಬಲ್ಲುದೆ ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ
ಕೂಡಲಸಂಗಮದೇವನೆಂತೊಲಿವನಯ್ಯ.
೧೩೯.
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಪೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ
ಉಂಡು ತಂಬುಲಗೊಂಡು ಹೋಹುದಲ್ಲ!
ತನು-ಮನ-ಧನವ ಸಮರ್ಪಿಸದವರ
ಕೂಡಲಸಂಗಮದೇವನೆಂತೊಲಿವ ?
೧೪೦.
ತನುವ ಕೊಟ್ಟು ಗುರುವನೊಲಿಸಲೆ ಬೇಕು.
ಮನವ ಕೊಟ್ಟು ಲಿಂಗವನೊಲಿಸಲೆ ಬೇಕು.
ಧನವ ಕೊಟ್ಟು ಜಂಗಮವನೊಲಿಸಲೆ ಬೇಕು.
ಈ ತ್ರಿವಿಧವ ಮರೆಸಿಕೊಂಡು,
ಹರೆಯ ಹೊಯಿಸಿ, ಕುರುಹ ಪೂಜಿಸುವ ಡಂಬಕರ ಮೆಚ್ಚ
ಕೂಡಲಸಂಗಮದೇವ.
೧೪೧.
ಆಡಿದರೇನೋ, ಹಾಡಿದರೇನೋ, ಓದಿದರೇನೋ-
ತ್ರಿವಿಧ ದಾಸೋಹವಿಲ್ಲದನ್ನಕ ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ!
೧೪೨.
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ,
ಗೀತ-ಮಾತಿನಂತುಟಲ್ಲ ಕೇಳಿರಯ್ಯ !
ಮಾತಿನ ಮಾತಿನ ಕೌಳುಗೋಲ ಶ್ರವದಲ್ಲಿ
ಸತ್ತವರೊಳರೇ ಅಯ್ಯ ?
ದಿಟದಲಗಿನ ಕಾಳೆಗವಿತ್ತಲಿದ್ದುದೇ
ಕೂಡಲಸಂಗನ ಶರಣರು ಬಂದಲ್ಲಿ !?
೧೪೩.
ಮಾತಿನ ಮಾತಿನಲಪ್ಪುದೇ ಭಕ್ತಿ ?
ಮಾಡಿ ತನು ಸವೆಯದನ್ನಕ,
ಧನ ಸವೆಯದನ್ನಕ,
ಮನ ಸವೆಯದನ್ನಕ,
ಅಪ್ಪುದೇ ಭಕ್ತಿ ?
ಕೂಡಲಸಂಗಮದೇವನೆಲುದೋರ ಸರಸವಾಡುವನು;
ಸೈರಿಸದನ್ನಕ ಅಪ್ಪುದೇ ಭಕ್ತಿ ?
೧೪೪.
ಹಾವಸೆಗಲ್ಲ ಮೆಟ್ಟಿ ಹರಿದು
ಗೊತ್ತ ಮುಟ್ಟ ಬಾರದಯ್ಯ.
ನುಡಿದಂತೆ ನಡೆಯಲು ಬಾರದಯ್ಯ.
ಕೂಡಲಸಂಗನ ಶರಣರ ಭಕ್ತಿ ಬಾಳ ಬಾಯಿಧಾರೆ.
೧೪೫.
ಭಕ್ತಿಯೆಂಬುದ ಮಾಡಬಾರದು.
ಗರಗಸದಂತೆ ಹೋಗುತ್ತ ಕೊರೆವುದು;
ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ?
ಕೂಡಲಸಂಗಮದೇವ.
೧೪೬.
ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ
ಸಲೆನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು!
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ
ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ
ತನ್ನ ಭಕ್ತಿ ತನ್ನನೇ ಕೆಡಿಸುವುದು ಕೂಡಲಸಂಗಮದೇವ!
೧೪೭.
ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ;
ತನುವನಲ್ಲಾಡಿಸಿ ನೋಡುವೆ ನೀನು!
ಮನವನಲ್ಲಾಡಿಸಿ ನೋಡುವೆ ನೀನು!
ಧನವನಲ್ಲಾಡಿಸಿ ನೋಡುವೆ ನೀನು!
ಇವೆಲ್ಲಕಂಜದಿದ್ದರೆ
ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ.
೧೪೮.
ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ!
ಬಣ್ಣವಿಟ್ಟು ನುಡಿದಲ್ಲಿ ಫಲವೇನು ಚಿನ್ನಗೆಯ್ಕನಾಡುವಂತೆ ?
ಬಂದ ಸಮಯೋಚಿತವನರಿತು
ಇದ್ದುದ ವಂಚಿಸದಿದ್ದರೆ
ಕೂಡಲಸಂಗಮದೇವನೊಲಿದು ಸಲಹುವ!
೧೪೯.
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಿಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!
೧೫೦.
ಉದಯದ ಮಾಗಿಯ ಬಿಸಿಲು
ಅಂಗಕ್ಕೆ ಹಿತವಾಯಿತ್ತು!
ಮಧ್ಯಾಹ್ನದ ಬಿಸಿಲು
ಅಂಗಕ್ಕೆ ಕರ ಕಠಿನವಾಯಿತ್ತು!
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು!
ಕಡೆಯಲ್ಲಿ ಜಂಗಮಭಕ್ತಿ ಕಠಿನವಾಯಿತ್ತು!
ಇದು ಕಾರಣ,
ಕೂಡಲಸಂಗಮದೇವನವರ
ಬಲ್ಲನಾಗಿ ಒಲ್ಲನಯ್ಯ.
೧೫೧.
ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣ!
ಮೊದಲ ದಿನ ಹಣೆ ಮುಟ್ಟಿ,
ಮರುದಿನ ಕೈ ಮುಟ್ಟಿ,
ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದರೆ ತಡಿಗೆ ಚಾಚುವ
ಅಲ್ಲದಿದ್ದರೆ ನಡುನೀರಲದ್ದುವ
ನಮ್ಮ ಕೂಡಲಸಂಗ್ದೇವ.
೧೫೨.
ಬೆಟ್ಟದ ಬಿದಿರೇ ನೀನು ಅಟ್ಟಕ್ಕೆ ಏಣಿಯಾದೆ!
ಕಾಲು ಮುರಿದವರಿಗೆ ಊರುಗೋಲಾದೆ!
ಬಿದಿರಿಂ ಭೋ! ಅಯ್ಯ, ಬಿದಿರಿಂ ಭೋ!
ಬಿದಿರ ಫಲವನುಂಬರೆ ಬಿದಿರಿಂ ಭೊ;
ಬಿದಿರಲಂದಣವಕ್ಕು
ಬಿದಿರೆ ಸತ್ತಿಗೆಯಕ್ಕು,
ಬಿದಿರಲೀ ಗುಡಿಯು ಗುಡಾರಂಗಳಕ್ಕು,
ಬಿದಿರಲೀ ಸಕಲಸಂಪದವೆಲ್ಲ!
ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ.
೧೫೩.
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ;
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ;
ಸಾವಾಗ ದೇಹವ ದೇಗುಲಕ್ಕೊಯ್ಯೆಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವ ?
೧೫೪.
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.
೧೫೫.
ಹತ್ತು ಮತ್ತರ ಭೂಮಿ,
ಬತ್ತುವ ಹಯನ, ನಂದಾದೀವಿಗೆಯ
ನಡೆಸಿಹೆನೆಂಬವರ ಮುಖವ ನೋಡಲಾಗದು!
ಅವರ ನುಡಿಯ ಕೇಳಲಾಗದು;
ಅಂಡಜ-ಸ್ವೇದಜ-ಉದ್ಬಿಜ-ಜರಾಯುಜವೆಂಬ
ಚತುರಶೀತಿ ಲಕ್ಷಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ ?!
ಒಡೆಯರಿಗೆ ಉಂಡೆಯ ಮುರಿದಿಕ್ಕಿದಂತೆ
"ಎನ್ನಿಂದಲೇ ಆಯಿತು, ಎನ್ನಿಂದಲೇ ಹೋಯಿತು"
ಎಂಬುವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಕೂಡಲಸಂಗಮದೇವ!
೧೫೬.
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ
ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ,
ಸರ್ವಜೀವದಯಾಪಾರಿಯೆಂದು
ಭೂತದಯಕಿಕ್ಕುವನ ಮನೆ ಸಯಿದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದರೆ
ತಾಯ ಹೆಸರಾಯಿತ್ತಲ್ಲದೆ ತಂದೆಯ ಹೆಸರಿಲ್ಲ
ಕೂಡಲಸಂಗಮದೇವ.
೧೫೭.
ಓಡಲಾರದ ಮೃಗವು
ಸೊಣಗಂಗೆ ಮಾಂಸವ ಕೊಡುವಂತೆ,
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ;
ಹಿರಿಯರು ನರಮಾಂಸವ ಭುಂಜಿಸುವರೆ ?!
ತನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವ.
೧೫೮.
ಬಂದುದ ಕೈಕೊಳಬಲ್ಲಡೆ ನೇಮ.
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ.
ನಡೆದು ತಪ್ಪದಿದ್ದರೆ ಅದು ನೇಮ.
ನುಡಿದು ಹುಸಿಯದಿದ್ದರೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದರೆ
ಒಡೆಯರಿಗೊಡವೆಯನೊಪ್ಪಿಸುವುದೇ ನೇಮ.
೧೫೯.
ಹಾಲ ನೇಮ, ಹಾಲ ಕೆನೆಯ ನೇಮ;
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ;
ಬೆಣ್ಣೆಯ ನೇಮ, ಬೆಲ್ಲದ ನೇಮ-
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದರ ಚನ್ನಯ್ಯ
೧೬೦.
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
೧೬೧.
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ!
ಮಾಡಿದೆನೆನ್ನದಿರಾ ಜಂಗಮಕ್ಕೆ!
ಮಾಡಿದೆನೆಂಬುದು ಮನದಲಿಲ್ಲದಿದ್ದರೆ
ಬೇಡಿದ್ದನೀವ ಕೂಡಲಸಂಗಮದೇವ!!
೧೬೨.
ಮಾಡುವಂತಿರಬೇಕು ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
೧೬೩.
ಭಕ್ತನು ಶಾಂತನಾಗಿರಬೇಕು.
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು.
ಭೂತಹಿತವಹ ವಚನವ ನುಡಿಯಬೇಕು.
ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು.
ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು.
ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು.
ಅಪಾತ್ರದಾನವಂ ಗೆಯ್ಯದಿರಬೇಕು.
ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು.
ಇದೇ ಮೊದಲಲ್ಲಿ ಬೇಹ ಶೌಚ ನೋಡಾ!
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ ಕೂಡಲಸಂಗಮದೇವ!
೧೬೪
ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.
೧೬೫.
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.
೧೬೬.
ಪುಣ್ಯಪಾಪಂಗಳೆಂಬವು
ತಮ್ಮಿಷ್ಟ ಕಂಡಿರೇ!
'ಅಯ್ಯ' ಎಂದರೆ ಸ್ವರ್ಗ,
'ಎಲವೋ' ಎಂದರೆ ನರಕ.
"ದೇವ, ಭಕ್ತ, ಜಯ, ಜೀಯ" ಎಂಬ
ನುಡಿಯೊಳಗೆ ಕೈಲಾಸವೈದುವುದು ಕೂಡಲಸಂಗಮದೇವ.
೧೬೭.
ಏನಿ ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು
ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ ?
೧೬೮.
ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬಂಜನವನೆಚ್ಚಿ ಕೊಂಬುದು ?
ಭಕ್ತನಾದವಂಗಿದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯ.
೧೬೯.
ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ!
ಮೃದುವಚನವೇ ಸಕಲ ತಪಂಗಳಯ್ಯ ?
ಸದುವಿನಯವೇ ಸದಾಶಿವನೊಲುಮೆಯಯ್ಯ!
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.
೧೭೦.
ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.
೧೭೧.
ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.
೧೭೨.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.
೧೭೩.
ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ--
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!
೧೭೪.
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.
೧೭೫.
ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.
೧೭೬.
ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.
೧೭೭.
ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.
೧೭೮.
ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ - ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.
೧೭೯.
ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?
೧೮೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.
೧೮೧.
ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲವಯ್ಯ.
ಎಂತೊ ಲಿಂಗ ತಂದೆ, ಎಂತಯ್ಯ ಎನ್ನ ಪೂರ್ವಲಿಖಿತ ?
ಬೆರಣಿಯನಾಯಲಲ್ಲದೆ
ಅಟ್ಟುಣ್ಣ ತೆರಹಿಲ್ಲೆನಗೆ!
ನೀ ಕರುಣಿಸು ಕೂಡಲಸಂಗಮದೇವ.
೧೮೨.
ಬೆಲ್ಲವ ತಿಂದ ಕೋಡಗದಂತೆ
ಸಿಹಿಯ ನೆನೆಯದಿರಾ ಮನವೆ!
ಕಬ್ಬ ತಿಂದ ನರಿಯಂತೆ
ಹಿಂದಕ್ಕೆಳಸದಿರಾ ಮನವೇ!
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸದಿರಾ ಮನವೇ!
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ!
೧೮೩.
ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ!
ಭವದ ಬಾಧೆಯ ತಪ್ಪಿಸಿಕೊಂಬಡೆ
ನೀನು ನಿಯತವಾಗಿ ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ.
೧೮೪.
ಕೋಟ್ಯನುಕೋಟಿ ಜಪವ ಮಾಡಿ
ಕೋಟಲೆಗೊಳ್ಳಲೆದೇಕೆ ಮನವೇ ?!
ಕಿಂಚಿತು ಗೀತ ಒಂದನಂತಕೋಟಿ ಜಪ!
ಜಪವೆಂಬುದೇಕೆ ಮನವೇ ?
ಕೂಡಲಸಂಗನ ಶರಣರ ಕಂಡು
ಆಡಿ, ಹಾಡಿ ಬದುಕು ಮನವೇ!
೧೮೫.
ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ!
ಮನವೇ, ಲಿಂಗವ ನಂಬು ಕಂಡಾ!
ಮನವೇ, ಜಂಗಮವ ನಂಬು ಕಂಡಾ!
ಮನವೇ, ಕೂಡಲಸಂಗಮದೇವರ
ಬಿಡದೆ ಬೆಂಬತ್ತು ಕಂಡಾ!
೧೮೬.
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ!
ನರಮಾನವರು ಕೊಡುವರೆಂಬವನ ಬಾಯಲ್ಲಿ
ಬಾಲಹುಳುಗಳು ಸುರಿಯವೆ ?
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ!
೧೮೭.
ಸುರರ ಬೇಡಿದರಿಲ್ಲ! ನರರ ಬೇಡಿದರಿಲ್ಲ!
ಬರಿದೆ ಧೃತಿಗೆಡಬೇಡ ಮನವೇ
ಆರನಾದರೆಯೂ ಬೇಡಿ ಬೇಡಿ
ಬರಿದೆ ಧೃತಿಗೆಡಬೇಡ ಮನವೇ!
ಕೂಡಲಸಂಗಮದೇವರನಲ್ಲದೆ ಆರ ಬೇಡಿದರಿಲ್ಲ ಮನವೇ!
೧೮೮.
ಹೃದಯದಿ ಕತ್ತರಿ, ತುದಿನಾಲಿಗೆ ಬೆಲ್ಲಂ ಭೋ!
ಆಡಿ ಏವೆಂ ಭೊ, ಹಾಡಿ ಏವೆಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿ ಏವೆಂ ಭೋ!
ಆನು ಎನ್ನಂತೆ, ಮನವು ಮನದಂತೆ!
ಕೂಡಲಸಂಗಮದೇವ ತಾನು ತನ್ನಂತೆ!
೧೮೯.
ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯ!
ಕೈ ಮುಟ್ಟಿ ಪೂಜಿಸುವಡೆನ್ನ ಕೈ ಶುದ್ಧವಲ್ಲಯ್ಯ!
ಮನ ಮುಟ್ಟಿ ಪೂಜಿಸುವಡೆನ್ನ ಮನ ಶುದ್ಧವಲ್ಲಯ್ಯ!
ಭಾವ ಶುದ್ಧವಾದರೆ
ಕೂಡಲಸಂಗಯ್ಯನಿತ್ತ ಬಾ ಎಂದೆತ್ತಿಕೊಳ್ಳನೇಕಯ್ಯ ?!
೧೯೦.
ಲಿಂಗದಲ್ಲಿ ಕಠಿಣವುಂಟೆ ?
ಜಂಗಮದಲ್ಲಿ ಕುಲವುಂಟೆ ?
ಪ್ರಸಾದದಲ್ಲಿ ಅರುಚಿಯುಂಟೆ ?
ಈ ತ್ರಿವಿಧದಲ್ಲಿ ಭಾವಭೇದವನರಸುವೆನು:
ಕೂಡಲಸಂಗಮದೇವಾ,
ಧಾರೆವಟ್ಟಲೆನ್ನ ಮನವು.
೧೯೧.
ಓತಿ ಬೇಲಿವರಿದಂತೆನ್ನ ಮನವಯ್ಯ,
ಹೊತ್ತಿಗೊಂದು ಪರಿಯಪ್ಪ
ಗೋಸುಂಬೆಯಂತೆನ್ನ ಮನವು.
ಬಾವಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ
ಕೂಡಲಸಂಗಮದೇವ.
೧೯೨.
ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ
ತೊಡೆಹದ ಕೆಲಸದ ಬಣ್ಣದಂತೆ!
ಕಡಿಹಕ್ಕೆ ಒರಗೆ ಬಾರದು ನೋಡಾ!
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ! ಕೂಡಲಸಂಗಮದೇವ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ!
೧೯೩.
ಏನನೋದಿ, ಏನ ಕೇಳಿ, ಏನ ಮಾಡಿಯೂ
ಫಲವೇನು ನಿನ್ನವರೊಲಿಯದನ್ನಕ ?
ಶಿವ ಶಿವ ಮಹಾದೇವ!
ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ
ಕೂಡಲಸಂಗಮದೇವ.
೧೯೪.
ಮುನ್ನೂರರವತ್ತು ದಿನ ಶರವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ
ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ?
ಕೊಡನ ತುಂಬಿದ ಹಾಲ ಕೆಡಹಿ
ಉಡುಗಲೆನ್ನಳವೆ ಕೂಡಲಸಂಗಮದೇವ.
೧೯೫.
ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ,
ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ,
ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ
ವಂಚನೆಯಿಲ್ಲದಂತೆ ಮಾಡಯ್ಯ.
೧೯೬.
ಅಂಕ ಕಳನೇರಿ ಕೈಮರೆದಿದ್ದರೆ
ಮಾರಂಕ ಬಂದಿರಿವುದು ಮಾಬನೆ ?
ನಿಮ್ಮ ನೆನವ ಮತಿ ಮರೆದಿದ್ದರೆ
ಪಾಪ ತನುವನಂಡಲೆವುದ ಮಾಬುದೆ ?
ಕೂಡಲಸಂಗಯ್ಯನ ನೆನೆದರೆ
ಪಾಪ ಉರಿಗೊಂಡಿದರಗಿನಂತೆ ಕರಗುವುದಯ್ಯ.
೧೯೭.
ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ!
ಕಾದಬೇಕು, ಕಾದುವರೆ ಮನವಿಲ್ಲ!
ಆಗಳೇ ಹೋಯಿತ್ತು ಬಿರುದು;
ಹಗರಣಿಗನಂತೆ ನಗೆಗೆಡೆಯಾಯಿತ್ತು!
ಮಾರಂಕ-ಜಂಗಮ ಮನೆಗೆ ಬಂದರೆ
ಕಾಣದಂತಡ್ಡ ಮುಸುಡಿಟ್ಟರೆ,
ಕೂಡಲಸಂಗಮದೇವ ಜಾಣ
ಮೂಗ ಕೊಯ್ವ ಹಲುದೋರಲು.
೧೯೮.
ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.
ಅರ್ಚನೆಯಳವಟ್ಟಿತ್ತು-ಪೂಜನೆಯಳವಟ್ಟಿತ್ತು.
ನಿತ್ಯಲಿಂಗಾರ್ಚನೆಯು ಮುನ್ನವೇ ಅಳವಟ್ಟಿತ್ತು!
ಕೂಡಲಸಂಗನ ಶರಣರು ಬಂದರೆ
ಏಗುವುದೇಬೇಸನೆಂಬುದೊಪ್ಪಚ್ಚಿಯಳವಡದು!!
೧೯೯.
ಹೊರಿಸಿಕೊಂಡು ಹೋದ ನಾಯಿ
ಮೊಲನನೇನ ಹಿಡಿವುದಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಹೇಳುವುದೇ ನಾಚಿಕೆ!
ಆನು ಭಕ್ತನೆಂತೆಂಬೆನಯ್ಯ
ಕೂಡಲಸಂಗಮದೇವ ?
೨೦೦.
ನೋಡುವರುಳ್ಳರೆ ಮಾಡುವೆ ದೇಹಾರವ,
ಎನಗೊಂದು ನಿಜವಿಲ್ಲ,
ಎನಗೊಂದು ನಿಷ್ಪತ್ತಿಯಿಲ್ಲ;
ಲಿಂಗವ ತೋರಿ ಉದರವ ಹೊರೆವ
ಭಂಗಗಾರ ನಾನು ಕೂಡಲಸಂಗಮದೇವ.

No comments:

Post a Comment